ಕೊಲಂಬೋ: ಸೋಮವಾರ ಪಾಕಿಸ್ತಾನ ವಿರುದ್ಧ ನಡೆದ ಏಷ್ಯಾಕಪ್ ಸೂಪರ್-4 ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಜಯಗಳಿಸಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ವಿರಾಟ್ ಕೊಹ್ಲಿ ಹಾಗೂ ಕೆ.ಎಲ್. ರಾಹುಲ್ ಶತಕಗಳ ಫಲವಾಗಿ 50 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 356 ರನ್ ಗಳಿಸಿತ್ತು. ಬೃಹತ್ ಗುರಿ ಬೆನ್ನಟ್ಟಿದ್ದ ಪಾಕಿಸ್ತಾನಕ್ಕೆ ಕಡಿವಾಣ ಹೇರಿದ ಟೀಂ ಇಂಡಿಯಾದ ಬೌಲರ್ಗಳು 128 ರನ್ಗಳಿಗೆ ಎದುರಾಳಿ ತಂಡವನ್ನು ಆಲೌಟ್ ಮಾಡಿತ್ತು.
ಟೀಂ ಇಂಡಿಯಾ ಪರ ಬೌಲಿಂಗ್ ಮಾಡಿದ ಕುಲ್ದೀಪ್ ಯಾದವ್ (8-0-25-5) ಗರಿಷ್ಠ ವಿಕೆಟ್ ಪಡೆದಿದ್ದಾರೆ. ಪಾಕಿಸ್ತಾನ ವಿರುದ್ಧ ಭರ್ಜರಿ ಬ್ಯಾಟಿಂಗ್ ಮಾಡಿದ ವಿರಾಟ್ ಕೊಹ್ಲಿ ಅವರನ್ನು ಪಂದ್ಯಶ್ರೇಷ್ಠನನ್ನಾಗಿ ಆಯ್ಕೆ ಮಾಡಲಾಯಿತು. ಆದರೆ, ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಈ ವಿಚಾರವಾಗಿ ಅಪಸ್ವರ ತೆಗೆಯುವ ಮೂಲಕ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ವಿರಾಟ್ ಬದಲಿಗೆ ಇವರಿಗೆ ನೀಡಬೇಕಿತ್ತು
ಮಂದ್ಯ ಮುಗಿದ ಬಳಿಕ ಗೌತಮ್ ಗಂಭೀರ್ಗೆ ಈ ಪಂದ್ಯದಲ್ಲಿ ನಿಮ್ಮ ಪ್ರಕಾರ ಯಾವ ಆಟಗಾರ ಅದ್ಭುತ ಪ್ರದರ್ಶನ ನೀಡಿದ್ದಾರೆ ಎಂಬ ಪ್ರಶ್ನೆ ಕೇಳಲಾಯಿತು. ನನ್ನ ಪ್ರಕಾರ ಪಂದ್ಯಶೇಷ್ಠ ಪ್ರಶಸ್ತಿಗೆ ವಿರಾಟ್ ಕೊಹ್ಲಿ ಅರ್ಹರು. ಆದರೆ, ನನ್ನ ಪ್ರಕಾರ ಈ ಪ್ರಶಸ್ತಿಯನ್ನು ಕುಲದೀಪ್ ಯಾದವ್ ಅವರಿಗೆ ನೀಡಬೇಕಿತ್ತು ಎಂದು ಹೇಳುವ ಮೂಲಕ ವಿರಾಟ್ ಕೊಹ್ಲಿ ವಿರುದ್ಧ ಅಸಮಾಧಾನವನ್ನು ಹೊರಹಾಕಿದ್ದಾರೆ.
ಬಳಿಕ ತಮ್ಮ ಹೇಳಿಕೆ ಕುರಿತು ಸ್ಪಷ್ಠತೆ ನೀಡಿದ ಗಂಭೀರ್, ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಕುಲದೀಪ್ ಯಾದವ್ ಐದು ವಿಕೆಟ್ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ. ಕುಲದೀಪ್ ಪಾಕ್ ಬ್ಯಾಟಿಂಗ್ ಕ್ರಮಾಂಕದ ಬೆನ್ನೆಲುಬನ್ನು ಮುರಿಯುವ ಮೂಲಕ ಬೃಹತ್ ಗುರಿಯನ್ನು ರಕ್ಷಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಹೀಗಾಗಿ ನನ್ನ ಪ್ರಕಾರ ಕುಲದೀಪ್ ಯಾದವ್ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ನೀಡಬೇಕು ಎಂದಿದ್ಧಾರೆ.
ವಿರಾಟ್ ಹಾಗೂ ರಾಹುಲ್ ಶತಕ ಸಿಡಿಸಿದ್ದಾರೆಂದು ನನಗೆ ತಿಳಿದಿದೆ. ರೋಹಿತ್ ಮತ್ತು ಶುಭ್ಮನ್ ಗಿಲ್ ಕೂಡ ಅರ್ಧಶತಕಗಳಿಸಿದ್ದಾರೆ. ಆದರೆ, ವೇಗದ ಬೌಲರ್ಗಳಿಗೆ ಹೆಚ್ಚು ನೆರವಾಗುವ ಪಿಚ್ನಲ್ಲಿ ಸ್ಪಿನರ್ ಒಬ್ಬರು 8 ಓವರ್ಗಳಲ್ಲಿ ಐದು ವಿಕೆಟ್ಗಳನ್ನು ಪಡೆಯುವುದು ಅಷ್ಟು ಸುಲಭದ ಮಾತಲ್ಲ. ನನ ಪ್ರಕಾರ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಕುಲದೀಪ್ ಯಾದವ್ ಅವರನ್ನು ಹೊರತುಪಡಿಸಿದರೆ ಬೇರೆ ಅವರನ್ನು ನೋಡಲು ಸಾಧ್ಯವಿಲ್ಲ ಎಂದಿದ್ದಾರೆ.
ನಿಮಗೆ ಶೋಭೆ ತರುವುದಿಲ್ಲ
ಒಂದು ವೇಳೆ ಕುಲದೀಪ್ ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ಹಾಗೂ ದಕ್ಷಿಣ ಆಫ್ರಿಕಾದ ವಿರುದ್ಧ ಈ ರೀತಿ ಪ್ರದರ್ಶನ ನೀಡಿದ್ದರೆ ನನಗೆ ಅಷ್ಟು ಸಂತೋಷವಾಗುತ್ತಿರಲಿಲ್ಲ. ಏಕೆಂದರೆ ಅವರು ಸ್ಪಿನ್ ವಿರುದ್ಧ ಚೆನ್ನಾಗಿ ಆಡುವುದಿಲ್ಲ ಎಂಬ ವಿಚಾರ ಎಲ್ಲರಿಗೂ ತಿಳಿದಿದೆ. ಸ್ಪಿನ್ ಬೌಲರ್ಗಳನ್ನು ಅದ್ಭುತವಾಗಿ ಎದುರಿಸುವ ಪಾಕಿಸ್ತಾನದ ಬ್ಯಾಟರ್ಗಳ ವಿರುದ್ಧ ಆ ರೀತಿಯ ಪ್ರದರ್ಶನ ನೀಡಿದ ಕುಲದೀಪ್ ನನ್ನ ಪ್ರಕಾರದಲ್ಲಿ ಪಂದ್ಯಶ್ರೇಷ್ಠ ಎಂದು ಗೌತಮ್ ಗಂಭೀರ್ ಹೇಳಿದ್ಧಾರೆ.
ಇತ್ತ ಗೌತಮ್ ಗಂಭೀರ್ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿರುವ ನೆಟ್ಟಿಗರು ಭಾರತದ ಗೆಲುವಿನಲ್ಲಿ ವಿರಾಟ್ ಕೊಹ್ಲಿ ಅವರ ಪಾತ್ರ ಅವಿಸ್ಮರಣೀಯವಾಗಿದೆ. ರಾಹುಲ್ ಜೊತೆಗೂಡಿ ವಿರಾಟ್ ಪಾಕ್ ಬೌಲರ್ಗಳನ್ನು ಎದುರಿಸಿದ ರೀತಿ ಬೇರೊಂದು ಮಟ್ಟಕ್ಕೆ ಹೋಗಿದೆ. ವಿರಾಟ್ ವಿರುದ್ಧ ಈ ರೀತಿಯಾದ ಹೇಳಿಕೆಗಳನ್ನು ನೀಡುವುದರಿಂದ ನಿಮಗೆ ಶೋಭೆ ತರುವುದಿಲ್ಲ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.