ಮಂಗಳೂರು: ಆಕ್ಸಿಜನ್ ಹಣ ಕೊಟ್ಟು ಖರೀದಿಸುವ ಕಾಲ ಬಂದಿದೆ. ಮರ ಗಿಡಗಳನ್ನು ನಾಶ ಮಾಡುವ ಮಂದಿಗೆ ಇದು ಪಾಠ. ಈ ನಡುವೆಯೂ ಪರಿಸರ ಪ್ರೀತಿ ಹೊಂದಿರುವವರು ನಮ್ಮ ನಡುವೆ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಲಾಕ್ಡೌನ್ನಂತಹ ಕಷ್ಟದ ದಿನಗಳಲ್ಲೂ ಪರಿಸರ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವುದು ಇದಕ್ಕೆ ಸಾಕ್ಷಿ.
ಮಂಗಳೂರಿನ ಮೇರಿಹಿಲ್ ಹೆಲಿಪ್ಯಾಡ್ನ ಜೋಗರ್ಸ್ ಪಾರ್ಕ್ಗೆ ಹಲವಾರು ಮಂದಿ ಬೆಳಗ್ಗೆ ಹಾಗೂ ಸಂಜೆ ಭೇಟಿ ನೀಡುತ್ತಾರೆ. ಈ ಪೈಕಿ ಕೆಲ ಪರಿಸರ ಪ್ರೇಮಿಗಳು ಮನೆಯಿಂದ ಕ್ಯಾನ್ಗಳಲ್ಲಿ ನೀರು ತಂದು ಇಲ್ಲಿನ ಮರ, ಗಿಡಗಳಿಗೆ ಉಣಿಸುತ್ತಿದ್ದಾರೆ.
ಮಂಗಳೂರು ನಗರ ಅಪರಾಧ ಪತ್ತೆದಳ ಹೆಡ್ಕಾನ್ಸ್ಟೇಬಲ್ ಹರೀಶ್ ಪದವಿನಂಗಡಿ ನೇತೃತ್ವದಲ್ಲಿ ಇಲ್ಲಿ ಹಸಿರು ಪರಿಸರವನ್ನು ಕಾಯ್ದುಕೊಳ್ಳಲಾಗುತ್ತಿದೆ. ಜೋಗರ್ಸ್ ಪಾರ್ಕ್ ಎಂದು ಹೆಸರಿಟ್ಟು ನೇರಳೆ, ಪೇರಳೆ, ಹುಣಸೆಹುಳಿ, ಹೊಂಗೆ, ಮರುವ, ಕಹಿಬೇವು, ತೆಂಗಿನ ಗಿಡಗಳನ್ನು ನೆಡಲಾಗಿದೆ. ಹೆಚ್ಚು ಬಿಸಿಲು ಬೀಳುವ ಜಾಗವಾದ ಕಾರಣ ಬೇಸಿಗೆಯಲ್ಲಿ ಗಿಡಗಳು ಒಣಗಿ ಹೋಗದಂತೆ ನೀರು ಹಾಕಲಾಗುತ್ತಿದೆ.
ಬೆಳೆದು ನಿಂತ ಮರಗಳಿಗೆ ಕಟ್ಟೆ ಕಟ್ಟಲಾಗಿದೆ. ಇವುಗಳ ಬುಡದಲ್ಲಿ ತುಳಸಿ, ಹೂವಿನ ಗಿಡ ನೆಡಲಾಗಿದೆ. ಕೆಲವು ಬಾರಿ ಕಿಡಿಗೇಡಿಗಳು ಗಿಡಗಳನ್ನು ಮುರಿದು ಹಾಕುವ, ತ್ಯಾಜ್ಯ ಎಸೆದು ಹೋಗುವ ಘಟನೆಗಳೂ ನಡೆಯುತ್ತಿವೆ.
ನಾವೆಲ್ಲ ಭೂಮಿಯ ಮೇಲೆ ವಾಸ ಮಾಡುತ್ತಿದ್ದೇವೆ. ಪರಿಸರದ ಗಾಳಿ ಇದ್ದರಷ್ಟೇ ಉಸಿರಾಡಲು ಸಾಧ್ಯವಿದೆ. ನಾವು ಪರಿಸರಕ್ಕೆ ಏನು ಕೊಡುತ್ತಿದ್ದೇವೆ ಎನ್ನುವುದನ್ನು ಪ್ರತಿಯೊಬ್ಬರೂ ಚಿಂತನೆ ಮಾಡಬೇಕು.ಪ್ರತಿ ದಿನ 10 ಲೀ. ನೀರು ಕೊಂಡೊಯ್ದು ಗಿಡ, ಮರಗಳಿಗೆ ಹಾಕುತ್ತಿದ್ದೇನೆ. ನನ್ನಂತೆ ಹಲವು ಮಂದಿ ಸದಸ್ಯರು ನೀರು ತಂದು ಹಾಕುತ್ತಿದ್ದಾರೆ.
ನಾಗೇಶ್ ರಾವ್ ಕಲ್ಯಾಣಪುರ
ನಿವೃತ್ತ ಜಂಟಿ ಆಯುಕ್ತ ವಾಣಿಜ್ಯ ತೆರಿಗೆ ಇಲಾಖೆ