More

    ವಿಶ್ವಗುರು ಅಂಕಣ: ಅಧಿಕಾರಕ್ಕಾಗಿ ಕಾದಾಡುವ ರಣಹದ್ದುಗಳು !

    ವಿಶ್ವಗುರು ಅಂಕಣ: ಅಧಿಕಾರಕ್ಕಾಗಿ ಕಾದಾಡುವ ರಣಹದ್ದುಗಳು !ಸಾಮಾಜಿಕ ಜಾಲತಾಣಗಳು ಇತ್ತೀಚೆಗಂತೂ ಬದುಕನ್ನು ನಿರ್ಧರಿಸುವ ಮಾಧ್ಯಮಗಳಂತಾಗಿಬಿಟ್ಟಿವೆ. ಅನೇಕರು ತಾವು ಹಾಕುವ ಬಟ್ಟೆಯಿಂದ ಹಿಡಿದು ಆಡುವ ಪ್ರತಿಯೊಂದು ಮಾತಿಗೂ ಬರುವ ಲೈಕುಗಳನ್ನು ಗಮನಿಸುತ್ತಲೇ ಕಾಲ ಕಳೆದುಬಿಡುತ್ತಾರೆ. ಒಂದು ಸುತ್ತು ಅರೆ ಸೆಲೆಬ್ರಿಟಿಗಳ ನಡುವೆ ಸುತ್ತಾಡಿ ಬಂದರೆ ನಿಮಗೆ ಗೊತ್ತಾದೀತು. ಯಾವ ಹೊತ್ತಿನಲ್ಲಿ ಇನ್ಸಾ್ಟಗ್ರಾಂ ಪೋಸ್ಟ್ ಹಾಕಿದರೆ ಎಷ್ಟು ಲೈಕ್ ಬರುತ್ತದೆ ಎನ್ನುವುದರಿಂದ ಹಿಡಿದು ಯಾರು ಶೇರ್ ಮಾಡಿದರೆ ಹೆಚ್ಚು ಜನರಿಗೆ ಮುಟ್ಟುತ್ತದೆ ಎನ್ನುವವರೆಗೆ ಸಂಶೋಧನೆಯನ್ನೇ ಮಾಡಿಬಿಟ್ಟಿರುತ್ತಾರೆ. ಮೊದಲೆಲ್ಲ ಪ್ರಖ್ಯಾತಿಯ ಅಳತೆಗೋಲು ಅನುಭವದೊಂದಿಗೆ ತಾಳೆಯಾಗುತ್ತಿತ್ತು. ಆದರೀಗ ಅದು ಫೇಸ್​ಬುಕ್ಕಿನ ಲೈಕುಗಳ ಆಧಾರದ ಮೇಲೆ ನಿರ್ಧಾರವಾಗುತ್ತಿದೆ. ಅಷ್ಟೇ ಅಲ್ಲ, ವ್ಯವಸ್ಥಿತವಾಗಿ ಸುಳ್ಳು ಐಡಿಗಳನ್ನು ಸೃಷ್ಟಿಸಿ ಲೈಕ್ ಪಡೆದುಕೊಳ್ಳುವ ಮಂದಿ ಒಂದೆಡೆ ಇದ್ದರೆ, ಅದೇ ಐಡಿಗಳ ಮೂಲಕ ತಮಗಾಗದವರ ತೇಜೋವಧೆ ಮಾಡುವ ತಂಡಕ್ಕೂ ಕೊರತೆ ಇಲ್ಲ. ಅನೇಕ ಪಕ್ಷಗಳ ಐಟಿ ಸೆಲ್​ಗಳಂತೂ ಈ ಕೆಲಸಗಳಲ್ಲಿ ನಿಸ್ಸೀಮ! ಈ ವಿಚಾರ ಈಗೇಕೆ ಚರ್ಚೆ ಮಾಡಬೇಕಾಯ್ತೆಂದರೆ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಅನುಕಂಪ ಹುಟ್ಟಿಸಿ ತೇಜೋವಧೆ ಮಾಡುವ ವರ್ಗವೊಂದು ಹುಟ್ಟಿಕೊಂಡಿದೆ. ‘ಈ ಹಿಂದೆ ನಿಮ್ಮ ಅಭಿಮಾನಿಯಾಗಿದ್ದೆ. ಇನ್ನು ಮುಂದೆ ನಾನು ನಿಮ್ಮನ್ನು ಅನುಸರಿಸುವುದಿಲ್ಲ’ ಎಂಬ ಎಮೋಷನಲ್ ಬ್ಲಾಕ್​ವೆುೕಲ್​ನೊಂದಿಗೆ ಅಂಥವರ ಮಾತು ಶುರುವಾಗುತ್ತದೆ. ಸುಮ್ಮನೆ ಅವರ ಪ್ರೊಫೈಲ್​ನೊಮ್ಮೆ ಗಮನಿಸಿ ನೋಡಿ, ಅವರು ಬಹುತೇಕ ನಿಮ್ಮ ವಿಚಾರಧಾರೆಯ ವಿರೋಧಿಗಳೇ ಆಗಿರುತ್ತಾರಲ್ಲದೆ ಅನೇಕ ಬಾರಿ ನಿಮ್ಮನ್ನು ನಿಂದಿಸಿಯೇ ಪೋಸ್ಟ್​ಗಳನ್ನು ಹಾಕಿರುತ್ತಾರೆ. ಇದು ನಿಮ್ಮನ್ನು ದುರ್ಬಲಗೊಳಿಸುವ ಅವರ ಹೊಸ ಪ್ರಯತ್ನವಷ್ಟೇ.

    ಇತ್ತೀಚೆಗಂತೂ ಮತ್ತೊಂದು ಟ್ರೆಂಡ್ ಶುರುವಾಗಿದೆ. ಯಾವ ವಿಚಾರ ಚರ್ಚೆಗೆ ಬಂದರೂ ನೀವು ಅದಕ್ಕೊಂದು ಹೇಳಿಕೆಯನ್ನು ಕೊಡಲೇಬೇಕು. ಇಲ್ಲವಾದರೆ ಈ ನಿಮ್ಮ ಎಮೋಷನಲ್ ಬ್ಲಾಕ್​ವೆುೕಲರ್​ಗಳು ಎಲ್ಲೆಡೆ ಬಂದು ನೀವೇಕೆ ಮಾತನಾಡುವುದಿಲ್ಲ ಎಂದಷ್ಟೇ ಕೇಳುತ್ತಿರುತ್ತಾರೆ. ಇದನ್ನು ತಾಳಲಾಗದೇ ಇಷ್ಟವಿಲ್ಲದಿದ್ದರೂ ಮಾತನಾಡುವ ಮಂದಿ ಒಂದೆಡೆಯಾದರೆ, ಹೀಗೆ ಕೇಳುತ್ತಾರಲ್ಲ ಎಂಬ ಕಾರಣಕ್ಕೇ ಮುಂಚಿತವಾಗಿಯೇ ಗಾಳಿ ಬೀಸುತ್ತಿರುವ ದಿಕ್ಕಿನಲ್ಲಿ ಮನಃಸಾಕ್ಷಿಯ ವಿರುದ್ಧವಾಗಿ ಒಂದೆಡೆ ಮಾತುಗಳನ್ನು ಹೇಳಿ ಕೂತುಬಿಡುವವರೂ ಇದ್ದಾರೆ. ಸಾಮಾಜಿಕ ಜಾಲತಾಣಗಳು ನಿಮ್ಮ ದಿಕ್ಕು ತಪ್ಪಿಸುವಲ್ಲಿ ಅಷ್ಟು ಪ್ರಭಾವಶಾಲಿಯಾಗಿವೆ ಮತ್ತು ತಮಗೆ ಬೇಕಾದ ಚಿತ್ರಣವನ್ನು ಎಲ್ಲರ ಬಾಯಿಯಲ್ಲೂ ಹೊರಡಿಸುವಲ್ಲಿ ಅದರ ಶಕ್ತಿ ಬಲು ವಿಶಿಷ್ಟ!

    ಕೆಲವು ದಿನಗಳ ಹಿಂದೆ ಹಾಥರಸ್​ನ ಪ್ರಕರಣ ಹೊರಬಂತು. ಸೆಪ್ಟೆಂಬರ್ 15ಕ್ಕೆ ಮೊದಲ ಬಾರಿಗೆ ಹಿಂದಿಯ ‘ಜಾಗರಣ್’ ಪತ್ರಿಕೆಯಲ್ಲಿ ಈ ಘಟನೆ ಕುರಿತಂತೆ ವರದಿಯಾಯ್ತು. ಎರಡು ಪರಿವಾರಗಳ ನಡುವಿನ ದೀರ್ಘ ಕದನದ ಹಿನ್ನೆಲೆಯಲ್ಲಿ ಒಂದು ಹೆಣ್ಣುಮಗುವಿನ ಮೇಲೆ ಹಲ್ಲೆಯಾಗಿರುವ ಪ್ರಕರಣವಾಗಿ ಅದು ವರದಿಯಾಗಿತ್ತು. ತಾಯಿ-ಮಗಳು ಹುಲ್ಲು ತರಲೆಂದು ಗದ್ದೆಯ ಬಳಿ ಹೋಗಿದ್ದಾಗ ಅಲ್ಲಿ ತರುಣನೊಬ್ಬ ಆಕ್ರಮಣ ಮಾಡಿದ್ದಾನೆಂಬುದು ಒಟ್ಟಾರೆ ಸಾರಾಂಶ. ಎಲ್ಲಿಯೂ ಜಾತಿ ವೈಷಮ್ಯದ ಉಲ್ಲೇಖವಿರಲಿಲ್ಲ ಮತ್ತು ಹಲ್ಲೆಗೊಳಗಾದ ಹೆಣ್ಣುಮಗಳ ಹೆಸರನ್ನು ಪತ್ರಿಕೆ ವರದಿ ಮಾಡಿತ್ತು. ಈ ವಿಚಾರ ಏಕೆ ಹೇಳಬೇಕೆಂದರೆ ಮಾನಭಂಗದ ಪ್ರಕರಣಗಳಲ್ಲಿ ಹೆಣ್ಣುಮಕ್ಕಳ ಹೆಸರನ್ನು ಹೇಳುವಂತಿಲ್ಲವೆಂಬ ನಿಯಮವಿದೆ. ಅದರರ್ಥ ಅಲ್ಲಿ ಮಾನಭಂಗದ ಉಲ್ಲೇಖವೇ ಇರಲಿಲ್ಲವೆಂದಾಯ್ತು. ಮುಂದೆ ಪೊಲೀಸರು ಆಕೆಯನ್ನು ಜಿಲ್ಲಾ ಆಸ್ಪತ್ರೆಗೆ ಕೊಂಡೊಯ್ದರು. ಅದಕ್ಕೂ ಮುಂಚೆ ಆಕೆ ಮಾತನಾಡುವ ಸ್ಥಿತಿಯಲ್ಲಿದ್ದು ತನಗಾದ ತೊಂದರೆಯನ್ನು ಹೇಳಿಕೊಳ್ಳುವ ವಿಡಿಯೋ ಕೂಡ ಹೊರಬಂದಿತ್ತು. ಆಗಲೂ ಮಾನಭಂಗವಾದುದರ ಉಲ್ಲೇಖವಿರಲಿಲ್ಲ. ಆಕೆಯನ್ನು ಅಲೀಗಢದ ಮುಸ್ಲಿಂ ಯುನಿವರ್ಸಿಟಿಯಲ್ಲಿರುವ ಜವಾಹರ್​ಲಾಲ್ ನೆಹರು ವೈದ್ಯಕೀಯ ಕಾಲೇಜಿನ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಲಾಯ್ತು. ಆಗಲೂ ಆಕೆ ಕುತ್ತಿಗೆಯ ಮೇಲೆ ಉಂಟಾಗಿರುವ ಏಟಿನ ಕುರಿತು ಮಾತನಾಡಿದ್ದಳೇ ಹೊರತು ಸಾಮೂಹಿಕ ಬಲಾತ್ಕಾರದ ವಿವರಗಳು ಇರಲಿಲ್ಲ. ಸೆ.19ರಂದು ಉತ್ತರಪ್ರದೇಶದ ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ಆಕೆಯ ಮನೆಯನ್ನು ಭೇಟಿ ಮಾಡಿದ ನಂತರ ಚುಡಾಯಿಸುವ ಪ್ರಕರಣ ಸೇರಿಸಲ್ಪಟ್ಟಿತಲ್ಲದೆ, ಪ್ರಕರಣದ 8 ದಿನದ ನಂತರ ಬಲಾತ್ಕಾರದ ಆರೋಪವನ್ನೂ ದಾಖಲಿಸಲಾಯ್ತು. ಅಂದರೆ ಕಾಂಗ್ರೆಸ್ಸಿನ ನಾಯಕರು ಭೇಟಿ ಕೊಡುವವರೆಗೆ ಅದು ಸಾಮಾನ್ಯವಾದ ಕುಟುಂಬ ಕಲಹವಾಗಿದ್ದು, ನಂತರ ಬಲಾತ್ಕಾರದ ಪ್ರಕರಣವಾಗಿ ಮಾರ್ಪಟ್ಟಿತು. ಈ ಕಾಂಗ್ರೆಸ್ ನಾಯಕ, ‘ನಮ್ಮ ಹೆಣ್ಣುಮಗಳು ತನ್ನ ಆತ್ಮಗೌರವವನ್ನು ಉಳಿಸಿಕೊಳ್ಳಲಿಕ್ಕೆಂದೇ ಎಲ್ಲವನ್ನೂ ಸಹಿಸಿಕೊಂಡಿದ್ದಾಳೆ. ಆದರೆ ಪಾಪಿಗಳು ಆಕೆಯ ನಾಲಿಗೆಯನ್ನೂ ಕತ್ತರಿಸಿ, ಬೆನ್ನುಮೂಳೆಯನ್ನು ಮುರಿದುಬಿಟ್ಟಿದ್ದಾರೆ’ ಎಂದ. ಮತ್ತೊಬ್ಬ ರಾಜಕೀಯ ನೇತಾರನಂತೂ ಈ ಸಂದರ್ಭವನ್ನು ಬಳಸಿಕೊಂಡು ಇಡಿಯ ಪ್ರಕರಣಕ್ಕೆ ಜಾತಿಯ ರಂಗು ಬಳಿದು ಮೇಲ್ವರ್ಗದವರು ದಲಿತ ಹೆಣ್ಣುಮಗಳಿಗೆ ಯಾವ ರೀತಿ ಬಲಾತ್ಕಾರ ಮಾಡಿದ್ದಾರೋ ಅದೇ ರೀತಿ ಮೇಲ್ವರ್ಗದ ಹೆಣ್ಣುಮಕ್ಕಳಿಗೆ ನಾವೂ ಮಾಡುತ್ತೇವೆಂದು ಹೇಳುವ ಮೂಲಕ ಪ್ರಕರಣಕ್ಕೆ ರಾಜಕೀಯ ಬಲ ಬರುವಂತೆ ನೋಡಿಕೊಂಡ. ಈಗ ಇದು ಮೇಲ್ವರ್ಗದವರು ಕೆಳವರ್ಗದವರ ಮೇಲೆ ನಡೆಸುವ ಅತ್ಯಾಚಾರವೆಂದಾಯ್ತಲ್ಲದೆ ಚುನಾವಣೆಯಲ್ಲಿ ಕೆಳವರ್ಗದವರ ಮತವನ್ನು ಸೆಳೆಯುವ ಬಲವಾದ ಅಸ್ತ್ರವಾಗಿ ರೂಪುಗೊಂಡಿತು!

    ಹಾಗಂತ ಇದು ಒಂದೇ ಪಕ್ಷದವರು ಮಾಡಬಹುದಾದ ಕೆಲಸವಲ್ಲ. ಮತಗಳನ್ನು ಗಳಿಸಲೆಂದು ಎಲ್ಲ ಪಕ್ಷಗಳು ಈ ರೀತಿ ಜನರನ್ನು ಪ್ರಚೋದಿಸುವ ಕೆಲಸ ಮಾಡಿಯೇ ಮಾಡುತ್ತವೆ. ಪರೇಶ್ ಮೇಸ್ತಾ ಸಾವು ನೆನಪಿರಬೇಕಲ್ಲ. ಆತನ ಕಣ್ಣು ಕಿತ್ತು ಹಾಕಲಾಯ್ತು, ಸುಟ್ಟು ಬಿಡಲಾಯ್ತು ಎಂದು ಬೊಬ್ಬೆ ಹೊಡೆದಿದ್ದ ರಾಜಕೀಯ ನೇತಾರರ್ಯಾರೂ ಆನಂತರದ ದಿನಗಳಲ್ಲಿ ಕಾಣಿಸಿಕೊಳ್ಳಲೇ ಇಲ್ಲ. ಕೇಂದ್ರ-ರಾಜ್ಯಗಳೆರಡರಲ್ಲೂ ತಮ್ಮದೇ ಸರ್ಕಾರಗಳಿದ್ದರೂ ಆ ಪ್ರಕರಣವನ್ನು ಭೇದಿಸಲಾಗಲಿಲ್ಲ. ಅಂದರೆ ಪ್ರತಿಯೊಬ್ಬರಿಗೂ ತಮ್ಮ ಮತಬ್ಯಾಂಕನ್ನು ಬಲಗೊಳಿಸಿಕೊಳ್ಳುವ ಧಾವಂತ ಇದ್ದೇ ಇದೆ. ಅದಕ್ಕೆ ಬಲಿಯಾಗುವುದು ಮಾತ್ರ ಸಾಮಾನ್ಯ ಜನರೇ. ಅದರಲ್ಲೂ ಅಭಿವೃದ್ಧಿಯ ರಿಪೋರ್ಟ್ ಕಾರ್ಡ್ ಕೈಯ್ಯಲ್ಲಿ ಇಲ್ಲದೆ ಹೋದಾಗ ಚುನಾವಣೆ ಹೊತ್ತಲ್ಲಿ ಇಂತಹ ವಿಚಾರಗಳೇ ಅಸ್ತ್ರವಾಗಿಬಿಡುತ್ತವೆ. ಕಾಂಗ್ರೆಸ್ಸಿನ ಪರಿಸ್ಥಿತಿ ಅಂಥದ್ದೇ. ರಾಹುಲ್ ಮತ್ತೊಮ್ಮೆ ಮುನ್ನೆಲೆಯಲ್ಲಿ ಕಾಣಿಸಿಕೊಳ್ಳಲು, ಹಾಗೆಯೇ ಪ್ರಿಯಾಂಕಾಗೆ ಸೂಕ್ತ ವೇದಿಕೆ ನಿರ್ವಿುಸಿಕೊಡಲು ದಲಿತ ಮತ್ತು ಮೇಲ್ವರ್ಗದ ಕದನವನ್ನೇ ಅಸ್ತ್ರವಾಗಿ ಬಳಸಿಕೊಳ್ಳುವ ಅನಿವಾರ್ಯತೆ ಅವರಿಗಿತ್ತು! ಹೆಣ್ಣುಮಗಳ ನಾಲಿಗೆ ಹರಿದಿದ್ದಾರೆ ಎಂದು ಹೇಳಿದ ಮತ್ತು ಅದನ್ನು ವೇದವಾಕ್ಯದಂತೆ ಹಬ್ಬಿಸಿದ ಫೇಸ್​ಬುಕ್ ದಂಗೆಕೋರರು ಏಟು ತಿಂದ ಹೆಣ್ಣುಮಗಳು ತನಗಾದ ನೋವನ್ನು ವಿವರಿಸುವ ವಿಡಿಯೋ ನೋಡಿಯೇ ಇರಲಿಲ್ಲ. ಪೊಲೀಸರು ಈ ವಿಚಾರವನ್ನು ಹೇಳುವ ಪ್ರಯತ್ನ ಮಾಡಿದರೂ ಕೇಳುವ ವ್ಯವಧಾನ ಯಾರಿಗೂ ಇರಲಿಲ್ಲ. ಈ ಹೊತ್ತಿನಲ್ಲೇ ಕೆಲವು ಮಾಧ್ಯಮಗಳು ಜಿದ್ದಿಗೆ ಬಿದ್ದವರಂತೆ ಈ ಪ್ರಕರಣದ ಕುರಿತಂತೆ ವರದಿ ಮಾಡಲಾರಂಭಿಸಿದವು. ಜನರನ್ನು ಪ್ರಚೋದಿಸುವ, ಒಬ್ಬರ ವಿರುದ್ಧ ಮತ್ತೊಬ್ಬರನ್ನು ಎತ್ತಿಕಟ್ಟುವ ಮತ್ತು ಇಡಿಯ ದೇಶವನ್ನು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಹಚ್ಚುವ ಪ್ರಯತ್ನ ಅದಾಗಿತ್ತು.

    ಬಿಹಾರದ ಚುನಾವಣೆಗೂ ಮುನ್ನ ನಡೆಯುವ ಈ ಪ್ರಕ್ರಿಯೆಯಿಂದ ದೇಶದಾದ್ಯಂತ ನರೇಂದ್ರ ಮೋದಿಯವರ ವಿರುದ್ಧ ಒಂದು ಅಲೆ ಎಬ್ಬಿಸುವ ಉದ್ದೇಶ ಅವರಿಗಿತ್ತು. ಆದರದು ಸಾಧ್ಯವಾಗಲಿಲ್ಲ ಅಷ್ಟೇ. ಏಕೆಂದರೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ಮುತ್ಸದ್ದಿಯಂತೆ ಕಾರ್ಯನಿರ್ವಹಿಸಿದರು ಮತ್ತು ಉತ್ತರಪ್ರದೇಶದ ಪೊಲೀಸರಿಗೆ ಎಷ್ಟು ಸಾಧ್ಯವೋ ಅಷ್ಟು ತಾಳ್ಮೆ ವಹಿಸುವಂತೆ ಕೇಳಿಕೊಂಡರು. ಅದರ ಪರಿಣಾಮವಾಗಿ ಇಡಿಯ ಪ್ರಕರಣವನ್ನು ಭಾವೋದ್ರೇಕಗೊಳಿಸುವ ಕೆಲವು ಪತ್ರಕರ್ತರ ಪ್ರಯತ್ನ ವಿಫಲವಾಗಿ ಹೋಯ್ತು. ಆದರೆ ಪೀಡಿತೆಯ ಮನೆಯವರ ವರದಿಗಳು ರಂಗು-ರಂಗಾಗಿ ಮಾಧ್ಯಮಗಳಲ್ಲಿ ಬರಲಾರಂಭಿಸಿದವು. ತಾಯಿ ಮತ್ತು ಸಹೋದರರು ಆ ಹುಡುಗಿಯ ಬಗ್ಗೆ ಹೇಳಿರುವಂಥ ಮಾತುಗಳು ಹೃದಯವಿದ್ರಾವಕವಾಗಿ ವರದಿಗೊಳಿಸಲ್ಪಟ್ಟವು. ಸೆ.29ರಂದು ಆ ಹೆಣ್ಣುಮಗಳ ಸಾವಿನೊಂದಿಗೆ ಪ್ರಕರಣಕ್ಕೆ ಬೆಂಕಿಯೇ ತಾಕಿಬಿಟ್ಟಿತು. ಆ ವೇಳೆಗಾಗಲೇ ಪೊಲೀಸರು ಬಲಾತ್ಕಾರದ ಹಿನ್ನೆಲೆಯಲ್ಲಿ ನಾಲ್ವರನ್ನು ಬಂಧಿಸಿದ್ದರಲ್ಲದೆ ಅವರ ಮೇಲೆ ಜಾತಿ ನಿಂದನೆಯ ಕೇಸನ್ನೂ ದಾಖಲಿಸಿಕೊಂಡಿದ್ದರು. ಈಗ ಅದಕ್ಕೆ ಕೊಲೆಯೂ ಸೇರಿಕೊಂಡಿತು. ಪ್ರಕರಣ ಹೇಗೆಲ್ಲ ಹಾದುಹೋಗಿತ್ತೆಂದರೆ ಆರಂಭದಲ್ಲಿ ಬಲಾತ್ಕಾರದ ಸುಳಿವಿರಲಿಲ್ಲ ಮತ್ತು ಒಬ್ಬ ಹುಡುಗನ ಮೇಲೆ ಮಾತ್ರ ಆರೋಪ ಮಾಡಲಾಗಿತ್ತು. ಈಗ ಅದಕ್ಕೆ ಬಲಾತ್ಕಾರ, ಜಾತಿ ನಿಂದನೆ, ಕೊಲೆಯ ಆರೋಪವಷ್ಟೇ ಅಲ್ಲದೆ ನಾಲ್ಕು ಜನರನ್ನು ಇದಕ್ಕೆ ಸೇರಿಸಲಾಗಿತ್ತು. ಈ ಪ್ರಕರಣದ ಕಾವಿನಲ್ಲಿ ಚಳಿ ಕಾಯಿಸಿಕೊಳ್ಳಲು ಇದ್ದಬದ್ದ ಪಕ್ಷಗಳೆಲ್ಲ ಹಾಥರಸ್ ಬಳಿ ಧಾವಿಸಿದವು. ರಾಹುಲ್ ಮತ್ತು ಪ್ರಿಯಾಂಕಾ ಪ್ರಕರಣವನ್ನು ಅದೆಷ್ಟು ಆನಂದಿಸಿದರೆಂದರೆ ಹಾಥರಸ್​ಗೆ ಹೋಗುವ ಮಾರ್ಗದಲ್ಲಿ ಕಾರಿನಲ್ಲಿ ತಮಾಷೆ ಮಾಡಿಕೊಳ್ಳುತ್ತ ಹೋದ ವಿಡಿಯೋ ವೈರಲ್ ಆಯ್ತು. ಪೊಲೀಸರು ಮುಟ್ಟಿದ ಮಾತ್ರಕ್ಕೆ ರಾಹುಲ್ ಉರುಳಿ ಬಿದ್ದಂತೆ ನಟಿಸಿ ಅಪಹಾಸ್ಯಕ್ಕೆ ಒಳಗಾದರು. ಪತ್ರಕರ್ತೆಯೊಬ್ಬಳು ಪೀಡಿತೆಯ ಸಹೋದರನನ್ನು ತನಗೆ ಬೇಕಾದಂತೆ ಹೇಳಿಕೆ ಕೊಡಲು ಪುಸಲಾಯಿಸಿದ ಆಡಿಯೊ ಖಾಸಗಿ ಮಾಧ್ಯಮವೊಂದಕ್ಕೆ ಸಿಕ್ಕು ಇಡಿಯ ಪ್ರಕರಣದ ಹೊಸದಿಕ್ಕನ್ನು ಅನಾವರಣಗೊಳಿಸಲು ಸಹಕಾರವಾಯ್ತು.

