ಬೋರಗಾಂವ : ಜಾರ್ಖಂಡ್ನ ಧನಬಾಜ ಸೆಕ್ಟರ್ನಲ್ಲಿ ಏ.14 ರಂದು ಅನಾರೋಗ್ಯದಿಂದ ನಿಧನರಾಗಿದ್ದ ಯೋಧ ಸಚಿನ ಮಾಯಗೊಂಡ ಪಾಟೀಲ (30) ಅವರ ಅಂತ್ಯಕ್ರಿಯೆ ಬೋರಗಾಂವ ಪಟ್ಟಣದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಭಾನುವಾರ ಜರುಗಿತು.
ಯೋಧನ ಪಾರ್ಥಿವ ಶರೀರ ಗುರುವಾರ ಅಥವಾ ಶುಕ್ರವಾರ ಸ್ವಗ್ರಾಮಕ್ಕೆ ಆಗಮಿಸಬೇಕಾಗಿತ್ತು. ಆದರೆ, ಲಾಕ್ಡೌನ್ ಹಿನ್ನೆಲೆಯಲ್ಲಿ ವಿಮಾನ ಸೇವೆ ಮತ್ತು ರೈಲು ಸೇವೆ ರದ್ದಾಗಿದ್ದರಿಂದ ರಸ್ತೆ ಮೂಲಕ ಪಾರ್ಥಿವ ಶರೀರವನ್ನು ಭಾನುವಾರ ಬೋರಗಾಂವ ಪಟ್ಟಣಕ್ಕೆ ತರಲಾಯಿತು. ಕುಟುಂಬಸ್ಥರು ವೀರಯೋಧನ ದರ್ಶನ ಪಡೆದರು. ಅಲ್ಲಿಂದ ಸ್ಮಶಾನಕ್ಕೆ ಒಯ್ದು, ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಕುಟುಂಬಸ್ಥರ ಆಕ್ರಂದನ: ಸೇನೆಯಲ್ಲಿ 10 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಸಚಿನ ಪಾಟೀಲರ ಪಾರ್ಥಿವ ಶರೀರ ಗ್ರಾಮಕ್ಕೆ ಆಗಮಿಸುತ್ತಿದ್ದಂತೆಯೇ ಪತ್ನಿ ಸನ್ಮತಿ ಸೇರಿ ಕುಟುಂಬಸ್ಥರ ರೋದನ ಮುಗಿಲು ಮುಟ್ಟಿತ್ತು. ಸ್ನೇಹಿತರು ಹಾಗೂ ಸಂಬಂಧಿಕರು ಪಾರ್ಥಿವ ಶರೀರ ನೋಡಿ ಕಣ್ಣೀರು ಹಾಕಿದರು. ‘ಭಾರತ್ ಮಾತಾಕಿ ಜೈ, ಸಚಿನ ಅಮರ್ ರಹೇ’ ಎಂದು ಘೋಷಿಸಿದರು. ಅಂತ್ಯಕ್ರಿಯೆಯಲ್ಲಿ ಕೇವಲ 22 ಜನರಿಗೆ ಮಾತ್ರ ಭಾಗವಹಿಸಲು ಅವಕಾಶ ನೀಡಲಾಗಿತ್ತು.
ಸ್ಥಳೀಯ ಪೊಲೀಸರು ಹಾಗೂ ಸೇನಾ ತುಕಡಿಗಳಿಂದ ಮೂರು ಸುತ್ತು ಗುಂಡು ಹಾರಿಸುವ ಮೂಲಕ ಯೋಧನಿಗೆ ಅಂತಿಮ ನಮನ ಸಲ್ಲಿಸಲಾಯಿತು.
ಡಿವೈಎಸ್ಪಿ ಮನೋಜ ನಾಯಿಕ, ಸಿಪಿಐ ಆರ್.ಆರ್.ಪಾಟೀಲ, ಪಿಎಸ್ಐ ಅನಿಲ ಕುಂಬಾರ, ಉತ್ತಮ ಪಾಟೀಲ, ಬಸವಪ್ರಸಾದ ಜೊಲ್ಲೆ, ಸುನೀಲ ಪಾಟೀಲ, ಕಂದಾಯ ನಿರೀಕ್ಷಕ ಸಂಜಯ, ಮುಖ್ಯಾಧಿಕಾರಿ ಪಿ.ಬಿ.ದೇವಮಾನೆ, ಗ್ರಾಮ ಲೆಕ್ಕಾಧಿಕಾರಿ ಉಮೇಶ ಕೋಳಿ, ಆರೋಗ್ಯಾಧಿಕಾರಿ ಸಂದೇಶ ರವಳುಕೇದಾರಿ, ಪೋಪಟ್ ಕುರಳೆ ಸೇರಿ ಕುಟುಂಸ್ಥರು, ಪಪಂ ಸದಸ್ಯರು ಇದ್ದರು.