ನವದೆಹಲಿ: ನಿರ್ಭಯಾ ಪ್ರಕರಣದಡಿಯಲ್ಲಿ ತಿಹಾರ್ ಜೈಲಿನಲ್ಲಿರುವ ಅಪರಾಧಿಗಳಲ್ಲಿ ಒಬ್ಬನಾಗಿರುವ ವಿನಯ್ ಶರ್ಮಾ ಭಾನುವಾರದಂದು ಜೈಲಿನ ಗೋಡೆಗೆ ತನ್ನ ತಲೆಯನ್ನು ಚಚ್ಚಿಕೊಂಡಿದ್ದಾನೆ. ಇದರಿಂದಾಗಿ ಆತ ತನ್ನ ತಾಯಿಯನ್ನೂ ಗುರುತಿಸಲಾಗದಂತಹ ಸ್ಥಿತಿ ತಲುಪಿದ್ದು ಆತನಿಗೆ ಹೆಚ್ಚಿನ ಚಿಕಿತ್ಸೆಗೆ ಅವಕಾಶ ಮಾಡಿಕೊಡಬೇಕು ಎಂದು ಆರೋಪಿ ಪರ ವಕೀಲರು ಕೇಳಿಕೊಂಡಿದ್ದಾರೆ.
ನಿರ್ಭಯಾ ಪ್ರಕರಣದ ಅಪರಾಧಿಗಳಾಗಿರುವ ವಿನಯ್ ಶರ್ಮಾ, ಅಕ್ಷಯ್ ಕುಮಾರ್, ಪವನ್ ಗುಪ್ತಾ ಮತ್ತು ಮುಖೇಶ್ ಸಿಂಗ್ನ್ನು ಮಾರ್ಚ್ 3ರಂದು ಗಲ್ಲಿಗೇರಿಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಗಲ್ಲು ಶಿಕ್ಷೆಗೆ ಒಂದು ವಾರ ಬಾಕಿ ಇರುವಾಗಲೇ ಫೆ.26ರಂದು ಅಪರಾಧಿ ವಿನಯ್ ಶರ್ಮಾ ಜೈಲಿನ ಗೋಡೆಗೆ ತಲೆ ಚಚ್ಚಿಕೊಂಡು ಗಾಯ ಮಾಡಿಕೊಂಡಿದ್ದಾನೆ. ಸೆಲ್ನಲ್ಲಿ ಇದ್ದ ಅಧಿಕಾರಿಗಳು ಆತ ತಲೆ ಚಚ್ಚಿಕೊಳ್ಳುತ್ತಿರುವುದನ್ನು ಗಮನಿಸಿ ತಡೆದಿದ್ದಾರೆ. ಆತನ ಆ ನಡವಳಿಕೆಯಿಂದ ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದರು.
ಈ ಕುರಿತಾಗಿ ಮಾತನಾಡಿರುವ ಅಪರಾಧಿ ಪರ ವಕೀಲ, “ವಿನಯ್ ಶರ್ಮಾ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾನೆ. ತಲೆ ಚಚ್ಚಿಕೊಂಡಿರುವುದರಿಂದ ಅವನಿಗೆ ಎಲ್ಲರ ಗುರುತು ಮರೆತುಹೋಗಿದೆ. ತಾಯಿಯನ್ನೇ ಗುರುತಿಸದ ಸ್ಥಿತಿ ತಲುಪಿದ್ದಾನೆ” ಎಂದು ಹೇಳಿದ್ದಾರೆ.
ಅಪರಾಧಿಯನ್ನು ಇನ್ಸ್ಟಿಟ್ಯೂಟ್ ಆಫ್ ಹ್ಯೂಮನ್ ಬಿಹೇವಿಯರ್ ಮತ್ತು ಅಲೈಡ್ ಸೈನ್ಸ್ಗೆ ದಾಖಲಿಸಲು ಅವಕಾಶ ಮಾಡಿಕೊಡಬೇಕು ಎಂದು ವಕೀಲ ಕೇಳಿಕೊಂಡಿದ್ದಾರೆ. ಕಳೆದ ವಾರ, ಅಪರಾಧಿಯು ಉಪವಾಸ ಸತ್ಯಾಗ್ರಹ ಮಾಡುತ್ತಿರುವುದಾಗಿ ತಿಳಿಸಿದ್ದ ವಕೀಲರು, ಆತನ ಮಾನಸಿಕ ಸ್ಥಿತಿ ಸರಿಯಾಗಿಲ್ಲ ಎಂದು ಹೇಳಿದ್ದರು.
ನಾಲ್ವರು ಅಪರಾಧಿಗಳ ಪೈಕಿ ವಿನಯ್ ಶರ್ಮಾ ಎಲ್ಲರಿಗಿಂತ ಭಿನ್ನವಾಗಿದ್ದು, ಆಗಾಗ ವಿಚಿತ್ರವಾಗಿ ವರ್ತಿಸುತ್ತಿರುತ್ತಾನೆ ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್)