| ದೇವರಾಜ್ ಎಲ್. ಬೆಂಗಳೂರು
ಶಾಲೆಗಳ ಬಂದ್ ಆಗಿರುವುದರಿಂದ ಮನೆಯಲ್ಲಿ ಹೆಚ್ಚಾಗಿ ಕಾಲ ಕಳೆಯುತ್ತಿರುವ ಮಕ್ಕಳು ಮಾನಸಿಕ ಖಿನ್ನತೆಗೆ ಒಳಗಾಗುತ್ತಿರುವ ಪ್ರಕರಣಗಳು ವರದಿಯಾದ ಬೆನ್ನಲ್ಲೇ, ಆನ್ಲೈನ್ ಪಾಠದ ನೆಪದಲ್ಲಿ ಮೊಬೈಲ್ ಹಾಗೂ ಲ್ಯಾಪ್ಟಾಪ್ಗಳಲ್ಲಿ ಅಶ್ಲೀಲ ವಿಡಿಯೋಗಳನ್ನು ನೋಡುತ್ತಿರುವ ವಿಚಾರ ಬಹಿರಂಗವಾಗಿರುವುದು ಪಾಲಕರನ್ನು ಇನ್ನಷ್ಟು ಚಿಂತೆಗೀಡು ಮಾಡಿದೆ.
ಶಾಲೆಗಳ ಆರಂಭ ಅನಿಶ್ಚಿತತೆಯಿಂದ ಕೂಡಿರುವುದರಿಂದ ಖಾಸಗಿ ಶಾಲೆಗಳು ಆನ್ಲೈನ್ ಶಿಕ್ಷಣ ಆರಂಭಿಸಿವೆ. ಆದರೆ ವಿದ್ಯಾರ್ಥಿಗಳು ಕ್ಲಾಸ್ ನೆಪದಲ್ಲಿ ಜಾಲತಾಣಗಳಲ್ಲಿ ಬರುವ ಸೆಕ್ಸ್ ವೀಡಿಯೋಗಳನ್ನು ನೋಡುವ ಚಟಕ್ಕೆ ಬೀಳುತ್ತಿರುವ ಪ್ರಕರಣಗಳು ಹೆಚ್ಚು ವರದಿಯಾಗುತ್ತಿವೆ. ಮಕ್ಕಳು ಬಳಕೆ ಮಾಡಿರುವ ಮೊಬೈಲ್ ಫೋನ್ಗಳಲ್ಲಿನ ಬ್ರೋಸರ್ ಹಿಸ್ಟರಿ ಪರಿಶೀಲಿಸಿದಾಗಿ ಈ ವಿಚಾರ ಗಮನಕ್ಕೆ ಬಂದಿದೆ.
ಆನ್ಲೈನ್ ಕ್ಲಾಸ್ ನೆಪದಲ್ಲಿ ಮಕ್ಕಳು ಫೋನ್ಗಳನ್ನು ಪಡೆದು ಕ್ಲಾಸ್ ಮುಗಿದ ಬಳಿಕ ಗೇಮ್್ಸ ಆಡುತ್ತಿದ್ದರು. ಆದರೆ ಇದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿರುವ 8ರಿಂದ 12ನೇ ತರಗತಿಗಳ ವಿದ್ಯಾರ್ಥಿಗಳು ಅಶ್ಲೀಲ ವೀಡಿಯೋ ಅಪ್ಲೋಡ್ ಆಗಿರುವ ವೆಬ್ಸೈಟ್ಗೆ ಭೇಟಿ ನೀಡುತ್ತಿದ್ದಾರೆ. ಈ ವಿಚಾರವಾಗಿ ನೇರವಾಗಿ ಮಕ್ಕಳ ಎದುರು ಪ್ರಶ್ನಿಸಲು ಮುಜುಗರ ಪಟ್ಟಿಕೊಳ್ಳುವ ಪಾಲಕರು, ಮಕ್ಕಳನ್ನು ಈ ಚಟದಿಂದ ಹೊರತರಲು ಮಕ್ಕಳ ಸಹಾಯವಾಣಿ ಹಾಗೂ ಮಕ್ಕಳ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಮಕ್ಕಳ ಹಕ್ಕುಗಳ ಸಂಸ್ಥೆಗಳಿಗೆ ಮೊರೆ ಹೋಗುತ್ತಿದ್ದಾರೆ. ಮೊದಲಿಗೆ ಗೇಮ್ಸ್ಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳುತ್ತಿದ್ದ ಮಕ್ಕಳು ಅಲ್ಲಿ ಅರೆ ಬರೆ ಬಟ್ಟೆ ಹಾಕಿರುವ ಕಾರ್ಟೂನ್ಗಳನ್ನು ನೋಡಿ ಸೆಕ್ಸ್ ಎಂಬ ಸಾಧಾರಣ ವಿಷಯವನ್ನು ಹೆಚ್ಚು ಸರ್ಚ್ ಮಾಡುತ್ತಿದ್ದಾರೆ.
