ನವದೆಹಲಿ: ಪ್ರತಿಭಾವಂತ ಕಲಾವಿದರಿಗೆ ಸೀಟುಗಳನ್ನು ನಿಗದಿಪಡಿಸುವ ಮೂಲಕ ಈ ಹಿಂದೆ ಜಾರಿಯಲ್ಲಿದ್ದ ಪಠ್ಯೇತರ ಚಟುವಟಿಕೆಗಳ ಕೋಟಾ ಅಡಿಯ ಪ್ರವೇಶದ ವಿಧಾನವನ್ನು ಕಾಯ್ದುಕೊಳ್ಳಬೇಕೆಂದು ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಶುಕ್ರವಾರ ದೆಹಲಿ ವಿಶ್ವವಿದ್ಯಾಲಯದ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ದೆಹಲಿ ವಿವಿಯ ಸಭೆಯಲ್ಲಿ ಮಾತನಾಡಿದ ಅವರು, ಪರೀಕ್ಷಾ ವೇಳಾಪಟ್ಟಿಯನ್ನು ಅಂತಿಮಗೊಳಿಸಲು ಮತ್ತು ವಿಶ್ವವಿದ್ಯಾನಿಲಯದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಸೂಕ್ತ ಕ್ರಮ ಕೈಗೊಳ್ಳುವಂತೆ ವಿವಿ ಅಧಿಕಾರಿಗಳಿಗೆ ತಿಳಿಸಿದರು.
ಕೋವಿಡ್ ಹಿನ್ನೆಲೆ ವಿವಿಯ ಕ್ರೀಡೆ ಮತ್ತು ಇಸಿಎ ಚಟುವಟಿಕೆಗಳು ಇರುವುದಿಲ್ಲ ಎಂಬ ಸೂಚನೆ ಪ್ರವೇಶಾತಿ ಬುಲೆಟಿನ್ನಲ್ಲಿದ್ದುದು ಗಮನಕ್ಕೆ ಬಂದ ನಂತರ ದೆಹಲಿ ವಿವಿ ಕುಲಪತಿಯೂ ಆಗಿರುವ ಅವರು ಪಠ್ಯೇತರ ಚಟುವಟಿಕೆ ಮೀಸಲಾತಿ ಕುರಿತು ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ಬರೊಬ್ಬರಿ 38 ವರ್ಷಗಳ ಬಳಿಕ.. ಬ್ಯಾಂಕ್ ದರೋಡೆ ಮಾಡಿದ ಕೊಲೆಗಾರನನ್ನು ಬಂಧಿಸಿದ ಗುಜರಾತ್
ಸದ್ಯ, ಎನ್ಸಿಸಿ ಮತ್ತು ಎನ್ಎಸ್ಎಸ್ ಪ್ರಮಾಣಪತ್ರ ಹೊಂದಿರುವ ಅಭ್ಯರ್ಥಿಗಳನ್ನು ಮಾತ್ರ ಇಸಿಎ ವರ್ಗದ ಅಡಿ ಪ್ರವೇಶಕ್ಕೆ ಪರಿಗಣಿಸಿದರೆ, ಅರ್ಹತೆ (ಮೆರಿಟ್) ಪ್ರಮಾಣಪತ್ರದ ಆಧಾರದ ಮೇಲೆ ಕ್ರೀಡಾ ವಿಭಾಗದ ಅಡಿ ಪ್ರವೇಶ ಪ್ರವೇಶ ನೀಡಲಾಗುತ್ತಿದೆ.
ಪಠ್ಯೇತರ ಚಟುವಟಿಕೆಗಳ ಮೀಸಲಾತಿಗೆ ಸಂಬಂಧಿಸಿದ ನಿರ್ಧಾರವನ್ನು ಪರಿಶೀಲಿಸಲು ಮತ್ತು ಪ್ರತಿಭಾವಂತ ಕಲಾವಿದರಿಗೆ ಸೀಟುಗಳನ್ನು ನಿಗದಿಪಡಿಸುವ ಮೂಲಕ ಪ್ರಸ್ತುತ ಮೀಸಲಾತಿ ವಿಧಾನವನ್ನು ಮುಂದುವರಿಸಲು ವಿವಿ ಅಧಿಕಾರಿಗಳಿಗೆ ಸಲಹೆ ನೀಡಿದ್ದಾರೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
ಸಂಸತ್ ಸದಸ್ಯರು ಮತ್ತು ಪ್ರಮುಖ ಕಲಾವಿದರಿಂದ ಈ ವಿಷಯದ ಕುರಿತು ಹಲವು ವಿನಂತಿಗಳನ್ನು ಸ್ವೀಕರಿಸಿದ ನಂತರ ಅವರು ಈ ಸಲಹೆ ನೀಡಿದ್ದಾರೆ.
ಸಭೆಯಲ್ಲಿ ಓಪನ್ ಬುಕ್ ಪರೀಕ್ಷಾ ಪದ್ಧತಿ ಮತ್ತು ಬಾಕಿ ಇರುವ ರಿಜಿಸ್ಟ್ರಾರ್, ಪರೀಕ್ಷಾ ಕಂಟ್ರೋಲರ್, ಗ್ರಂಥಪಾಲಕರು, ಕಾಲೇಜುಗಳ ಪ್ರಾಂಶುಪಾಲರು ಮತ್ತು ಇತರ ಅಧಿಕಾರಿಗಳ ಹುದ್ದೆ ಭರ್ತಿ ಕುರಿತು ಚರ್ಚಿಸಲಾಯಿತು.
ಆ ಮಕ್ಕಳೊಂದಿಗೆ ರಂಗಿನಾಟವಾಡಲು ಅವಕಾಶ ನೀಡದ ನೆರೆಯ ಮನೆಗೆ ಆತ ಇಟ್ಟೇ ಬಿಟ್ಟ ಕೊಳ್ಳಿ …