ವಿಶಾಖಪಟ್ಟಣ: ದೇಶಾದ್ಯಂತ ಸಂಚಲನ ಮೂಡಿಸಿದ ವೈಜಾಗ್ ಅನಿಲ ಸೋರಿಕೆ ದುರಂತಕ್ಕೆ ಸಂಬಂಧಿಸಿ ಎಲ್ಜಿ ಪಾಲಿಮರ್ಸ್ ವಿರುದ್ಧ ಗೋಪಾಲಪಟ್ಟಣಂ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ಗಳ ಪ್ರಕಾರ ಪ್ರಕರಣವನ್ನು ದಾಖಲಿಕೊಂಡಿರುವ ಪೊಲೀಸರು, ಹನ್ನೊಂದು ಜನರ ಸಾವು ಮತ್ತು ನೂರಾರು ಜನರು ಅಸ್ವಸ್ಥಗೊಳ್ಳುವಂತೆ ಮಾಡಿದ್ದಕ್ಕಾಗಿ ಕಂಪನಿಯನ್ನು ಹೊಣೆಗಾರನನ್ನಾಗಿ ಮಾಡಿದ್ದಾರೆ.
ಇದನ್ನೂ ಓದಿ: ವಿಷಾನಿಲ ದುರಂತ; ಮೃತರ ಕುಟುಂಬಗಳಿಗೆ ಒಂದು ಕೋಟಿ ರೂ. ಪರಿಹಾರ ಘೋಷಣೆ
ಐಪಿಸಿಯ ಸೆಕ್ಷನ್ 278 (ವಾತಾವರಣವನ್ನು ಕಲುಷಿತಗೊಳಿಸಿ ಉಸಿರಾಟಕ್ಕೆ ತೊಂದರೆ ಉಂಟುಮಾಡಿದ್ದು), ಸೆಕ್ಷನ್ 284 (ವಿಷಕಾರಿ ವಸ್ತುವಿನ ಬಗ್ಗೆ ನಿರ್ಲಕ್ಷ್ಯವಹಿಸಿದ್ದು), ಸೆಕ್ಷನ್ 285 (ಬೆಂಕಿ ಮತ್ತು ಬೆಂಕಿ ಹರಡುವ ವಸ್ತುವಿನ ಬಗ್ಗೆ ನಿರ್ಲಕ್ಷ್ಯ ತೋರಿದ್ದು), ಸೆಕ್ಷನ್ 337 (ಅಸಡ್ಡೆ ಮತ್ತು ನಿರ್ಲಕ್ಷ್ಯ ತೋರುವ ಮೂಲಕ ಮನುಷ್ಯರ ಪ್ರಾಣವನ್ನೇ ತೊಂದರೆಗೆ ಒಡ್ಡಿದ್ದು), ಸೆಕ್ಷನ್ 304(ii) (ಅಪರಾಧವೆನಿಸುವ ನರಹತ್ಯೆ, ಆದರೆ ಕೊಲೆಗೆ ಸಮನಾದುದಲ್ಲ) ಪ್ರಕಾರ ಕಂಪನಿಯನ್ನು ದೋಷಿಯನ್ನಾಗಿಸಲಾಗಿದೆ.
ಇದನ್ನೂ ಓದಿ: ವಿಷಾನಿಲ ಅವಘಡದ ಬಗ್ಗೆ ಈಗ ಹೇಳಿಕೆ ಬಿಡುಗಡೆ ಮಾಡಿದ ಎಲ್ಜಿ ಪಾಲಿಮರ್ಸ್ ಕೆಮಿಕಲ್ ಫ್ಯಾಕ್ಟರಿ..
ಸ್ಥಳೀಯ ಕಂದಾಯ ಅಧಿಕಾರಿ ಎಂವಿ ಸುಬ್ಬಾರಾವ್ ಕಂಪನಿ ವಿರುದ್ಧ ದೂರು ದಾಖಲಿಸಿದ್ದಾರೆ. ಅವರು ದೂರು ದಾಖಲಿಸಿದ ಸಂದರ್ಭದಲ್ಲಿ ಸಾವಿನ ಸಂಖ್ಯೆ 5 ಮಾತ್ರವೇ ಇತ್ತು. ಈಗ ಅದು 11ಕ್ಕೆ ಏರಿಕೆಯಾಗಿದೆ. (ಏಜೆನ್ಸೀಸ್)
VIDEO| ವಿಷಾನಿಲ ಹರಡುತ್ತಿದ್ದಂತೆ ಜನರು ಅನುಭವಿಸಿದ ನರಕಯಾತನೆ ಬಿಚ್ಚಿಟ್ಟ ಸ್ಥಳೀಯ ನಿವಾಸಿ