More

    ಚಕ್ರವರ್ತಿ ಸೂಲಿಬೆಲೆ ಅಂಕಣ: ಶಾಲೆ ಕಲಿಸದ್ದನ್ನು ಸಂಸ್ಕೃತಿ ಕಲಿಸಿತು!

    ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಸಾಮಾಜಿಕ ಜವಾಬ್ದಾರಿಯನ್ನು ಅರಿತು ತನ್ನಿಂದ ಈ ರೋಗ ಇತರರಿಗೆ ಹರಡಬಾರದೆಂದು ನಿಶ್ಚಯಿಸಿ ತನಗೆ ತಾನೇ ಚೌಕಟ್ಟು ಹಾಕಿಕೊಂಡರೆ ಸಮಸ್ಯೆ ತಿಳಿಯಾಗಿಬಿಡುತ್ತದೆ. ಹಾಗೆ ಸ್ವಯಂ ಚೌಕಟ್ಟು ಹಾಕಿಕೊಳ್ಳಲು ಹಿಂದೆಮುಂದೆ ನೋಡುವ ಸಮಾಜಕ್ಕೆ ಲಾಕ್​ಡೌನಿನ ಒತ್ತಾಯ ಮಾಡಲೇಬೇಕಾಗುತ್ತದೆ.

    ‘ಯಾವ ಸಂಕಷ್ಟ ನಮ್ಮನ್ನು ಗೊಂದಲಕ್ಕೆ ತಳ್ಳುವಲ್ಲಿ ಸೋಲುತ್ತದೆಯೋ ಆ ಸಂಕಷ್ಟವನ್ನು ಸೋಲಿಸುವುದು ಕಷ್ಟವಲ್ಲ. ಯಾವುದಾದರೂ ಕೆಡುಕನ್ನು ನಾವು ಸರಿಯಾಗಿ ನಿರೂಪಿಸಲು, ಪ್ರತಿಪಾದಿಸಲು ಸಾಧ್ಯವಾಯ್ತೆಂದರೆ ಆ ಕೆಡುಕು ತನ್ನ ಸಾಮರ್ಥ್ಯವನ್ನು ಕಳೆದುಕೊಂಡಿದೆ ಚಕ್ರವರ್ತಿ ಸೂಲಿಬೆಲೆ ಅಂಕಣ: ಶಾಲೆ ಕಲಿಸದ್ದನ್ನು ಸಂಸ್ಕೃತಿ ಕಲಿಸಿತು!ಎಂದೇ ಅರ್ಥ. ನಮ್ಮ ಸೋಲಿನ ಮುನ್ಸೂಚನೆಯನ್ನು ಸರಿಯಾಗಿ ಊಹಿಸಿ ಲೆಕ್ಕ ಹಾಕುವುದೇ ಅದನ್ನು ಗೆಲುವಾಗಿ ಪರಿವರ್ತಿಸುವ ಮಾರ್ಗ. ಜನ ಮೇಲ್​ಸ್ತರದಿಂದ ಕೆಳಸ್ತರದವರೆಗೆ ತಾವಾಗಿಯೇ ಒಗ್ಗಟ್ಟಾಗಿ ತಮ್ಮ ಪರಿಸ್ಥಿತಿಯನ್ನು ಯಾವ ಅನುಮಾನ ಮತ್ತು ಭ್ರಮೆಗಳಿಲ್ಲದೇ ನೇರವಾಗಿ ಮತ್ತು ಸೂಕ್ತವಾಗಿ ಅರ್ಥೈಸಿಕೊಂಡರೆ ಅದು ತಿಳಿಯಾಗಿಬಿಡುತ್ತದೆ’ ಇವಿಷ್ಟೂ ಅಕ್ಕ ನಿವೇದಿತೆಯ ಮಾತುಗಳು. ತನ್ನ ‘ಅಗ್ರೆಸ್ಸಿವ್ ಹಿಂದೂಯಿಸಂ’ ಎಂಬ ಭಾಷಣದಲ್ಲಿ ಹೇಳುತ್ತಾರೆ. ಆಕೆ ಇದನ್ನು ಹೇಳಿರುವ ಸಂದರ್ಭ ಬೇರೆಯದ್ದೇ. ಆದರೆ ಕರೊನಾ ಹಬ್ಬುತ್ತಿರುವ ಈ ಹೊತ್ತಿನಲ್ಲಿ ಈ ಸಾಲುಗಳನ್ನು ಮತ್ತೆ ಓದಿಕೊಂಡರೆ ಸಮಸ್ಯೆ, ಪರಿಹಾರ ಎರಡೂ ಸೂಕ್ತವಾಗಿ ಕಣ್ಣೆದುರು ನಿಲ್ಲುತ್ತದೆ. ಯಾವುದಾದರೂ ಸಂಕಟ ನಮ್ಮನ್ನು ಸೋಲಿಸಬೇಕೆಂದರೆ ಅದು ನಮಗೇ ಗೊತ್ತಾಗದಂತೆ ನಮ್ಮ ಮೇಲೆರಗಬೇಕು. ಅಚಾನಕ್ಕು ದಾಳಿ ಯುದ್ಧವನ್ನು ಅರ್ಧ ಗೆಲ್ಲಿಸಿಬಿಡುತ್ತದೆ. ಹಾಗೆಂದು ಪ್ರತೀ ಯುದ್ಧಕಲೆಯೂ ಹೇಳುತ್ತದೆ. ಇದೂ ಹಾಗೆಯೇ. ಕರೊನಾ ಅಚಾನಕ್ಕು ದಾಳಿಯೇ. ಚೀನಾ ಇದನ್ನು ತನ್ನ ಪ್ರಯೋಗಶಾಲೆಯಲ್ಲಿ ಸೃಷ್ಟಿಸಿತ್ತೋ ಅಥವಾ ವುಹಾನಿನ ಜೀವಂತ ಪ್ರಾಣಿಗಳ ಮಾರುಕಟ್ಟೆಯಿಂದ ಅದು ಎಲ್ಲೆಡೆ ಹಬ್ಬಿತೋ ಚರ್ಚೆಯ ವಿಷಯವಲ್ಲ. ಆದರೆ, ಈ ವೈರಸ್ಸು ಮಾತ್ರ ನಮಗೇ ಗೊತ್ತಿಲ್ಲದ ದಿಕ್ಕಿನಿಂದ ನಮ್ಮ ಮೇಲೆ ದಾಳಿ ಮಾಡಿತು. ಈ ರೀತಿ ಅದು ಜಗತ್ತನ್ನು ಗೊಂದಲಕ್ಕೆ ತಳ್ಳದೇ ಹೋಗಿದ್ದಲ್ಲಿ ಇಷ್ಟು ಹೊತ್ತಿಗೆ ಅದನ್ನು ಸೋಲಿಸಿಬಿಟ್ಟಿರುತ್ತಿದ್ದೆವು. ಆದರೆ ಹಾಗಾಗಲಿಲ್ಲ. ಈ ವೈರಸ್ಸಿನ ಸ್ವರೂಪ, ವಿಸ್ತಾರ, ಹರಡುವ ಬಗೆ, ಮರುಕಳಿಸುವ ಬಗೆ ಇವ್ಯಾವುದರ ಕುರಿತಂತೆಯೂ ಜಗತ್ತಿನ ಬಳಿ ಸಾಕಷ್ಟು ಮಾಹಿತಿಯೇ ಇಲ್ಲ. ಸ್ವತಃ ವಿಶ್ವ ಆರೋಗ್ಯ ಸಂಸ್ಥೆ ಚೀನಾದ ವರದಿಯ ಆಧಾರದ ಮೇಲೆ ‘ಇದು ಮನುಷ್ಯರಿಂದ ಮನುಷ್ಯರಿಗೆ ಹರಡುವ ಜಾತಿಯದ್ದಲ್ಲ’ ಎಂದು ಹೇಳಿಬಿಟ್ಟಿತ್ತು. ಈಗಲೂ ಹೆಚ್ಚು ಉಷ್ಣತೆ ಇರುವ ಪ್ರದೇಶಗಳಲ್ಲಿ ಈ ವೈರಸ್ಸು ಹರಡುತ್ತದೆಯೋ ಇಲ್ಲವೋ ಎಂಬುದನ್ನು ದೃಢಪಡಿಸಲು ಯಾರಿಂದಲೂ ಸಾಧ್ಯವಾಗಲಿಲ್ಲ. ಚೀನಾದಲ್ಲಿ ಕಂಡುಬಂದ ವೈರಸ್​ನ ಮ್ಯುಟೇಶನ್​ಗಳಿಗೂ ಜಗತ್ತಿನ ಬೇರೆಬೇರೆ ಭಾಗಗಳಲ್ಲಿ ಕಂಡು ಬಂದ ವೈರಸ್ಸಿನ ಬಗೆಗೂ ಸಾಮ್ಯ ಇದೆಯಾ? ಇನ್ನೂ ಗೊತ್ತಾಗಿಲ್ಲ!

    ಭಾರತದ ವಿಚಾರಕ್ಕೆ ಬರುವುದಾದರೆ ನಮ್ಮನ್ನು ಆವರಿಸಿರುವ ಕರೊನಾ ವೈರಸ್ ಅತ್ಯಂತ ನಿರ್ಬಲ ಮಾದರಿಯದ್ದು ಎಂದು ಕೆಲವರು ಹೇಳುತ್ತಿದ್ದಾರಾದರೂ ಅಧಿಕೃತವಾದ ಪುರಾವೆಗಳು ಯಾರಿಂದಲೂ ಬಂದಿಲ್ಲ. ಅಕ್ಕನ ಮಾತನ್ನು ಮತ್ತೊಮ್ಮೆ ನೋಡಿ. ಕೆಡುಕನ್ನು ಸರಿಯಾಗಿ ನಿರೂಪಿಸಲಿಕ್ಕೂ, ಪ್ರತಿಪಾದಿಸಲಿಕ್ಕೂ ನಮ್ಮ ಬಳಿ ಸಾಧ್ಯವಾಗುತ್ತಿಲ್ಲವೆಂದೇ ಅದು ಇನ್ನೂ ಮೆರೆದಾಡುತ್ತಿದೆ. ದುರಂತವೆಂದರೆ ಜನಸಾಮಾನ್ಯರು ಬಿಡಿ, ವೈದ್ಯರೆನಿಸಿಕೊಂಡವರು ಕೂಡ ಈ ವೈರಸ್ಸಿನ ಕುರಿತಂತೆ ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಜನತಾ ಕರ್ಫ್ಯೂ ಹೊತ್ತಿನಲ್ಲಿ 14 ಗಂಟೆಗಳ ಕಾಲ ಬದುಕುವ ವೈರಸ್ ಇದು ಎಂಬ ಹೇಳಿಕೆಯಿಂದ ಹಿಡಿದು ಬಿಸಿನೀರು ಕುಡಿಯುತ್ತಿದ್ದರೆ ಗಂಟಲಿಂದ ಇದು ಇಳಿದು ಹೋಗುತ್ತದೆ ಎಂಬ ಹೇಳಿಕೆಯವರೆಗೂ ಯಾವುದಕ್ಕೂ ಪುರಾವೆಗಳಿರಲಿಲ್ಲ. ಒಟ್ಟಾರೆ ಜಗತ್ತೆಲ್ಲ ಅರಿಯದ ಶತ್ರುವಿನೊಂದಿಗೆ ಶಸ್ತŠವೇ ಇಲ್ಲದೇ ಹೋರಾಡುವ ಸ್ಥಿತಿಗೆ ಬಂದುಬಿಟ್ಟಿದೆ. ಈಗ ಈ ಹೋರಾಟದಲ್ಲಿ ಗೆಲುವು ನಮ್ಮದಾಗಿಸಿಕೊಳ್ಳುವುದು ಹೇಗೆ? ಅಕ್ಕ ಕೊನೆಯ ಎರಡು ಸಾಲುಗಳಲ್ಲಿ ಅದಕ್ಕೂ ಉತ್ತರವನ್ನು ಕೊಡುತ್ತಾಳೆ. ಒದಗಬಹುದಾಗಿರುವ ಸೋಲನ್ನು ಮೊದಲು ನಿಶ್ಚಯಿಸಿಕೊಂಡು ಅದನ್ನು ಅಂದಾಜು ಮಾಡಿಕೊಳ್ಳುವುದೇ ಮೊದಲ ಹಂತ. ಆರಂಭದಿಂದಲೂ ಭಾರತೀಯರು ಈ ಯುದ್ಧದಲ್ಲಿ ನಾವು ಭಾಗವಹಿಸಬೇಕಾದ ಅಗತ್ಯವೇ ಇಲ್ಲ ಎಂಬ ಅಲಿಪ್ತನೀತಿಯನ್ನು ಅನುಸರಿಸಿದ್ದೇವೆ. ನಮ್ಮ ಸಂಸ್ಕೃತಿಯ ವಿಭಿನ್ನ ಆಚರಣೆಗಳೇ ಈ ಹೋರಾಟದಲ್ಲಿ ನಮ್ಮನ್ನು ಗೆಲ್ಲಿಸಿಕೊಡುತ್ತವೆಂದು ನಾವು ನಂಬಿಕೊಂಡೇ ಕುಳಿತಿದ್ದೆವು. ‘ನಮಸ್ತೆ’ ಮಾಡುವುದು ಒಳ್ಳೆಯ ಪದ್ಧತಿ ಹೌದು, ಆದರೆ ವೈರಸ್ಸು ಬರೀ ಮುಟ್ಟುವುದರಿಂದ ಮಾತ್ರ ಹರಡುತ್ತಿಲ್ಲ. ಅದು ಕೆಮ್ಮು, ಸೀನಿನ ಹನಿಗಳ ಮೂಲಕ ಭಿನ್ನಭಿನ್ನ ವಸ್ತುಗಳ ಮೇಲೆ ಬಿದ್ದಿದ್ದು ಅದನ್ನು ಮುಟ್ಟುವಾಗಲೂ ಹರಡುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಒಟ್ಟಿಗೆ ಕೂತು ಊಟ ಮಾಡುವುದು, ಒಬ್ಬರಿಗೊಬ್ಬರು ಬಡಿಸುವುದು, ಇವೂ ಕೂಡ ರೋಗ ಹಬ್ಬಲು ಒಂದು ಕಾರಣವೇ. ಹೀಗೆ ನೋಡಿದಾಗ ಬಲು ಶಿಷ್ಟಾಚಾರವನ್ನು ಅನುಸರಿಸುವ ಇಂಗ್ಲಿಷರ ಸಂಪ್ರದಾಯ ಎಷ್ಟು ಒಳ್ಳೆಯದಿತ್ತಲ್ಲವೇ? ಹಾಗೆಂದು ಬಿಡಲಾಗುವುದೇನು! ಇದಕ್ಕೆ ಪ್ರತಿಯಾಗಿ ಒಂದೇ ತಟ್ಟೆಯಲ್ಲಿ ನಾಲ್ಕಾರು ಜನ ಊಟ ಮಾಡುವ ಮುಸಲ್ಮಾನರ ವ್ಯವಸ್ಥೆಯನ್ನು ಏನೆನ್ನುತ್ತೀರಿ? ಸಾಮಾನ್ಯ ದಿನಗಳಲ್ಲಿ ಭ್ರಾತೃತ್ವ ವೃದ್ಧಿಸಲು ಇದು ಒಳ್ಳೆಯ ಮಾದರಿ ಎಂದವರೇ ಈಗ ‘ಈ ಅಭ್ಯಾಸವನ್ನೆಲ್ಲ ಬಿಡಿ’ ಎಂದು ಆದೇಶಿಸಬೇಕಾದ ಅನಿವಾರ್ಯತೆ ತಲುಪಿದ್ದಾರೆ.

    ಒಟ್ಟಾರೆ ಹೇಳಬೇಕಾದ್ದಿಷ್ಟೇ. ಆಕ್ರಮಣಕಾರಿಯಾಗಿ ಬಂದ ಕರೊನಾ ಎದುರಿಸಲು ನಾವು ವೈಯಕ್ತಿಕ ನೆಲೆಗಟ್ಟಿನಲ್ಲಿ ಇನ್ನಷ್ಟು ಸಜ್ಜಾಗಬೇಕಿತ್ತು. ನಮ್ಮ ಸೋಲನ್ನು ಸಾಧ್ಯವಾದಷ್ಟೂ ಊಹಿಸಿಕೊಳ್ಳುವ ಪ್ರಯತ್ನ ಮಾಡಬೇಕಿತ್ತು. ಅತ್ಯಂತ ಕೆಟ್ಟ ಸ್ಥಿತಿಯಲ್ಲಿ ನಮಗಾಗಬಹುದಾಗಿದ್ದ ಸಾವು, ನೋವು, ನಷ್ಟಗಳ ಲೆಕ್ಕಾಚಾರ ಮಾಡಿಕೊಳ್ಳಬೇಕಿತ್ತು. ಅದರಿಂದ ಈ ಯುದ್ಧವನ್ನು ಆರಂಭದಲ್ಲೇ ಅರ್ಧ ಗೆದ್ದಿರುತ್ತಿದ್ದೆವು!

