ಮುಂಬೈ: ದಕ್ಷಿಣದ ಚಿತ್ರಗಳಿಂದಾಗಿ ಬಾಲಿವುಡ್ನಲ್ಲಿ ದೊಡ್ಡ ಗಲಾಟೆ ನಡೆಯುತ್ತಿದೆ. ಕಂಟೆಂಟ್ ವಿಷಯದಿಂದ ಹಿಡಿದು, ತಾವು ಹೇಗೆ ಸುಧಾರಿಸಿಕೊಳ್ಳಬಹುದು ಎಂಬ ವಿಷಯದವರೆಗೂ ಅಲ್ಲಿನ ನಿರ್ದೇಶಕರು ಮತ್ತು ನಿರ್ಮಾಪಕರ ನಡುವೆ ತಿಕ್ಕಾಟ ನಡೆಯುತ್ತಿದೆ. ಈಗ ಅಂಥದ್ದೇ ಒಂದು ಯುದ್ಧ ಅನುರಾಗ್ ಕಶ್ಯಪ್ ಮತ್ತು ವಿವೇಕ್ ಅಗ್ನಿಹೋತ್ರಿ ನಡುವೆ ಶುರುವಾಗಿದೆ.
ಇದನ್ನೂ ಓದಿ: ‘ಮೂಲತಃ ನಮ್ಮವರೇ’ ಎನ್ನುತ್ತಿದ್ದಾರೆ ‘ಗುಳ್ಟು’ ನವೀನ್ …
ಇತ್ತೀಚೆಗಷ್ಟೇ, ದಕ್ಷಿಣದ ಚಿತ್ರಗಳ ಕುರಿತು ಅನುರಾಗ್ ಸಮಾರಂಭವೊಂದರಲ್ಲಿ ಮಾತನಾಡಿದ್ದರು. ‘ಕಾಂತಾರ’ ಮತ್ತು ‘ಪುಷ್ಪ’ದಂತಹ ಚಿತ್ರಗಳು ಚಿತ್ರರಂಗವನ್ನು ಕೊಲ್ಲುತ್ತಿವೆ ಎಂಬರ್ಥದಲ್ಲಿ ಮಾತನಾಡಿದ್ದರು. ಈ ಬಗ್ಗೆ ಸಾಕಷ್ಟು ಪರ-ವಿರೋಧಗಳ ವ್ಯಕ್ತವಾಗಿದ್ದವು. ಪ್ರಮುಖವಾಗಿ, ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಅನುರಾಗ್ ಮಾತುಗಳನ್ನು ಒಪ್ಪುವುದಕ್ಕೆ ಸಾಧ್ಯವಿಲ್ಲ ಎಂದಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ಅನುರಾಗ್, ವಿವೇಕ್ ವಿರುದ್ಧ ಖಾರವಾಗಿಯೇ ಪ್ರತಿಕ್ರಿಯಿಸಿದ್ದರು. ‘ಇದರಲ್ಲಿ ನಿಮ್ಮ ತಪ್ಪಿಲ್ಲ. ನಿಮ್ಮ ಸಿನಿಮಾಗಳ ರೀಸರ್ಚ್ ಸಹ ನಿಮ್ಮ ಮಾತಿನಂತೆಯೇ ಇದೆ. ನಿಮ್ಮ ಹಾಗೂ ಕೆಲವು ಮಾಧ್ಯಮದವರ ಪರಿಸ್ಥತಿ ಹಾಗೆಯೇ ಇದೆ. ಮುಂದಿನ ಬಾರಿ ಮಾತನಾಡುವಾಗ ಸ್ವಲ್ಪ ರೀಸರ್ಚ್ ಮಾಡಿಕೊಂಡು ಬನ್ನಿ’ ಎಂದು ಕಾಲೆಳೆದಿದ್ದರು.
ಇದಕ್ಕೆ ವಿವೇಕ್ ಅಗ್ನಿಹೋತ್ರಿ ಖಾರವಾಗಿಯೇ ಪ್ರತಿಕ್ರಿಯಿಸಿದರೆ, ತಮ್ಮ ಸಂಶೋಧನೆ ಏನಾದರೂ ಸುಳ್ಳು ಎಂದು ಪ್ರೂವ್ ಮಾಡಿದರೆ, ಇನ್ನೊಮ್ಮೆ ಇಂಥಾ ತಪ್ಪು ಮಾಡುವುದಿಲ್ಲ ಎಂದು ಹೇಳಿದ್ದಾರೆ. ”ದಿ ಕಾಶ್ಮೀರ್ ಫೈಲ್ಸ್’ ಚಿತ್ರಕ್ಕಾಗಿ ನಾನು ಮಾಡಿದ ನಾಲ್ಕು ವರ್ಷಗಳ ಸಂಶೋಧನೆ ತಪ್ಪು ಎಂದು ಸಾಬೀತು ಮಾಡಿ, ಗಿರಿಜಾ ಟಿಕ್ಕೂ, ಬಿಕೆ ಗಂಜು, ಏರ್ಫೋರ್ಸ್ ಕಿಲ್ಲಿಂಗ್, ನದಿಮಾರ್ಗ್ ಎಲ್ಲವೂ ಸುಳ್ಳು ಎಂದು ತೋರಿಸಿ. ಕಾಶ್ಮೀರಿ ಪಂಡಿತರ ಸುಮಾರು 700 ವಿಡಿಯೋಗಳು ಸುಳ್ಳು, ಅಲ್ಲಿ ಹಿಂದುಗಳನ್ನು ಸಾಯಿಸಲಿಲ್ಲ ಎಂದು ಪ್ರೂವ್ ಮಾಡಿ. ಆಗ ನಾನು ಇನ್ನೊಮ್ಮೆ ಇಂಥ ತಪ್ಪುಗಳನ್ನು ಮಾಡುವುದಿಲ್ಲ’ ಎಂದಿದ್ದಾರೆ.
ಇದನ್ನೂ ಓದಿ: ಆರ್ಥಿಕ ಸ್ವಾತಂತ್ರ್ಯಕ್ಕಾಗಿ ಹೋರಾಟ; ‘ಪ್ರಜಾರಾಜ್ಯ’ ಟೀಸರ್ ಬಿಡುಗಡೆ ಮಾಡಿದ ದೇವರಾಜ್
ಮೊದಲು ಉತ್ತರ ವರ್ಸಸ್ ದಕ್ಷಿಣ ಎಂದು ಶುರುವಾದ ಡಿಬೇಟ್, ಈಗ ಎಲ್ಲೆಲ್ಲಿಗೋ ಹೋಗಿ ಮುಟ್ಟುತ್ತಿದೆ. ಮುಂದೆ ಇದು ಯಾವ ರೂಪ ಪಡೆಯುತ್ತದೋ ಮತ್ತು ಅನುರಾಗ್ ಇದಕ್ಕೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂದು ಕಾದು ನೋಡಬೇಕು.