ಕಾರವಾರ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ನೀರಿನ ಸಮಸ್ಯೆ (ವಾಟರ್ ಪ್ರಾಬ್ಲಂ) ಉಲ್ಬಣಿಸುತ್ತಲೇ ಇದೆ. ಟ್ಯಾಂಕರ್ಗಳ ಮೂಲಕ ನೀರೊದಗಿಸಲಾಗುತ್ತಿದ್ದರೂ ನಾಲ್ಕೈದು ಕೊಡ ನೀರಿಗಾಗಿ ಜನ ದಿನಗಟ್ಟಲೇ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸದ್ಯ ಜಿಲ್ಲೆಯ 101 ಗ್ರಾಮಗಳಲ್ಲಿ ನೀರಿನ ತೀವ್ರ ಅಭಾವ ಕಂಡುಬಂದಿದ್ದು, 122 ಟ್ಯಾಂಕರ್ಗಳ ಮೂಲಕ 272 ಟ್ರಿಪ್ಗಳಲ್ಲಿ ನೀರು ವಿತರಿಸಲಾಗುತ್ತಿದೆ.
ಮಾತ್ರವಲ್ಲ ಮುಂಡಗೋಡಿನ 22 ಹಾಗೂ ಯಲ್ಲಾಪುರದ 1 ಸೇರಿ ಒಟ್ಟು 23 ಖಾಸಗಿ ಬೋರ್ವೆಲ್ಗಳನ್ನು ಸ್ವಾಧೀನ ಮಾಡಿಕೊಂಡು ನೀರು ಪೂರೈಸಲಾಗುತ್ತಿದೆ ಎಂದು ಜಿಪಂ ವರದಿ ತಿಳಿಸಿದೆ.
ಇದನ್ನೂ ಓದಿ:ಬಾಗಿಲು ಮುಚ್ಚಿದ 115 ಆರ್ಒ ಘಟಕಗಳು ನಾಣ್ಯ ನುಂಗಿದರೂ ನೀರು ಬಾರದು
ಅಂಕೋಲಾದ 19, ಭಟ್ಕಳದ-14, ಹೊನ್ನಾವರದ-22, ಕಾರವಾರದ-9, ಕುಮಟಾದ-26, ಮುಂಡಗೋಡ, ಶಿರಸಿಯ ತಲಾ-3, ಸಿದ್ದಾಪುರ, ಜೊಯಿಡಾ ಹಾಗೂ ಯಲ್ಲಾಪುರದ ತಲಾ-2, ಯಲ್ಲಾಪುರದ-1 ಗ್ರಾಮಗಳಲ್ಲಿ ಕುಡಿಯುವ ನೀರಿಗೆ ತೀವ್ರ ತುಟಾಗ್ರತೆ ಉಂಟಾಗಿದೆ.
ನೀರಿಗಾಗಿ ಕಾದು ನಿಂತ ಕೊಡಗಳು
ಅಂಕೋಲಾ ತಾಲೂಕಿನ ಬೆಳಸೆ ಗ್ರಾಮದ ಶಿರೂರಿನಲ್ಲಿ ಸುಮಾರು 40 ಮನೆಗಳಿದ್ದು, ಬಾವಿಗಳು ಬತ್ತಿವೆ. ಗ್ರಾಪಂ ಕುಡಿಯುವ ನೀರಿನ ಯೋಜನೆಯ ನೀರಿನ ಮೂಲವೂ ಬಂದಾಗಿದೆ. ಗ್ರಾಪಂನಿಂದ ಮನೆಗೆ 5 ಕೊಡ ನೀರು ಕುಡಿಯಲು ನೀಡಲಾಗುತ್ತಿದೆ.
ಆದರೆ, ನೀರಿಗಾಗಿ ಇಡೀ ದಿನ ಹೆದ್ದಾರಿಯಲ್ಲಿ ಕಾಯಬೇಕಿದೆ ಎನ್ನುತ್ತಾರೆ ಗ್ರಾಮದ ಮಾದೇವಿ ಗೌಡ.
`ನಾವು ಕೂಲಿ ಮಾಡಿ ಇಲ್ಲವೇ ಮಾವಿನ ಹಣ್ಣು ಮಾರಿ ಜೀವನ ಮಾಡುವವರು. ಇಡೀ ದಿನ ನೀರಿಗಾಗಿ ಕಾದರೆ ಸಮಸ್ಯೆ. ಐದು ಕೊಡ ನೀರಿನಲ್ಲಿ ಒಂದು ದಿನ ಕಳೆಯುವುದು ಕಷ್ಟ. ಎರಡು ದಿನ ಬೆಳಗ್ಗೆ ನೀರಿನ ಟ್ಯಾಂಕ್ ಬಂದಿತ್ತು. ಬುಧವಾರ ಇದುವರೆಗೂ ಬಂದಿಲ್ಲ’ ಎಂದು ತಮ್ಮ ಸಮಸ್ಯೆ ಹೇಳಿಕೊಂಡರು. ಇದು ಜಿಲ್ಲೆಯ ಇತರ ಹಲವು ಗ್ರಾಮಗಳ ಪರಿಸ್ಥಿತಿಯಾಗಿದೆ.
ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಗ್ರಾಪಂ ಪಿಡಿಒಗಳಿಗೆ ಸೂಚಿಸಲಾಗಿದೆ. ಖಾಸಗಿ ಬೋರ್ವೆಲ್ಗಳನ್ನು ಸ್ವಾಧೀನ ಮಾಡಿಕೊಂಡು ನೀರೊದಗಿಸಲಾಗುತ್ತಿದೆ. ಟ್ಯಾಂಕರ್ ಮೂಲಕ ನೀರು ಪೂರೈಕೆಗೂ ಕ್ರಮ ವಹಿಸಲಾಗಿದೆ.
ಈಶ್ವರ ಕುಮಾರ ಕಾಂದೂ
ಉಕ ಜಿಪಂ ಸಿಇಒ
…….