    ಹಾಗೆ ನೋಡಿದರೆ, ಕೇಂದ್ರಸರ್ಕಾರ ಜಗತ್ತೆಲ್ಲ ಎಚ್ಚೆತ್ತುಕೊಳ್ಳುವ ಮುನ್ನವೇ ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ ಕಾರ್ಯಸೂಚಿ ಆಧಾರದ ಮೇಲೆ ತನ್ನ ಕೆಲಸವನ್ನು ಆರಂಭಿಸಿಬಿಟ್ಟಿತ್ತು. ವಿದೇಶದಿಂದ ಬರುವ ಯಾತ್ರಿಕರ ಮೇಲೆ ನಿಗಾ ಇರಿಸಿತ್ತು. ಅವರುಗಳನ್ನೆಲ್ಲ ನಾವು ಥರ್ಮಲ್ ಟೆಸ್ಟ್ ಮಾಡಿ ಹೊರಕಳಿಸುವ ವೇಳೆಗೆ ಜಗತ್ತಿನಲ್ಲಿನ್ನೂ ಈ ರೀತಿಯ ಪರೀಕ್ಷೆಗಳು ನಡೆಯುತ್ತಿರಲಿಲ್ಲ. ಆದರೆ ನಾವು ಸೋತಿದ್ದೆಲ್ಲಿ ಗೊತ್ತಾ? ರಾಜ್ಯರಾಜ್ಯಗಳು ಈ ಭಯಾನಕ ಸ್ಥಿತಿಯನ್ನು ಎದುರಿಸುವ ಹೊತ್ತಿನಲ್ಲಿ ಅವರಿಗೆ ಕೊಡಬೇಕಾದ ವ್ಯವಸ್ಥೆಯ ತಯಾರಿ ಮಾಡಿಕೊಳ್ಳಲಾಗಲಿಲ್ಲ. ಇದುವರೆವಿಗೂ ವೈದ್ಯರುಗಳಿಗೆ ಬೇಕಾದಷ್ಟು ದೇಹರಕ್ಷಣೆಯ ಕಿಟ್​ಗಳನ್ನು ನಾವು ತಲುಪಿಸಿಲ್ಲ. ರಸ್ತೆರಸ್ತೆಗಳಲ್ಲಿ ಅಡ್ಡಾಡುತ್ತಿರುವ ಪೊಲೀಸರಿಗೆ ಧರಿಸಲು ಮಾಸ್ಕ್​ಗಳಿಲ್ಲ, ರಕ್ಷಣೆಯ ವಸ್ತŠಗಳಿಲ್ಲ, ಹೆಲ್ಮೆಟುಗಳಿಲ್ಲ. ಇದರ ಪರಿಣಾಮವೇನು ಗೊತ್ತೇ? ಸೋಂಕಿತರೊಂದಿಗೆ ನೇರ ಸಂಪರ್ಕಕ್ಕೆ ಬರುತ್ತಿರುವ ಈ ಸಮುದಾಯದ ಮಂದಿ 15-20 ದಿನಗಳ ನಂತರ ರೋಗದ ವಿರುದ್ಧ ವೈಯಕ್ತಿಕವಾಗಿ ತಾವೇ ಹೋರಾಡಬೇಕಾದ ಸ್ಥಿತಿ ತಲುಪಿಬಿಡುತ್ತಾರೆ. ಸದ್ಯದಮಟ್ಟಿಗೆ ಇವರೆಲ್ಲರ ವ್ಯವಹಾರ ಹೇಗಿದೆಯೆಂದರೆ ಉಸಿರಾಟದಿಂದ ಬಳಲುತ್ತಿರುವವನು, ಕೆಮ್ಮುತ್ತಿರುವವನು ಮಾತ್ರ ಕರೊನಾಕ್ಕೆ ತುತ್ತಾಗಿದ್ದಾನೆ, ಉಳಿದವರಲ್ಲ ಎಂಬಂತಿದೆ. ವಾಸ್ತವವಾಗಿ ದೇಹ ಹೊಕ್ಕ ಈ ವೈರಸ್ಸು ವ್ಯಕ್ತಿಯಲ್ಲಿ ತನ್ನ ಪ್ರತಾಪವನ್ನು ತೋರಿಸಲು ಏಳೆಂಟು ದಿನ ಸಮಯ ತೆಗೆದುಕೊಳ್ಳುತ್ತದೆ. ಆದರೆ ಆ ವೇಳೆಗಾಗಲೇ ಆತನ ಮೂಲಕ ಇತರರಿಗೆ ಹರಡುತ್ತಲೇ ಇರುತ್ತದೆ. ನೋಡಲು ಗಟ್ಟಿಮುಟ್ಟಾಗಿರುವ ವ್ಯಕ್ತಿಯೂ ತನ್ನೊಳಗೆ ಅಸಂಖ್ಯ ಪ್ರಮಾಣದಲ್ಲಿ ಕರೊನಾ ಸಾಕಿಕೊಂಡಿರಬಹುದು ಎಂಬುದು ನಮಗೆ ಗೊತ್ತಾಗಲು ಇನ್ನು ಸ್ವಲ್ಪ ಕಾಲ ಬೇಕು. ಗಟ್ಟಿಮುಟ್ಟಾಗಿರುವ ಕೆಲವರು ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗಲೇ ಕುಸಿದು ಬಿದ್ದು ಉಸಿರಾಟಕ್ಕಾಗಿ ಹೆಣಗಾಡುವ ವಿಡಿಯೊಗಳು ಅದಾಗಲೇ ವಾಟ್ಸಪ್​ಗಳಲ್ಲಿ ಸುತ್ತಾಡುತ್ತಿವೆ. ಹೀಗಾಗಿಯೇ ಬರಲಿರುವ ದಿನಗಳು ಭಯಾನಕ ಎಂದದ್ದು!

    ಅಕ್ಕನ ಮಾತಿನ ಕೊನೆಯ ಸಾಲನ್ನು ಈಗ ಸ್ವಲ್ಪ ವಿಶ್ಲೇಷಿಸಿ. ಈ ವೈರಸ್​ನಿಂದ ಮುಕ್ತಿ ಪಡೆಯಲು ನಮಗಿರುವ ಏಕೈಕ ಮಾರ್ಗ ಅದು ಮಾತ್ರ. ವಿಮಾನದಲ್ಲಿ ಜಗತ್ತಿನ ಯಾವುದೋ ಮೂಲೆಯನ್ನು ಮುಟ್ಟಿಬಂದು ಭಾರತದಲ್ಲಿ ಕಾಲಿಟ್ಟ ಮೇಲ್​ಸ್ತರದ ವ್ಯಕ್ತಿಯಿಂದ ಹಿಡಿದು ಅರವಿಂದ ಕೇಜ್ರಿವಾಲ್ ದೆಹಲಿಯಿಂದ ಹೊರದಬ್ಬಿದ ಉತ್ತರಪ್ರದೇಶದ ಕೆಳಸ್ತರದ ಕಾರ್ವಿುಕರವರೆಗೂ ಪ್ರತಿಯೊಬ್ಬರೂ ತಮ್ಮ ಪರಿಸ್ಥಿತಿಯನ್ನು ಯಾವ ಅನುಮಾನ ಮತ್ತು ಭ್ರಮೆಗಳಿಲ್ಲದೆ ಒಪ್ಪಿಕೊಳ್ಳಲೇಬೇಕು. ಅನೇಕರು ತಮಗೆ ಕರೊನಾ ಬಂದಿದೆ ಎಂದು ಹೇಳಿಕೊಳ್ಳಲೂ ಹಿಂಜರಿಯುತ್ತಿದ್ದಾರೆ. ಕೆಲವರಂತೂ ತಾವು ವಿದೇಶದಿಂದ ಬಂದ ಸಂಗತಿಯನ್ನೂ ಮುಚ್ಚಿಡುತ್ತಿದ್ದಾರೆ. ಒಂದು ಕಾಲದಲ್ಲಿ ಎಚ್​ಐವಿ ಪಾಸಿಟಿವ್ ಎಂದು ಹೇಳಿಕೊಳ್ಳಲು ಹೇಗೆ ಅಂಜುತ್ತಿದ್ದರೋ ಅದೇ ಪರಿಸ್ಥಿತಿ ಕರೊನಾದ್ದೂ ಆಗಿದೆ. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಸಾಮಾಜಿಕ ಜವಾಬ್ದಾರಿಯನ್ನು ಅರಿತು ತನ್ನಿಂದ ಈ ರೋಗ ಇತರರಿಗೆ ಹರಡಬಾರದೆಂದು ನಿಶ್ಚಯಿಸಿ ತನಗೆ ತಾನೇ ಚೌಕಟ್ಟು ಹಾಕಿಕೊಂಡರೆ ಇಡಿಯ ಸಮಸ್ಯೆ ತಿಳಿಯಾಗಿಬಿಡುತ್ತದೆ. ಹಾಗೆ ಸ್ವಯಂ ಚೌಕಟ್ಟು ಹಾಕಿಕೊಳ್ಳಲು ಹಿಂದೆಮುಂದೆ ನೋಡುವ ಸಮಾಜಕ್ಕೆ ಲಾಕ್​ಡೌನಿನ ಒತ್ತಾಯ ಮಾಡಲೇಬೇಕಾಗುತ್ತದೆ. ಭಾರತವೂ ಅದೇ ಹಾದಿಯಲ್ಲಿ ಈಗ ನಡೆದಿದೆ. ಆದರೇನು? ಈಗಲೂ ಬೀದಿಯಲ್ಲಿ ಅಡ್ಡಾಡುವ ಜನರ ಸಂಖ್ಯೆಯೇನೂ ಕಡಿಮೆಯಿಲ್ಲ. ‘ಜನರ ಸೇವೆಗಾಗಿ ಕಾರ್ಯಕರ್ತನಾಗುತ್ತೇನೆ’ ಎಂದು ಸರ್ಕಾರದಿಂದ ಪಾಸ್ ಪಡೆದು ಅಡ್ಡಾಡುವ ಜನರೂ ಇದ್ದಾರೆ. ಮುಸಲ್ಮಾನರನ್ನಂತೂ ಕೇಳಲೇಬೇಡಿ. ತಮ್ಮ ದೇವರು ಇತರೆಲ್ಲರಿಗಿಂತ ಶಕ್ತಿವಂತ ಎಂದು ತೋರಿಸುವ ಧಾವಂತದಲ್ಲಿ ಜೊತೆಗೂಡಿ ಪ್ರಾರ್ಥಿಸುವ, ಸಮಾವೇಶಗಳನ್ನು ನಡೆಸುವ ಕೆಲಸಗಳನ್ನು ಮಾಡುತ್ತಲೇ ಇದ್ದಾರೆ. ಈ ಸಮಸ್ಯೆಯಿಂದ ನಮ್ಮನ್ನು ರಕ್ಷಿಸಬೇಕಾದ್ದು ಭಗವಂತನೇ ಹೌದು. ಹಾಗಂತ ಮಸೀದಿಗೇ ಹೋಗಿ ಆತನನ್ನು ಪೂಜಿಸಬೇಕಿಲ್ಲ. ಇದ್ದ ಜಾಗದಲ್ಲೂ ಪ್ರಾರ್ಥನೆ ಮಾಡಬಹುದು. ‘ಆಕಾರವಿಲ್ಲದ ಭಗವಂತ ಎಲ್ಲೆಡೆಯೂ ಇದ್ದಾನೆ’ ಎಂದು ಭಾವಿಸುವ ಮಂದಿಯೇ ಪ್ರಾರ್ಥನೆಗೆ ಒಂದು ಜಾಗ ಬೇಕೇ ಬೇಕು ಎಂದು ಹೇಳಿದರೆ ಸಿದ್ಧಾಂತದ ಮೇಲಿನ ವಿಶ್ವಾಸ ಎಲ್ಲಿ ಹೋಯ್ತು! ಈ ನಿಟ್ಟಿನಲ್ಲಿ ನೋಡುವುದಾದರೆ ಹಿಂದೂಗಳು ಸಾವಿರಪಾಲು ಮೇಲು. ತಿರುಪತಿಯಿಂದ ಹಿಡಿದು ಧರ್ಮಸ್ಥಳದವರೆಗೆ ಎಲ್ಲ ದೇವಸ್ಥಾನಗಳೂ ಮುಚ್ಚಲ್ಪಟ್ಟಿವೆ. ಹಾಗಂತ ದೇವರ ಪೂಜೆ ನಿಂತಿಲ್ಲ. ಸಂಬಂಧಪಟ್ಟ ಅರ್ಚಕ ನಿತ್ಯ ಪೂಜೆಯನ್ನು ಮಾಡುತ್ತ ಜಗತ್ತನ್ನೆಲ್ಲ ಕಾಪಾಡು ಎಂದು