ಹಾವೇರಿ: ಬೆಂಗಳೂರಿನ ಖಾಸಗಿ ಹೋಟೆಲ್ವೊಂದರಲ್ಲಿ ಗುರುವಾರ ಶಿಗ್ಗಾಂವಿ ಮಾಜಿ ಶಾಸಕ ಅಜೀಮಪೀರ ಖಾದ್ರಿ ಜತೆ ಮಾಜಿ ಸಚಿವ ವಿನಯ ಕುಲಕರ್ಣಿ ಸುಮಾರು ಮೂರು ತಾಸು ಕ್ಷೇತ್ರದ ಬಗ್ಗೆ ಸುದೀರ್ಘ ಚರ್ಚೆ ನಡೆಸಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ. ಈ ಬೆಳವಣಿಗೆ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಶಿಗ್ಗಾಂವಿ ಕ್ಷೇತ್ರದಿಂದ ವಿನಯ ಸ್ಪರ್ಧಿಸುವ ಸಾಧ್ಯತೆ ದಟ್ಟವಾಗಿದೆ.
ಸಿಎಂ ವಿರುದ್ಧ ನಾಲ್ಕು ಬಾರಿ ಸೋಲು ಕಂಡಿರುವ ಖಾದ್ರಿ ಬದಲಿಗೆ ವಿನಯ ಅವರನ್ನು ಕಳಕ್ಕೆ ಇಳಿಸಲು ಹೈಕಮಾಂಡ್ ಯತ್ನಿಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಈ ಬಗ್ಗೆ ಪಕ್ಷ ಅಧಿಕೃತ ಘೋಷಣೆಯನ್ನೂ ಮಾಡಿಲ್ಲ. ನಾಲ್ಕು ಬಾರಿ ಸೋಲು ಕಂಡಿದ್ದರಿಂದ ಮಾಜಿ ಸಿಎಂ ಸಿದ್ದರಾಮಯ್ಯ, ಜಮೀರ್ ಅಹ್ಮದ್ ಮಾತಿಗೆ ಕಟ್ಟು ಬಿದ್ದು ಖಾದ್ರಿ ಈ ಬಾರಿ ತ್ಯಾಗ ಮಾಡಲು ಮುಂದಾಗಿದ್ದಾರೆ. ವಿನಯ ಕುಲಕರ್ಣಿ ಅಥವಾ ಸಲೀಂ ಅಹ್ಮದ್ಗೆ ಟಿಕೆಟ್ ಕೊಟ್ಟರೆ ಸ್ಪರ್ಧಿಸುವೆ ಎಂದು ಸ್ವತಃ ಖಾದ್ರಿ ಕೂಡ ಹೇಳಿಕೊಂಡಿದ್ದಾರೆ.
ಈ ನಡುವೆ ವಿನಯ ಕುಲಕರ್ಣಿ ಅವರು ಕ್ಷೇತ್ರದ ಸಮಗ್ರ ಮಾಹಿತಿ ಕಲೆ ಹಾಕಿರುವುದಾಗಿ ಖಾದ್ರಿ ಅವರೇ ಹೇಳಿಕೊಂಡಿದ್ದಾರೆ. ಯಾವ ಬೂತ್ನಲ್ಲಿ ಪಕ್ಷ ಗಟ್ಟಿಯಾಗಿದೆ. ಯಾವ ಬೂತ್ನಲ್ಲಿ ಸೋಲು ಉಂಟಾಗಿದೆ ಎಂಬ ಕುರಿತು ಚಿಂತಿಸುತ್ತಿರುವ ಕಾರಣ ವಿನಯ ಅಭ್ಯರ್ಥಿಯಾಗುವುದು ಬಹುತೇಕ ಖಚಿತ ಎಂಬ ಲೆಕ್ಕಾಚಾರ ಪಕ್ಷದಲ್ಲಿ ಶುರುವಾಗಿದೆ. ಈ ಬಗ್ಗೆ ಹೈಕಮಾಂಡ್ ಖಚಿತಪಡಿಸಬೇಕಿದೆ.
ಕೋಟ್:
ವಿನಯ ಕುಲಕರ್ಣಿ ಅವರು ಶಿಗ್ಗಾಂವಿ ಕ್ಷೇತ್ರದ ಬಗ್ಗೆ ನನ್ನೊಂದಿಗೆ ಸುದೀರ್ಘವಾಗಿ ಚರ್ಚಿಸಿದ್ದಾರೆ. ಪೆನ್ನು ಹಾಳೆ ತೆಗೆದುಕೊಂಡು ಬರೆದುಕೊಂಡಿದ್ದಾರೆ. ಹಾಗಾಗಿ, ಅವರು ಅಭ್ಯರ್ಥಿ ಆಗುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಕಾಂಗ್ರೆಸ್ ಗೆಲ್ಲಬೇಕಿದೆ. ಸಿಎಂ ಸೋಲಿಸಬೇಕಿದೆ. ಹಾಗಾಗಿ, ವಿನಯ ಕುಲಕರ್ಣಿ ಅಥವಾ ಸಲೀಂ ಅಹ್ಮದ್ಗೆ ಟಿಕೆಟ್ ಕೊಟ್ಟರೆ ನಾನು ಬೆಂಬಲಿಸುವೆ.
ಅಜೀಮಪೀರ್ ಖಾದ್ರಿ, ಮಾಜಿ ಶಾಸಕ