ಬೆಂಗಳೂರು:
ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಸತತ ಎರಡು ದಿನಗಳು ನಿರಂತರ ಸಭೆಗಳನ್ನು ನಡೆಸುವ ಮೂಲಕ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮುಂದುವರಿಸಿದ್ದಾರೆ.
ರಾಜ್ಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಸತತ ಪ್ರವಾಸ ಮಾಡುವ ಸಂದರ್ಭದಲ್ಲಿ
ಬೂತ್ ಅಧ್ಯಕ್ಷರು, ಬಿಜೆಪಿ ಹಿರಿಯ ಮುಖಂಡರ ಮನೆಗೆ ತೆರಳಿ ಅವರ ಆರ್ಶೀವಾದ ಪಡೆದಿದ್ದರು. ಹಲವು ಜಿಲ್ಲೆಯಲ್ಲಿ ಜಿಲ್ಲಾ ಮುಖಂಡರನ್ನು ಭೇಟಿ ಮಾಡಿದ್ದರು.
ರಾಜ್ಯದ ನೂತನ ಪದಾಧಿಕಾರಿಗಳ ಪಟ್ಟಿಗೆ ಯಾವಾಗ ಹೈಕಮಾಂಡ್ ಒಪ್ಪಿಗೆ ನೀಡಿತೊ ಅಲ್ಲಿಂದ ವಿಜಯೇಂದ್ರ ಅವರು ಪಕ್ಷದ ಕಚೇರಿಯಲ್ಲಿಯೇ ಸರಣಿ ಸಭೆಗಳನ್ನು ಏರ್ಪಡಿಸಿದರು.
ಬಿಜೆಪಿ ಅಧ್ಯಕ್ಷ ಹುದ್ದೆಗೆ ನೇಮಕವಾದ ದಿನದಿಂದ ಟೀಕೆ ಟಿಪ್ಪಣಿ ಮಾಡುತ್ತಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಹಲವು ಹಿರಿಯ ಮುಖಂಡರಿಗೆ, ಪಕ್ಷದ ಕಚೇರಿಯಲ್ಲಿಯೇ ಹಿರಿಯ ಮುಖಂಡರ ಸಭೆ ನಡೆಸುವ ಮೂಲಕ ಮಾಹಿತಿ ರವಾನಿಸಿದ್ದು ಅಷ್ಟೆ ಅಲ್ಲ, ಕ್ರಮದ ಅನಿವಾರ್ಯತೆ ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದಾರೆ.
ಸಭೆಗೆ ಬಂದಿದ್ದ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಡಿ.ಎಸ್.ಸದಾನಂದಗೌಡ, ಮಾಜಿ ಸಚಿವರು, ಮಾಜಿ ಮತ್ತು ಹಾಲಿ ಶಾಸಕರು ವಿಜಯೇಂದ್ರ ನಾಯಕತ್ವಕ್ಕೆ ಹಸಿರು ನಿಶಾನೆ ತೋರಿಸಿದ್ದು, ಪಕ್ಷ ಸಂಘಟನೆಯಲ್ಲಿ ಕ್ರೀಯಾಶೀಲವಾಗಿ ತೊಡಗಿಸಿಕೊಳ್ಳುವ ಭರವಸೆಯನ್ನು ನೀಡಿರುವುದು ಪಕ್ಷದ ಅಧ್ಯಕ್ಷರಿಗೆ ಹೊಸ ಹುಮ್ಮಸ್ಸು ತಂದಿದೆ.
ತಮಗೆ ಮಗ್ಗುಲ ಮುಳ್ಳಾಗಿರುವ ಶಾಸಕ ಬಸನಗೌಡ ಪಾಟೀಲ್ ಪಾಟೀಲ್ ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿದರೆ ಆಗುವ ಸಾಧಕ ಬಾಧಕಗಳ ಬಗ್ಗೆಯೂ ಲೆಕ್ಕಾಚಾರ ಹಾಕಿ ಹೆಜ್ಜೆ ಇಡುತ್ತಿರುವ ಬಿಜೆಪಿ ಅಧ್ಯಕ್ಷರು, ಮುಂದೆ ಬರಬಹುದಾದ ಎಲ್ಲ ಸವಾಲುಗಳನ್ನು ಸ್ವೀಕರಿಸಲು ಮಾನಸಿಕವಾಗಿ ಸಿದ್ಧತೆ ಮಾಡಿಕೊಂಡಿದ್ದಾರೆ.
ಪಂಚಮಸಾಲಿ ಸಮಾಜದ ಪ್ರಭಾವಿ ಮುಖಂಡರಾಗಿರುವ ಯತ್ನಾಳ್, ದೆಹಲಿಯಲ್ಲಿಯೂ ನಾಯಕರ ಸಂಪರ್ಕದಲ್ಲಿದ್ದಾರೆ. ಯತ್ನಾಳ್, ಕೇಂದ್ರ ಸಚಿವರಾಗಿದ್ದ ಸಂದರ್ಭದಲ್ಲಿ ತಮ್ಮ ಬಳಿ ಕೆಲಸ ಕೇಳಿಕೊಂಡು ಬಂದಿದ್ದ ದೆಹಲಿ ನಾಯಕರೊಬ್ಬರು ರಾಜ್ಯ ಬಿಜೆಪಿ ಮೇಲೆ ಹಿಡಿತ ಹೊಂದಿದ್ದಾರೆ. ಹಾಗಾಗಿ ಯತ್ನಾಳ್ಗೆ ಪಕ್ಷದಿಂದ ಆಚೆ ಹಾಕಿದರೆ ಏನೇನು ಪರಿಣಾಮ ಎದುರಿಸಬೇಕಾಗುತ್ತದೆ ಎನ್ನುವ ಲೆಕ್ಕಾಚಾರದಲ್ಲಿ ವಿಜಯೇಂದ್ರ ನೇತೃತ್ವದ ತಂಡ ತಲ್ಲೀನವಾಗಿದೆ.