ಮಕ್ಕಳು ಪೋರ್ನ್ ವೆಬ್ಸೈಟ್ ನೋಡುತ್ತಿರುವ ಬಗ್ಗೆ ಪ್ರತಿನಿತ್ಯ ಪಾಲಕರಿಂದ ದೂರುಗಳು ಬರುತ್ತಿವೆ. ನಾವು ಆಪ್ತ ಸಮಾಲೋಚನೆ ನೀಡಲು ವ್ಯವಸ್ಥೆ ಕಲ್ಲಿಸುತ್ತಿದ್ದೇವೆ. | ನಾಗಸಿಂಹ ಜಿ.ರಾವ್ ನಿರ್ದೇಶಕರು, ಮಕ್ಕಳ ಹಕ್ಕುಗಳ ಸಂಸ್ಥೆ
ಪಾಲಕರು ಏನು ಮಾಡಬೇಕು
- ಹೆಚ್ಚಿನ ಸಮಯ ಮೊಬೈಲ್ ಫೋನ್ ನೀಡಬಾರದು
- ಏನೇನು ನೋಡುತ್ತಿದ್ದಾರೆಂದು ಅವಾಗಾವಾಗ ಪರಿಶೀಲಿಸಬೇಕು
- ಮಕ್ಕಳಿಗೆ ವಯಸ್ಸಿನ ಅನುಗುಣವಾಗಿ ಲೈಂಗಿಕ ವಿಚಾರವನ್ನು ತಿಳಿಸಬೇಕು
- ಪೋರ್ನ್ವೆಬ್ಸೈಟ್ಗಳನ್ನು ತಡೆಹಿಡಿಯುವ ಫೈರ್ವಾಲ್ ಇರುವ ಬ್ರೋಸರ್ ಬಳಕೆ ಮಾಡಬೇಕು
- ಆಪ್ತ ಸಮಾಲೋಚನೆ ಕೊಡಿಸಬೇಕು
ನಮ್ಮ ಮನೆಯಲ್ಲಿ ನಾನು ನನ್ನ ಪತಿ ಇಬ್ಬರೂ ಕೆಲಸಕ್ಕೆ ಹೋಗುತ್ತೇವೆ. ಮಗನಿಗೆ ಆನ್ಲೈನ್ ಕ್ಲಾಸ್ಗಾಗಿ ಪ್ರತ್ಯೇಕ ಫೋನ್ ಖರೀದಿಸಿ ನೀಡಿದ್ದೇವೆ. ಇಂಟರ್ನೆಟ್ ಪ್ಯಾಕೇಜ್ ಇರುವುದರಿಂದ ಆನ್ಲೈನ್ ಕ್ಲಾಸ್ ಮುಗಿದ ಬಳಿಕ ಕೆಲವು ಕೆಟ್ಟ ವೆಬ್ಸೈಟ್ಗಳನ್ನು ನೋಡಿರುವುದು ಬ್ರೌಸಿಂಗ್ ಹಿಸ್ಟರಿಯಿಂದ ತಿಳಿದು ಬಂದಿದೆ. ಇದೀಗ ಆಪ್ತಸಮಾಲೋಚನೆ ಕೊಡಿಸಲು ನಿರ್ಧರಿಸಿದ್ದೇವೆ. ಪವಿತ್ರಾ ಪಾಲಕಿ
ಶೀಘ್ರ ಶಾಲೆ ಆರಂಭದ ಸ್ಪಷ್ಟ ನಿರ್ಧಾರ
ಬೆಂಗಳೂರು: ರಾಜ್ಯದಲ್ಲಿ ಶಾಲೆ ಮತ್ತು ಪಿಯು ಕಾಲೇಜು ಪ್ರಾರಂಭಿಸುವ ಕುರಿತು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ನೇತೃತ್ವದಲ್ಲಿ ವಿವಿಧ ಇಲಾಖಾ ಅಧಿಕಾರಿಗಳ ಜತೆ ಮೊದಲ ಸಭೆ ನಡೆದಿದ್ದು, ನಾಲ್ಕೈದು ದಿನದಲ್ಲಿ ಸ್ಪಷ್ಟ ನಿರ್ಧಾರ ಹೊರಬೀಳಲಿದೆ. ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ (ಎಸ್ಡಿಎಂಸಿ), ವಿವಿಧ ಇಲಾಖೆ ಹಾಗೂ ಖಾಸಗಿ ಶಾಲಾಡಳಿತ ಮಂಡಳಿಗಳ ಅಭಿಪ್ರಾಯ ಸಂಗ್ರಹಿಸಿ, ವರದಿಯನ್ನು ಮುಖ್ಯಮಂತ್ರಿಗೆ ಸಲ್ಲಿಸಿ, ನಾಲ್ಕೈದು ದಿನದಲ್ಲಿ ಈ ಬಗ್ಗೆ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲು ಸಚಿವರು ನಿರ್ಧರಿಸಿದ್ದಾರೆ. ಬುಧವಾರ ಶಾಲೆ ಆರಂಭ ಕುರಿತು ಆರೋಗ್ಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿ (ಎಸ್ಡಿಎಂಸಿ)ಗಳ ಜತೆಗೆ ಸಚಿವರು ಸಭೆ ನಡೆಸಿದರು.
ಆಯುಕ್ತರಿಗೆ ಸೂಚನೆ: ಶಾಲಾರಂಭಕ್ಕೆ ಸಂಬಂಧಿಸಿದಂತೆ ಸ್ಥಳೀಯವಾಗಿ ಪರಿಸ್ಥಿತಿ ಹೇಗಿದೆ? ಮತ್ತು ಇಲಾಖಾವಾರು ಅಧಿಕಾರಿಗಳ ಅಭಿಪ್ರಾಯ ಏನು? ಎಂಬುದನ್ನು ಸಂಗ್ರಹಿಸಲು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಹೊಣೆ ನೀಡಲಾಗಿದೆ.
ನೀತಿ ಸಂಹಿತೆ ಕಳೆದ ಬಳಿಕ ವರ್ಗಾವಣೆ: ಚುನಾವಣೆ ನೀತಿ ಸಂಹಿತೆ ಹಾಗೂ ವಿವಿಧ ಕಾರಣಕ್ಕೆ ಶಿಕ್ಷಕರ ವರ್ಗಾವಣೆ ವಿಳಂಬವಾಗುತ್ತಿದೆ. ಉಪಚುನಾವಣೆ ಸಂಬಂಧ ಜಾರಿಯಲ್ಲಿರುವ ನೀತಿ ಸಂಹಿತೆ ಮುಗಿದ ತಕ್ಷಣವೇ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯನ್ನು ಆರಂಭಿಸಲಿದ್ದೇವೆ ಎಂದು ಸಚಿವ ಎಸ್.ಸುರೇಶ್ ಕುಮಾರ್ ಹೇಳಿದ್ದಾರೆ.
ಈ ವರ್ಷ ಶಾಲೆಗಳನ್ನು ತೆರೆಯುವುದು ಬೇಡ. ಇದು ಸರ್ಕಾರಕ್ಕೆ ನನ್ನ ವೈಯಕ್ತಿಕ ಸಲಹೆ. ಆನ್ಲೈನ್ ಕ್ಲಾಸ್ ಮಾಡಿ ಎಲ್ಲರನ್ನೂ ಪಾಸ್ ಮಾಡಲಿ. ಕರೊನಾ ಸಂಪೂರ್ಣ ಮುಕ್ತವಾದ ನಂತರ ಶಾಲೆ ಆರಂಭಿಸಬೇಕು. ತರಾತುರಿಯಲ್ಲಿ ತೆರೆಯುವುದು ಬೇಡ. | ಸಿದ್ದರಾಮಯ್ಯ ಪ್ರತಿಪಕ್ಷ ನಾಯಕ