ಜೈಪುರ: 17ನೇ ಆವೃತ್ತಿಯ ಐಪಿಎಲ್ನಲ್ಲಿ ಆಲ್ರೌಂಡ್ ಪ್ರದರ್ಶನದ ಫಲವಾಗಿ ರಾಜಸ್ಥಾನ ರಾಯಲ್ಸ್ ತಂಡವು ಉತ್ತಮ ಪ್ರದರ್ಶನ ನೀಡುತ್ತಿದ್ದು, ಪ್ಲೇಆಫ್ ಟಿಕೆಟ್ಅನ್ನು ಬಹತೇಕ ಖಚಿತಪಡಿಸಿಕೊಂಡಿದೆ. ಇನ್ನು ರಾಜಸ್ಥಾನ ರಾಯಲ್ಸ್ ಪರ ಬ್ಯಾಟ್ಸ್ಮನ್ಗಳು ಮಾತ್ರವಲ್ಲದೇ ಬೌಲರ್ಗಳು ವಿಶೇಷ ಪ್ರದರ್ಶನ ನೀಡುತ್ತಿದ್ದು, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.
ಬೌಲರ್ಗಳ ವಿಷಯಕ್ಕೆ ಬರುವುದಾದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ಆಟಗಾರ ಯಜುವೇಂದ್ರ ಚಹಲ್ ಕಳೆದ ಎರಡು ಆವೃತ್ತಿಗಳಿಂದ ರಾಜಸ್ಥಾನ ರಾಯಲ್ಸ್ ಪರ ಆಡುತ್ತಿದ್ದು, ಉತ್ತಮ ಪ್ರದರ್ಶನದ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಏಪ್ರಿಲ್ 22ರಂದು ಮುಂಬೈ ವಿರುದ್ಧ ನಡೆದ ಪಂದ್ಯದಲ್ಲಿ 200 ವಿಕೆಟ್ಗಳ ಸಾಧನೆ ಮಾಡಿದ ಚಹಲ್ಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದ್ದು, ಹಲವರು ಆರ್ಸಿಬಿಯ ನಡೆಗೆ ಕಿಡಿಕಾರಿದ್ದಾರೆ.
2022ರಲ್ಲಿ ನಡೆದ ಐಪಿಎಲ್ ಮಿನಿ ಹರಾಜು ಸಮಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚಹಲ್ರನ್ನು ರಿಟೇನ್ ಮಾಡುದ ಕಾರಣ ಅವರು ರಾಜಸ್ಥಾನ ರಾಯಲ್ಗೆ ಮಾರಾಟವಾಗಿದ್ದರು. ಈ ವಿಚಾರ ಕ್ರೀಡಾ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು ಮತ್ತು ಇದಕ್ಕೆ ಸಂಬಂಧಿಸಿದಂತೆ ಆರ್ಸಿಬಿ ಮ್ಯಾನೇಜ್ಮೆಂಟ್ ಸಹ ಉತ್ತರ ನೀಡುವ ಗೋಜಿಗೆ ಹೋಗಿರಲಿಲ್ಲ. ಇದೀಗ ಇದಕ್ಕೆ ಸಂಬಂಧಿಸಿದಂತೆ ಆರ್ಸಿಬಿ ತಂಡದ ಮಾಜಿ ಮೆಂಟರ್ ಮೈಕ್ ಹೆಸ್ಸನ್ ಇದಕ್ಕೆಲ್ಲಾ ಉತ್ತರ ನೀಡಿದ್ದು, ಎರಡು ವರ್ಷಗಳ ಹಿಂದಿನ ವಿವಾದಕ್ಕೆ ತೆರೆ ಎಳೆದಿದ್ದಾರೆ.
ಇದನ್ನೂ ಓದಿ: ಈತ ಯಾವುದಕ್ಕೂ ಪ್ರಯೋಜನವಿಲ್ಲದವ; ಸ್ಟಾರ್ ಆಟಗಾರನ ಬಗ್ಗೆ ಸೆಹ್ವಾಗ್ ಹೀಗಂದಿದ್ಯಾಕೆ?
2022ರಲ್ಲಿ ಚಹಲ್ ಅವರನ್ನು ತಂಡದಲ್ಲಿ ಉಳಿಸಿಕೊಂಡಿದ್ದರೆ ಆರ್ಸಿಬಿ ಮ್ಯಾನೇಜ್ಮೆಂಟ್ಗೆ ಅದು ಹೆಚ್ಚುವರಿ ಹಣಕಾಸಿನ ಸಮಸ್ಯೆಯಾಗುತ್ತಿತ್ತು. ನಾವು ಹರಾಜಿನಲ್ಲಿ ಚಹಲ್ ಹಾಗೂ ಹರ್ಷಲ್ರನ್ನು ತಂಡಕ್ಕೆ ವಾಪಸ್ ಕರೆತರಬೇಕೆಂದು ಅಂದುಕೊಂಡಿದ್ದೆವು. ಅಂತಿಮವಾಗಿ ನಾವು ಚಹಲ್ರನ್ನು ತಂಡದಲ್ಲಿ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಏಕೆಂದರೆ ಇದು ನಮಗೆ ಹೆಚ್ಚುವರಿ ನಾಲ್ಕು ಕೋಟಿ ರೂಪಾಯಿಗಳನ್ನು ಖರ್ಚು ಮಾಡಲು ಅವಕಾಶ ನೀಡಿತ್ತು. ಆದರೆ, ಅಂತಿಮವಾಗಿ ನಾವು ಹರ್ಷಲ್ರನ್ನು ರಿಟೇನ್ ಮಾಡಬೇಕಾಯಿತು ಎಂದು ಹೇಳಿದ್ದಾರೆ.
ಇದಲ್ಲದೆ ಹರಾಜಿನ ವೇಳೆ ಅಚಾತುರ್ಯ ಒಂದು ನಡೆದು ಹೋಯಿತು ಹಸರಂಗಾ ಅವರ ಹೆಸರು ಮೊದಲು ಕಾಣಿಸಿಕೊಂಡ ಪರಿಣಾಮ ನಾವು ಅವರಿಗೆ ಬಿಡ್ ಸಲ್ಲಿಸಿದ್ದೆವು. ಆದರೆ, ನಂತರ ಚಹಲ್ ಹೆಸರು ಕಾಣಿಸಿಕೊಂಡ ಪರಿಣಾಮ ನಾವು ಬಿಡ್ ಸಲ್ಲಿಸಲು ಸಾಧ್ಯವಾಗಲಿಲ್ಲ. ಚಹಲ್ ನನ್ನ ವೃತ್ತಿಜೀವನದಲ್ಲಿ ನಾ ಕಂಡಂತಹ ಒಬ್ಬ ಅದ್ಭುತ ಸ್ಪಿನ್ನರ್. ಆದರೆ, ನನಗೆ ಈಗಲೂ ಕಾಡುತ್ತಿರುವ ನೋವೇನೆಂದರೆ ಚಹಲ್ರನ್ನು ರಿಟೇನ್ ಮಾಡದಿರುವುದು ಎಂದು ಮೈಕ್ ಹೆಸ್ಸನ್ ಹೇಳಿದ್ದಾರೆ.