ವಿಶಾಖಪಟ್ಟಣಂ: ವೈಜಾಗ್ ಜಿಲ್ಲೆಯ ನಾಕ್ಕಪಲ್ಲೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ ಪೇದೆಯೊಬ್ಬರು ಪೊಲೀಸ್ ಕ್ವಾರ್ಟರ್ಸ್ನಲ್ಲಿ ಶವವಾಗಿ ಪತ್ತೆಯಾಗಿರುವುದು ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಎಸ್. ದುರ್ಗಾ ಭವಾನಿ ಮೃತ ದುರ್ದೈವಿ. ಶುಕ್ರವಾರ ರಾತ್ರಿ ಠಾಣೆ ಎದುರಿನ ಕ್ವಾರ್ಟರ್ಸ್ನಲ್ಲೇ ಶವವಾಗಿ ಪತ್ತೆಯಾಗಿದ್ದು, ಆಕೆಯ ಪತಿ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಇನ್ಸ್ಪೆಕ್ಟರ್ ವಿಜಯ್ ಕುಮಾರ್, ದುರ್ಗಾ ಭವಾನಿ ಮತ್ತು ಆಕೆಯ ಪತಿ ಎಸ್ ಸಿಂಹಾದ್ರಿ ವೈಜಾಗ್ ಜಿಲ್ಲೆಯ ಪಾಯಕರೋಪೇಟೆ ನಿವಾಸಿಗಳು. ಪತಿ ದಿನಗೂಲಿ ನೌಕರನಾಗಿದ್ದ. ಮದುವೆಯಾಗಿ 12 ವರ್ಷವಾಗಿತ್ತು. ದಂಪತಿಗೆ 11 ವರ್ಷದ ಮಗಳು ಮತ್ತು 6 ವರ್ಷದ ಮಗನಿದ್ದಾನೆ. ಮದುವೆಯಾದ ಬಳಿಕವೂ ಪತ್ನಿಗೆ ಓದಲು ಅನುಮತಿ ನೀಡಿ ಕೆಲಸ ತೆಗೆದುಕೊಳ್ಳಲು ಉತ್ತೇಜನ ನೀಡಿದ್ದ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಚೆಲುವೆ ಕರೆದಳೆಂದು ಮನೆಗೆ ಹೋದೆ… ಅಲ್ಲಿ ಇನ್ನೂ ನಾಲ್ವರು ಸುಂದರಿಯರು ಇದ್ದರು… ಮುಂದೆ…
ಪದವಿ ಮುಗಿದ ಬಳಿಕ ಕಾನ್ಸ್ಟೇಬಲ್ ಹುದ್ದೆ ಪಡೆದ ಭವಾನಿಗೆ ಎರಡು ವರ್ಷದ ಹಿಂದೆ ನಾಕ್ಕಪಲ್ಲೆಯಲ್ಲಿ ಪೋಸ್ಟಿಂಗ್ ಆಗಿತ್ತು. ಕೆಲವು ದಿನಗಳ ಕಳೆದ ಬಳಿಕ ಭವಾನಿ ಸ್ಥಳೀಯ ಯುವಕನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು. ಇದೇ ವಿಚಾರವಾಗಿ ದಂಪತಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಇದೇ ವಿಚಾರವಾಗಿ ಶುಕ್ರವಾರ ರಾತ್ರಿ ಆರೋಪಿ ಸಿಂಹಾದ್ರಿ, ಪತ್ನಿ ಭವಾನಿಯನ್ನು ಕೊಲೆ ಮಾಡಿದ್ದಾನೆ ಎಂದು ಮಾಹಿತಿ ನೀಡಿದರು.
ಪೊಲೀಸ್ ಸಿಬ್ಬಂದಿ ದುರ್ಗಾ ಭವಾನಿ ವಾಸವಿದ್ದ ಸ್ಥಳಕ್ಕೆ ತೆರಳಿ ನೋಡಿದಾಗ ಆಕೆ ಬೆಡ್ ಮೇಲೆ ಬಿದ್ದಿದ್ದರು. ನೈಲಾನ್ ಹಗ್ಗವೊಂದು ಸೀಲಿಂಗ್ ಫ್ಯಾನ್ನಲ್ಲಿ ನೇತಾಡುತ್ತಿತ್ತು. ಆದರೆ, ಆಕೆ ನೇಣು ಹಾಕಿಕೊಂಡು ಸಾವಿಗೀಡಾಗಿದ್ದಾರೆ ಎಂಬುದಕ್ಕೆ ಯಾವುದೇ ಸಾಕ್ಷ್ಯಾಧಾರಗಳು ಸಿಗಲಿಲ್ಲ ಎಂದು ಸಿಬ್ಬಂದಿ ತಿಳಿಸಿದ್ದಾರೆ.
ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು ತನಿಖೆ ಮುಂದುವರಿದಿದೆ ಎಂದು ವಿಜಯ್ ಕುಮಾರ್ ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್)
ಮದುವೆಗೆ ಅಡ್ಡಿಯಾಗುವ ಆತಂಕ: ಆಂಟಿ ಕೊಲ್ಲಲು ಯುವಕ ರೂಪಿಸಿದ ಭಯಾನಕ ಸಂಚು ಬಯಲು!