    ದೇಶದೆಲ್ಲೆಡೆ ಈ ಪ್ರಕರಣವನ್ನು ದಲಿತರು ಮತ್ತು ಮೇಲ್ವರ್ಗದವರ ನಡುವಿನ ಕದನವಾಗಿ ಮಾರ್ಪಡಿಸುವ ಜೋರಾದ ಪ್ರಯತ್ನ ಶುರುವಾಯ್ತು. ಬಿಹಾರದಲ್ಲಿ ಲಾಲು ಪುತ್ರ ಪ್ರೆಸ್​ವಿುೕಟ್​ನಲ್ಲಿ ತನ್ನ ಜೊತೆಗಾರರೊಂದಿಗೆ ಪಿಸು ಮಾತನಾಡುತ್ತ, ‘ಉತ್ತರಪ್ರದೇಶದ ಹೆಣ್ಣುಮಗಳ ಸಾವಿಗೆ ಒಂದು ನಿಮಿಷದ ಮೌನವನ್ನಾಚರಿಸಿಬಿಡೋಣ. ದಲಿತರ ನಡುವೆ ಒಳ್ಳೆಯ ಸಂದೇಶ ಹೋಗುತ್ತದೆ’ ಎಂದು ಹೇಳಿದ ವಿಡಿಯೋ ವೈರಲ್ ಆಗಿ ರಣಹದ್ದುಗಳ ಮನಸ್ಥಿತಿ ಬಯಲಾಗಿಹೋಯ್ತು. ಈ ವೇಳೆಗೆ ಗಟ್ಟಿತನ ಪ್ರದರ್ಶಿಸಿದ ಯೋಗಿ ಆದಿತ್ಯನಾಥರು ಮುಲಾಜಿಲ್ಲದೆ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಿದರು. ಇದನ್ನು ಪ್ರತಿಪಕ್ಷಗಳು ನಿರೀಕ್ಷಿಸಿರಲಿಲ್ಲ. ಎಲ್ಲ ವಿವರವನ್ನೂ ಮುಂದಿಟ್ಟುಕೊಂಡು ಕುಳಿತಿದ್ದ ಆದಿತ್ಯನಾಥರು ಸುಳ್ಳು ಪತ್ತೆ ಪರೀಕ್ಷಣೆಗೂ ಕೇಳಿಕೊಂಡಿದ್ದರು. ಈಗ ಪೀಡಿತರ ಕುಟುಂಬದಲ್ಲಿ ಚಳಿ-ಜ್ವರ ಆರಂಭವಾಯ್ತು. ವಾಸ್ತವವಾಗಿ ಎಲ್ಲೆಡೆ ಪೀಡಿತರ ಕುಟುಂಬಗಳು ಸಿಬಿಐ ವಿಚಾರಣೆಯನ್ನು, ನಾರ್ಕೆ ಅನಾಲಿಸಿಸ್ ಅನ್ನು ಕೇಳಿಕೊಳ್ಳುತ್ತವೆ. ಆದರೆ ಇಲ್ಲಿ ಮಾತ್ರ ಸಿಬಿಐ ವಿಚಾರಣೆಯನ್ನು ಹೆಣ್ಣುಮಗಳ ಪರಿವಾರದವರು ವಿರೋಧಿಸಿದರಲ್ಲದೆ ಸುಳ್ಳು ಪತ್ತೆ ಪರೀಕ್ಷೆಗೆ ಸಹಕರಿಸುವುದಿಲ್ಲವೆಂದು ಘಂಟಾಘೊಷವಾಗಿ ಹೇಳಿಬಿಟ್ಟರು. ಅದಕ್ಕೆ ಕೊಟ್ಟ ಕಾರಣವೇನು ಗೊತ್ತೇ? ಅದರ ಬಗ್ಗೆ ತಮಗೇನೂ ತಿಳಿಯದಿರುವುದರಿಂದ ಈ ಪರೀಕ್ಷೆಗೆ ಒಪ್ಪಲಾಗುವುದಿಲ್ಲವೆಂಬುದು ಮಾತ್ರ. ಈಗ ತಡಬಡಾಯಿಸಿದ ವಿರೋಧ ಪಕ್ಷಗಳು ಸುಪ್ರೀಂಕೋರ್ಟಿನ ನ್ಯಾಯಾಧೀಶರುಗಳ ನೇತೃತ್ವದಲ್ಲಿ ವಿಚಾರಣೆ ನಡೆಸಬೇಕೆಂದು ಕುಟುಂಬದವರ ಮೂಲಕ ಆಗ್ರಹಪಡಿಸಿದರು. ಅಚ್ಚರಿ ನೋಡಿ, ಸುಳ್ಳು ಪರೀಕ್ಷೆ ಯಂತ್ರದ ಬಗ್ಗೆ ಗೊತ್ತಿರದಿದ್ದ ಈ ಕುಟುಂಬಕ್ಕೆ ಸುಪ್ರೀಂಕೋರ್ಟಿನ ನ್ಯಾಯಾಧೀಶರಡಿಯಲ್ಲಿ ನಡೆಯುವ ವಿಚಾರಣೆ ಬಗ್ಗೆ ಗೊತ್ತಿತ್ತು! ಅಂದರೆ ಒಳಗೆ ಅನಪೇಕ್ಷಿತ ಪ್ರಕ್ರಿಯೆ ಯಾವುದೋ ನಡೆಯುತ್ತಿತ್ತು ಎಂಬುದು ನಿರ್ವಿವಾದ.

