ಹರಿಹರ: ವಿಶಾಖಪಟ್ಟಣಂನಲ್ಲಿ ಇತ್ತೀಚೆಗೆ ಎಲ್ಜಿ ಪಾಲಿಮರ್ಸ್ ಕಾರ್ಖಾನೆಯಲ್ಲಿ ಸಂಭವಿಸಿದ ಅನಿಲ ಸೋರಿಕೆ ದುರಂತ ತಾಲೂಕಿನ ಜನತೆಯಲ್ಲಿ ಆತಂಕ ಸೃಷ್ಟಿಸಿದೆ.
ತಾಲೂಕಲ್ಲಿ ಮೂರು ಕಾರ್ಖಾನೆಗಳಿದ್ದು, ನಗರದ ಸಮೀಪದ ಹರಿಹರ ಪಾಲಿಫೈಬರ್ಸ್ ಹಾಗೂ ಗ್ರಾಸಲೀನ್, ಬೆಳ್ಳೂಡಿ ಸಮೀಪದ ಕಾರ್ಗಿಲ್ ಕಾರ್ಖಾನೆಗಳಾಗಿವೆ. ಈ ಪೈಕಿ ಹರಿಹರ ಪಾಲಿಫೈಬರ್ಸ್ ಹಾಗೂ ಗ್ರಾಸಲೀನ್ ಕೆಮಿಕಲ್ ಕಾರ್ಖಾನೆಗಳಾಗಿವೆ. ಕಾರ್ಗಿಲ್ ಕೃಷಿ ಆಧಾರಿತವಾಗಿದ್ದು, ಬೃಹತ್ ಬಾಯ್ಲರ್ಗಳನ್ನು ಒಳಗೊಂಡಿವೆ.
ಹರಿಹರ ಪಾಲಿಫೈಬರ್ಸ್ ಹಾಗೂ ಗ್ರಾಸಲೀನ್ ಬಾಯ್ಲರ್ ಲೀಕೇಜ್ ಆದರೆ ದೊಡ್ಡ ಅನಾಹುತ ಸಂಭವಿಸುವ ಭೀತಿ ಸುತ್ತಮುತ್ತಲ ನಾಗರಿಕರಲ್ಲಿ ಶುರುವಾಗಿದೆ. ಮೂರು ವರ್ಷಗಳ ಹಿಂದೆ ಪಾಲಿಫೈಬರ್ಸ್ ಕಾರ್ಖಾನೆ ಉತ್ಪಾದನಾ ಸಾಮರ್ಥ್ಯವನ್ನು ದ್ವಿಗುಣಗೊಳಿಸಿಕೊಂಡಿದ್ದು, ಮೊದಲಿಗಿಂತ ದೊಡ್ಡ ಗಾತ್ರದ ಬಾಯ್ಲರ್ಗಳನ್ನು ಎರಡೂ ಯುನಿಟ್ಗಳಲ್ಲಿ ಅಳವಡಿಸಲಾಗಿದೆ.
45 ದಿನಗಳಿಂದ ಈ ಕಾರ್ಖಾನೆಗಳು ಬಂದ್ ಆಗಿದ್ದು ಏನಾದರೂ ಅವಘಡ ನಡೆದರೆ ಹೇಗೆಂಬ ಆತಂಕ ಜನರಲ್ಲಿ ಸಹಜವಾಗಿ ಆರಂಭವಾಗಿದೆ. ಈ ಕಾರ್ಖಾನೆಗಳ ಸ್ಥಿತಿಗತಿ ಕುರಿತು ದಾವಣಗೆರೆ ಹಾಗೂ ಹಾವೇರಿ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು. ತಜ್ಞರನ್ನು ಕರೆಸಿ ಕೂಡಲೇ ಪರಿಶೀಲನೆ ಕಾರ್ಯ ಮಾಡಬೇಕೆಂದು ಜನರು ಆಗ್ರಹಿಸಿದ್ದಾರೆ.
ವಿಶಾಖಪಟ್ಟಣದ ಕಾರ್ಖಾನೆಯಲ್ಲಿ ಇದ್ದಂಥ ವಿಷಾನಿಲದ ಕೈಗಾರಿಕೆಗಳು ನಮ್ಮಲ್ಲಿ ಇಲ್ಲ. ಕೆಲವು ಕಡೆ ಕ್ಲೋರಿನ್ ಗ್ಯಾಸ್ ಬಳಸುತ್ತಾರೆ. ಅದಕ್ಕೆ ಅವರು ವಿಪತ್ತು ನಿರ್ವಹಣೆ ಯೋಜನೆ ಪ್ರಕಾರ ಮುಂಜಾಗ್ರತೆ ತಗೆದುಕೊಳ್ಳುತ್ತಾರೆ. ಪ್ರತಿ ವರ್ಷ ನಿರ್ವಹಣೆ ಮಾಡುತ್ತಾರೆ ಎನ್ನುತ್ತಾರೆ ದಾವಣಗೆರೆ ಜಿಲ್ಲಾ ಪರಿಸರ ಅಧಿಕಾರಿ ಕೆ.ಬಿ. ಕೊಟ್ರೇಶ್.