ಹಾಸನ: ಆರೋಪಿ ಶಾರಿಕ್ ಇಸ್ಲಾಮಿಕ್ ಸ್ಟೇಟ್ಸ್ ಮಾದರಿಯಲ್ಲೇ ಕುಕ್ಕರ್ ಬಾಂಬ್ ಹಿಡಿದು ನಿಂತ ಫೋಟೊ ಒಂದು ವೈರಲ್ ಆಗಿತ್ತು. ಶಾರೀಕ್ ಕೈಯಲ್ಲಿದ್ದ ಬಾಂಬ್ಗೆ ಇಡೀ ಬಸ್ ಸ್ಫೋಟ ಮಾಡುವ ಸಾಮರ್ಥ್ಯ ಇತ್ತು ಎನ್ನುವ ಮಾಹಿತಿ ತನಿಖಾ ಸಂಸ್ಥೆಗಳು ನಿಡಿದ್ದವು. ಮಂಗಳೂರಿನಲ್ಲಿ ಬಾಂಬ್ ಅನ್ನು ಬೇರೆ ಜಾಗದಲ್ಲಿ ಪ್ಲಾಂಟ್ ಮಾಡಲು ರಿಕ್ಷಾದಲ್ಲಿ ಶಾರಿಕ್ ಸ್ಫೋಟಕ ತೆಗೆದುಕೊಂಡು ಹೋಗುತ್ತಿದ್ದ. ಆದರೆ ಅದು ರಿಕ್ಷಾ ಒಳಗಡೆಯೆ ಸ್ಫೋಟವಾಗಿ ರಿಕ್ಷಾ ಚಾಲಕ ಮತ್ತು ಉಗ್ರ ಇಬ್ಬರೂ ಗಾಯಗೊಂಡಿದ್ದರು.
ಈಗ ಇನ್ನೊಂದು ಸ್ಫೋಟಕ ಮಾಹಿತಿ ಹೊರ ಬಿದ್ದಿದ್ದು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ‘ಸಿಎಂ ಬರುವ ದಿನವೇ ಬ್ಲಾಸ್ಟ್ ಮಾಡಬೇಕೆಂದು ಪ್ಲಾನ್ ಆಗಿತ್ತು ಎನ್ನುವ ಮಾಹಿತಿಯನ್ನು ಹೊರ ಹಾಕಿದ್ದಾರೆ.
ಘಟನೆ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಕೆ.ಗೋಪಾಲಯ್ಯ ‘ದೇವರ ದಯೆಯಿಂದ ಈ ಘಟನೆ ತಕ್ಷಣ ಪತ್ತೆಯಾಯಿತು.ಇಲ್ಲವಾದರೆ ದೊಡ್ಡ ಅಪಘಾತ ಆಗುತ್ತಿತ್ತು. ಸಿಎಂ ಬರುವ ದಿನವೇ ಬ್ಲಾಸ್ಟ್ ಮಾಡಬೇಕೆಂದು ಪ್ಲಾನ್ ಆಗಿತ್ತು ಎನ್ನುವ ವಿಚಾರ ನಮ್ಮೆಲ್ಲರಿಗೂ ಆಘಾತ ತಂದಿದೆ’ ಎಂದು ಆತಂಕ ವ್ಯಕ್ತಪಡಿಸಿದರು.
‘ಘಟನೆ ಬಗ್ಗೆ ತಳಮಟ್ಟದಿಂದ ತನಿಖೆ ಆಗುತ್ತಿದ್ದು ಇದರಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆ, ಉಗ್ರನಿಗೆ ಯಾರು ಆಶ್ರಯ ಕೊಟ್ಟಿದ್ದು ಎಲ್ಲವನ್ನು ಪೊಲೀಸರು ಭೇದಿಸಲಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು ಘಟನೆಯ ಹಿಂದೆ ಯಾವ ಸಂಸ್ಥೆ ಇದೆ ಎಂದು ಪತ್ತೆ ಹಚ್ಚಲಿದ್ದಾರೆ. ನಂತರ ಅದನ್ನು ಮಟ್ಟಹಾಕುವ ಕೆಲಸ ಕೂಡ ಆಗಲಿದೆ’ ಎಂದು ಸಚಿವರು ಮಾಹಿತಿ ನೀಡಿದರು.