    ಈ ವೇಳೆಗೆ ಪೀಡಿತೆಯ ಅತ್ತಿಗೆಯ ಕರೆಮಾಹಿತಿಯನ್ನು ಪರಿಶೀಲಿಸಿದ ಪೊಲೀಸರಿಗೆ ಆಕೆ ನಿರಂತರವಾಗಿ ಮಾತನಾಡುತ್ತಿದ್ದ ಸಂಖ್ಯೆಯೊಂದರ ಮೇಲೆ ಅನುಮಾನ ಬಂದಿತ್ತು. ಆಗಲೇ ಗೊತ್ತಾಗಿದ್ದು ನಕ್ಸಲ್​ರೊಂದಿಗೆ ಸಂಬಂಧವಿದ್ದ ಹೆಣ್ಣುಮಗಳೊಬ್ಬಳು ಈ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಾಗಿನಿಂದಲೂ ಆ ಮನೆಯೊಳಗೆ ಸೇರಿಕೊಂಡು ಹುಡುಗಿಯ ಅತ್ತಿಗೆಯೆಂದು ತಾನೇ ಪರಿಚಯಿಸಿಕೊಂಡು ಮಾಧ್ಯಮಗಳಿಗೆಲ್ಲ ಸಂದರ್ಶನ ಕೊಡುತ್ತಿದ್ದಳು. ಪ್ರಕರಣದಲ್ಲಿರುವ ಈ ರೀತಿಯ ಒಂದೊಂದೂ ಘಟನೆಗಳು ಬೆಳಕಿಗೆ ಬರುತ್ತಿದ್ದಂತೆ ಪ್ರತಿಪಕ್ಷಗಳ ಸಂಖ್ಯೆ ಕರಗುತ್ತ ಹೋಯ್ತಲ್ಲದೆ ಇವೆಲ್ಲವೂ ತಮ್ಮ ಬುಡಕ್ಕೇ ಬರಲಿದೆ ಎಂಬುದೂ ಅರಿವಾಯ್ತು. ಇಡಿಯ ಘಟನೆಯನ್ನು ಗಲಭೆಯಾಗಿ ಪರಿವರ್ತಿಸಲು ಪಿಎಫ್​ಐನ ಮೂಲಕ ಹಣ ಸಂದಾಯವಾಗುತ್ತಿರುವುದು, ವಿದೇಶಗಳ ಕೈವಾಡ ಇದರಲ್ಲಿರುವುದು ಬೆಳಕಿಗೆ ಬರುತ್ತಿದ್ದಂತೆ ಮುಖ್ಯಭೂಮಿಕೆಯ ಅನೇಕರು ಕಾಣೆಯಾಗಿಯೇಬಿಟ್ಟರು. ಅದಕ್ಕೆ ಪೂರಕವಾಗಿ ಫೇಸ್​ಬುಕ್​ನಲ್ಲಿ ಅರಚಾಡುತ್ತಿದ್ದ ‘ನೀವೇಕೆ ಮಾತನಾಡುತ್ತಿಲ್ಲ’ ಎಂದು ಕೇಳುತ್ತಿದ್ದ ಎಮೋಷನಲ್ ಬ್ಲಾಕ್​ವೆುೕಲರ್​ಗಳು ಬಿಸಿಲು ಬಿದ್ದೊಡನೆ ನಾಪತ್ತೆಯಾಗುವ ಜಿಗಣೆಗಳಂತೆ ನಾಪತ್ತೆಯಾಗಿಬಿಟ್ಟರು.

    ಇವೆಲ್ಲದರ ನಡುವೆ ಹೆಣ್ಣೊಂದು ವಸ್ತುವಾಗಿ ಬಳಕೆಯಾಗಿಬಿಟ್ಟಿದ್ದಾಳೆ. ಎದುರಾಳಿಗಳನ್ನು ಪೀಡಿಸಲು, ಹಿಂಸಿಸಲು, ಬಲಾತ್ಕಾರವನ್ನೊಂದು ಅಸ್ತ್ರವಾಗಿ ಮಾಡಿಕೊಳ್ಳುತ್ತಿರುವುದು ದುರಂತಕಾರಿ ಸಂಗತಿ. ಹೀಗೆ ಮಾಡಿಯೇ ಜಾತಿ ನಿಂದನೆಯ ಕಾನೂನು ಬಲ ಕಳೆದುಕೊಂಡಿದೆ. ಅದೇ ಸಾಲಿಗೆ ಬಲಾತ್ಕಾರವೂ ಸೇರಿಕೊಂಡುಬಿಟ್ಟರೆ ನೊಂದ ಹೆಣ್ಣುಮಕ್ಕಳ ರಕ್ಷಣೆಗೆ ಯಾರೂ ಬರಲಾರರು. ಅಧಿಕಾರದಲ್ಲಿ ತಾನು ಉಳಿಯಲೆಂದು ಇತರರ ಬದುಕನ್ನು ಧ್ವಂಸಗೊಳಿಸುವ ಈ ರಣಹದ್ದುಗಳಿಗೆ ನಾವುಗಳೇ ಸರಿಯಾದ ಪಾಠ ಕಲಿಸಬೇಕು!

    ಏರಿದ ಏಣಿಯನ್ನು ಮರೆತುಬಿಟ್ಟರೆ ಹೇಗೆ?!: ಚಕ್ರವರ್ತಿ ಸೂಲಿಬೆಲೆಯವರ ಅಂಕಣ ವಿಶ್ವಗುರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts