ವಿರಾಜಪೇಟೆ: ನಗರಕ್ಕೆ ಕಳಸ ಪ್ರಾಯದಂತಿರುವ ಶ್ರೀ ಮಲೆ ಮಹದೇಶ್ವರ ದೇವರ ವಾರ್ಷಿಕ ಉತ್ಸವ ಅಂಗವಾಗಿ ಸೋಮವಾರ ಪೇಟೆ ಮೆರವಣಿಗೆ ನಡೆಯಿತು.
ವಿರಾಜಪೇಟೆ ನಗರಕ್ಕೆ ಮುಕುಟದಂತಿರುವ ಮಲೆತಿರಿಕೆ ಬೆಟ್ಟ ಎಂದು ಪ್ರಖ್ಯಾತಿ ಪಡೆದಿರುವ ಶ್ರೀ ಮಲೆ ಮಹದೇಶ್ವರ ದೇವರ ವಾರ್ಷಿಕ ಉತ್ಸವದ ಅಂಗವಾಗಿ ಪೇಟೆ ಮೆರವಣಿಗೆ ನಡೆಯಿತು. ಶುಕ್ರವಾರ ಹಿಂದೆಯೇ ಕುಂದಿರ ಮನೆಯಿಂದ ಭಂಡಾರ ಬಂದು ದೇಗುಲದಲ್ಲಿ ಕೊಡಿಮರದ ನಿಲ್ಲಿಸುವ ಮೂಲಕ ಉತ್ಸವಕ್ಕೆ ಚಾಲನೆ ದೊರೆತಿತ್ತು. ಶನಿವಾರ ನಾಗದೇವರ ವಿಶೇಷ ಪೂಜೆ ನಡೆಯಿತು. ಭಾನುವಾರ ಶ್ರೀ ಅಯ್ಯಪ್ಪ ದೇವರ ವಿಶೇಷ ಪೂಜೆ, ರಾತ್ರಿ ಇರ್ ಬೊಳಕ್ ಮಾಹಾಪೂಜೆ ನಡೆಯಿತು.
ನೆರಪು, ಎತ್ತ್ ಪೋರಾಟ್, ತೆಂಗಿನಕಾಯಿಗೆ ಗುಂಡು ಹೊಡೆದ ನಂತರ ದೇವರಿಗೆ ಮಹಾಪೂಜೆ ಸಲ್ಲಿಕೆಯಾಯಿತು. ಸಂಜೆ ಶ್ರೀ ಮಲೆ ಮಹದೇಶ್ವರ ದೇವರ ಉತ್ಸವ ಮೂರ್ತಿ( ತಡಂಬು) ನಗರ ಪ್ರದಕ್ಷಿಣೆ ಮಾಡಿತು. ನಗರದ ತೆಲುಗರ ಬೀದಿ, ಜೈನರ ಬೀದಿಯ ಶ್ರೀ ಬಸವೇಶ್ವರ ದೇವಾಲಯ (ಗೌರಿ ದೇವಸ್ಥಾನ)ದಲ್ಲಿ ವಿಶೇಷ ಪೂಜೆ ಸಲ್ಲಿಕೆಯಾಯಿತು. ಬಸವೇಶ್ವರ ದೇಗುಲದ ಆಡಳಿತ ಮಂಡಳಿಯ ವತಿಯಿಂದ ಲಘು ಉಪಾಹಾರ ನಡೆಯಿತು.
ದೇವರ ಪೇಟೆ ಆಗಮನ ಅಂಗವಾಗಿ ಮುಖ್ಯ ಬೀದಿಗಳು ಸೇರಿದಂತೆ ಬಸವೇಶ್ವರ, ಶ್ರೀ ಮಹಾಲಕ್ಷ್ಮೀ ದೇಗುಲಗಳು ವಿದ್ಯುತ್ ದೀಪಗಳಿಂದ ಕಂಗೊಳಿಸಿದವು. ಕೇರಳ ಚೆಂಡೆ ವಾದ್ಯ ಮತ್ತು ಕೊಡಗಿನ ಸಾಂಪ್ರದಾಯಿಕ ಓಲಗ ದೇವರ ಮೆರವಣಿಗೆ ಮೆರುಗು ನೀಡಿದವು.
ದೇಗುಲದ ತಕ್ಕ ಮುಖ್ಯಸ್ಥರು, ಮಗ್ಗುಲ, ಐಮಂಗಲ, ಚೆಂಬೆಬೆಳ್ಳೂರು ಗ್ರಾಮಸ್ಥರು, ಪ್ರಮುಖರು, ಶ್ರೀ ಬಸವೇಶ್ವರ ದೇವಾಲಯ ದ ಆಡಳಿತ ಮಂಡಳಿಯ ಪದಾಧಿಕಾರಿಗಳು, ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಉತ್ಸವದಲ್ಲಿ ಹಾಜರಿದ್ದರು.