ಬೆಳಗಾವಿ: ಸ್ವಾಮಿ ವಿವೇಕಾನಂದರ ಸಂದೇಶ ಹಿಂದೆಂದಿಗಿಂತಲೂ ಈಗ ಪ್ರಸ್ತುತವಾಗಿದ್ದು, ಪ್ರತಿಯೊಬ್ಬರೂ ವಿವೇಕಾನಂದ ಗ್ರಂಥಗಳನ್ನು ಅಧ್ಯಯನ ಮಾಡಬೇಕು ಎಂದು ರಾಮಕೃಷ್ಣ ಮಿಷನ್ ಆಶ್ರಮದ ಸ್ವಾಮಿ ನವದುರ್ಗಾನಂದ ಸಲಹೆ ನೀಡಿದ್ದಾರೆ.
ನಗರದ ರಾಮಕೃಷ್ಣ ಮಿಷನ್ ಆಶ್ರಮದ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ 157ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
ಜಗತ್ತಿಗೆ ಸಂದೇಶ ನೀಡಿರುವ ಸ್ವಾಮಿ ವಿವೇಕಾನಂದರ ಕೃತಿಗಳನ್ನು ಓದುವ ಹವ್ಯಾಸ ಮೈಗೂಡಿಸಿಕೊಳ್ಳಬೇಕು. ಸ್ವಾಮಿ ವಿವೇಕಾನಂದರು ಮತ್ತೊಬ್ಬರಿಗೆ ಕಷ್ಟ, ನೋವು ಸಂಭವಿಸಿದರೆ ನೊಂದುಕೊಳ್ಳುತ್ತಿದ್ದರು. ಮತ್ತೊಬ್ಬರ ಕಷ್ಟದಲ್ಲಿ ಭಾಗಿಯಾಗಿ ತಮ್ಮ ಕಷ್ಟ ಎಂದು ಹೇಳುತ್ತಿದ್ದರು. ಸಮಾಜದಲ್ಲಿ ಯಾವುದೇ ತಾರತಮ್ಯ ಇಲ್ಲದೆ ಸಮಾನ ರೀತಿಯಲ್ಲಿ ಗೌರವಿಸುತ್ತಿದ್ದರು. ಆತ್ಮಕ್ಕೆ ಯಾವ ಲಿಂಗ ಇದೆ ಎಂದು ಕೇಳುತ್ತಿದ್ದರು. ಹಾಗಾಗಿಯೇ ವಿಶ್ವವೇ ಅವರನ್ನು ಗೌರವಿಸುತ್ತಿದೆ ಎಂದು ತಿಳಿಸಿದರು. ಸ್ವಾಮಿ ಆತ್ಮಪ್ರಾಣಾನಂದ ಮಾತನಾಡಿ, ಸ್ವಾಮಿ ವಿವೇಕಾನಂದರ ಜೀವನವೇ ಒಂದು ವಿಸ್ಮಯಯಾಗಿತ್ತು. ಸಮಾಜದ ಒಳಿತಿಗಾಗಿ ವಿಶ್ವವನ್ನೇ ತನ್ನತ್ತ ಸೆಳೆದುಕೊಂಡ ಮಹಾಜ್ಞಾನಿಯಾಗಿದ್ದರು.
ವಿವೇಕಾನಂದರ ಕುರಿತು ಅಧ್ಯಯನ ಮಾಡಿದಷ್ಟು ಜ್ಞಾನ ವೃದ್ಧಿಯಾಗುತ್ತ ಹೋಗುತ್ತದೆ ಎಂದರು. ಸ್ವಾಮಿ ಈಶ್ವರಾನಂದ, ಸ್ವಾಮಿ ಗಭಿರಾಥನಂದ, ಸ್ವಾಮಿ ಮುಕ್ತಿವೃತ್ತಾನಂದ, ಸ್ವಾಮಿ ಮೋಕ್ಷಾತ್ಮಾನಂದ ಇತರರು ಇದ್ದರು.