ಶಿವಮೊಗ್ಗ: ಆಧುನಿಕ ಯುಗದಲ್ಲಿ ಶಿಕ್ಷಣ ಮಹತ್ವವನ್ನು ಪಡೆದಿದ್ದು, ಎಲ್ಲ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು. ಶಿಕ್ಷಣದಿಂದ ಮಾತ್ರ ಮಕ್ಕಳ ಬದುಕು ಉಜ್ವಲವಾಗಲಿದೆ ಎಂದು ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಹೇಳಿದರು.
ನಗರ ಹೊರವಲಯದ ವಡ್ಡಿನಕೊಪ್ಪದಲ್ಲಿ ಸಮನ್ವಯ ಟ್ರಸ್ಟ್ನಿಂದ ಭಾನುವಾರ ಮಹಾತ್ಮ ಗಾಂಧಿ ಜಯಂತಿ ನಿಮಿತ್ತ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ದತ್ತು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನನ್ನೂರಿನ ಮಕ್ಕಳಿಗೆ ಶಿಕ್ಷಣ ಸಿಗಬೇಕು ಎನ್ನುವ ಉದ್ದೇಶದಿಂದ ಹಣ್ಣು ಮಾರಿ ಕೂಡಿಟ್ಟ ಹಣದಿಂದ ಶಾಲೆ ಕಟ್ಟಸಿದೆ ಎಂದರು.
ಸಾಮಾನ್ಯರಲ್ಲಿ ಸಾಮಾನ್ಯನಾಗಿದ್ದ ನನ್ನನ್ನು ಶಾಲೆಗಾಗಿ ಮಾಡಿದ ಸೇವೆಯಿಂದ ರಾಷ್ಟ್ರಮಟ್ಟದಲ್ಲಿ ಗುರುತಿಸುವಂತಾಯಿತು. ಕುವೆಂಪು ವಿಶ್ವವಿದ್ಯಾಲಯದ ಪಠ್ಯದಲ್ಲಿಯೂ ನನ್ನ ಅಕ್ಷರ ಸೇವೆ ಬಗ್ಗೆ ಪಾಠ ಇರುವುದು ನನ್ನ ಪುಣ್ಯ. ಹೆಚ್ಚಿನ ಪ್ರೀತಿ, ಆತ್ಮೀಯತೆ ತೋರಿಸುತ್ತಿರುವ ಕುವೆಂಪು ನಾಡಿಗೆ ನಾನು ಸದಾ ಚಿರಋಣಿ ಎಂದು ಹೇಳಿದರು.
ಎಂಎಲ್ಸಿ ಎಸ್.ರುದ್ರೇಗೌಡ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ, ಸಮನ್ವಯ ಟ್ರಸ್ಟ್ ನಿರ್ವಾಹಕ ನಿರ್ದೇಶಕ ಸಮನ್ವಯ ಕಾಶಿ ಮಾತನಾಡಿದರು.
ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಎಚ್.ಎಂ.ಸುರೇಶ್, ಡಿಡಿಪಿಐ ಸಿ.ಆರ್.ಪರಮೇಶ್ವರಪ್ಪ, ಬಿಇಒ ನಾಗರಾಜ್, ಮುಖ್ಯಶಿಕ್ಷಕಿ ಜಿ.ತ್ರಿವೇಣಿ, ಸ್ಮಿತಾ, ವಿಜಯ್, ಅಭಿ ಎಚ್.ಎನ್.ಗೌಡ, ಮಲ್ಲಿಕಾರ್ಜುನ್, ಸಿದ್ದನಗೌಡ, ನಾರಾಯಣ್, ಶರಣ್ಯ ಇದ್ದರು.