ಕಂಪ್ಲಿ: ಉನ್ನತ ಹುದ್ದೆ ಪಡೆಯಲು ವಿಜಯವಾಣಿ ‘ವಿದ್ಯಾರ್ಥಿ ಮಿತ್ರ’ ಪತ್ರಿಕೆ ಸಹಕಾರಿಯಾಗಿದ್ದು, ವಿದ್ಯಾರ್ಥಿಗಳು ಪ್ರತಿದಿನ ಓದುವ ಮೂಲಕ ಜ್ಞಾನ ವೃದ್ಧಿಸಿಕೊಳ್ಳಬೇಕು ಎಂದು ಸತ್ಯ ಅರುಣೋದಯ ಸೇವಾ ಸಮಿತಿ ಅಧ್ಯಕ್ಷ ಡಿ.ವಿ.ಸತ್ಯನಾರಾಯಣ ಹೇಳಿದರು.
ಪಟ್ಟಣದ ಎಸ್ಜಿವಿಎಸ್ಎಸ್ ಬಾಲಕಿಯರ ಸರ್ಕಾರಿ ಪಿಯು ಕಾಲೇಜು ಆವರಣದಲ್ಲಿ ಶನಿವಾರ ವಿದ್ಯಾರ್ಥಿನಿಯರಿಗೆ ವಿಜಯವಾಣಿ ‘ವಿದ್ಯಾರ್ಥಿಮಿತ್ರ’ ಪತ್ರಿಕೆ ವಿತರಿಸಿ ಮಾತನಾಡಿದರು. ವಿದ್ಯಾರ್ಥಿ ಮಿತ್ರ ಪತ್ರಿಕೆ ಎಸ್ಸೆಸ್ಸೆಲ್ಸಿ, ಪಿಯುಸಿ ಪಠ್ಯಕ್ರಮದೊಂದಿಗೆ, ಪ್ರಚಲಿತ ವಿದ್ಯಮಾನಗಳು, ಸ್ಪರ್ಧಾತ್ಮಕ ಪರೀಕ್ಷೆಗಳ ವಿವರ ಸೇರಿ ಭವಿಷ್ಯದಲ್ಲಿ ಉನ್ನತ ಶಿಕ್ಷಣ, ಹುದ್ದೆಗಳಿಸಲು ನೆರವಾಗುವ ಅಂಶಗಳಿವೆ. ವಿದ್ಯಾರ್ಥಿಗಳು ನಿತ್ಯ ಪತ್ರಿಕೆ ಓದುವ ಜತೆ ಸಂಗ್ರಹಿಸಿಟ್ಟುಕೊಳ್ಳಬೇಕು. ಶಿಕ್ಷಣದೊಂದಿಗೆ ದೈಹಿಕ, ಬೌದ್ಧಿಕ ಮತ್ತು ಮಾನಸಿಕ ಬೆಳವಣಿಗೆಗೆ ಆದ್ಯತೆ ನೀಡಬೇಕು ಎಂದರು.
ಉಪ ಪ್ರಾಚಾರ್ಯ ಬಸವರಾಜ ಪಾಟೀಲ್ ಮಾತನಾಡಿ, ವಿದ್ಯಾರ್ಥಿ ಮಿತ್ರ ಪತ್ರಿಕೆಯ ಸದುಪಯೋಗಪಡಿಸಿಕೊಳ್ಳಬೇಕು. ನಿತ್ಯ ಪತ್ರಿಕೆ ಅಭ್ಯಾಸ ಮಾಡಿ ಹೆಚ್ಚು ಅಂಕಗಳಿಸುವಂತೆ ಸಲಹೆ ಹೇಳಿದರು. ಪ್ರಾಚಾರ್ಯ ಮಹ್ಮದ್ಶಫಿ, ಕಸಾಪ ತಾಲೂಕು ಕೋಶಾಧ್ಯಕ್ಷ ಎಸ್.ಡಿ.ಬಸವರಾಜ್, ಶಿಕ್ಷಕರಾದ ಶ್ರೀನಿವಾಸ್, ಸಿದ್ದಲಿಂಗೇಶ್ವರ ಗದುಗಿನ, ಕೆ.ಬಸವರಾಜ್, ಶೋಭಾ, ಬಿ.ಜಬೀನಾ ಇತರರಿದ್ದರು.