ಕೇಳುತ್ತಲೇ ಇದ್ದಾನೆ. ಅವನ ಭಕ್ತ ಮನೆಮನೆಯಲ್ಲಿ ಕುಳಿತು ವಿಷ್ಣು ಸಹಸ್ರನಾಮವನ್ನೋ ಲಲಿತಾ ಸಹಸ್ರನಾಮವನ್ನೋ ಪಾರಾಯಣ ಮಾಡುತ್ತ ಎಲ್ಲರಿಗೂ ಆರೋಗ್ಯ ಕೊಡುವಂತೆ ಪ್ರಾರ್ಥಿಸಿಕೊಳ್ಳುತ್ತಿದ್ದಾನೆ. ಶುಕ್ರವಾರದ ನಮಾಜನ್ನು ಮನೆಯಲ್ಲೇ ಮಾಡಲು ಒಪ್ಪದ ಮುಸಲ್ಮಾನರ ನಡುವೆ ವರ್ಷದ ಮೊದಲ ಹಬ್ಬ ಯುಗಾದಿಯನ್ನು ಜನರ ಹಿತಕ್ಕಾಗಿ ಆಚರಿಸದೆ ತ್ಯಾಗ ಮಾಡಿದ ಹಿಂದೂ ಬಲುವಿಶೇಷ ಎನಿಸುತ್ತಾನೆ. ಹಾಗಂತ ಯಾರೋ ಒಂದಷ್ಟು ತಿಳಿಯದ ಕಿಡಿಗೇಡಿಗಳು ಈ ರೀತಿ ದೇಶಕಂಟಕರಾಗಿ ನಡೆದುಕೊಳ್ಳುತ್ತಾರೆಂದರೆ ಸುಮ್ಮನಾಗಿಬಿಡಬಹುದು. ಸಾಫ್ಟ್​ವೇರ್ ಇಂಜಿನಿಯರ್ ಮುಜಿಬ್ ಮೊಹಮ್ಮದ್ ‘ಆದಷ್ಟು ಜನರ ನಡುವೆ ಹೋಗಿ ಕೆಮ್ಮಿ, ಸೀನಿ, ಅವರಿಗೂ ಕರೊನಾ ಹಬ್ಬಿಸಿ’ ಎಂದಿರುವುದು ಸಮಾಜ ಮುಟ್ಟಿದ ಪಾತಾಳವನ್ನು ತೋರಿಸುತ್ತದೆ!

    ಅಕ್ಕ ನಿವೇದಿತೆಯ ‘ಅಗ್ರೆಸ್ಸಿವ್ ಹಿಂದೂಯಿಸಂ’ನ ಒಂದೊಂದು ಸಾಲನ್ನೂ ಓದುತ್ತಿದ್ದಂತೆ ಹೃದಯ ಉಬ್ಬುತ್ತದೆ. ಶಾಲೆಯಲ್ಲಿ ಕಲಿಯದ ಪಾಠವೆಲ್ಲವನ್ನೂ ಸಂಸ್ಕೃತಿ ಕಲಿಸಿಕೊಟ್ಟಿದೆಯಲ್ಲಾ ಎಂಬ ಹೆಮ್ಮೆ ಮೂಡುತ್ತದೆ. ಜಗತ್ತಿನ ಜನರ ಒಳಿತನ್ನು ಪ್ರಾರ್ಥಿಸಿದ ಶ್ರೇಷ್ಠ ಋಷಿಗಳ ಇಂದಿನ ಸಂತಾನ ನಾವೆಂಬುದಕ್ಕೆ ಇನ್ನೇನು ಪುರಾವೆ ಬೇಕು ಹೇಳಿ?! ನಾವೀಗ ಒಗ್ಗಟ್ಟಾಗೋಣ, ಈ ಮಹಾಮಾರಿಯನ್ನು ಮುಗಿಸೋಣ!

    (ಲೇಖಕರು ಖ್ಯಾತ ವಾಗ್ಮಿ ಹಾಗೂ ಚಿಂತಕರು)

    ಲಾಕ್‌ಡೌನ್ ಅವಧಿಯಲ್ಲಿ ಶುಚಿತ್ವ ವಸ್ತುಗಳ ಸಾಗಾಟಕ್ಕೂ ಅನುಮತಿ ನೀಡಿದ ಕೇಂದ್ರ ಸರ್ಕಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts