ವಿದ್ಯಾರ್ಥಿಗಳ ಜೀವನದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಎರಡು ಪ್ರಮುಖ ಘಟ್ಟಗಳು. ಇವೇ ಅವರ ಭವಿಷ್ಯದ ಬದುಕನ್ನು ನಿರ್ಧರಿಸುವ ತಿರುವುಗಳು. ಹಾಗಾಗಿ ಈ ಹಂತದಲ್ಲಿ ಮಕ್ಕಳು ಸಹಜವಾಗಿಯೇ ಗೊಂದಲ, ಕಳವಳ, ಒತ್ತಡ ಅನುಭವಿಸುತ್ತಾರೆ. ಪಾಲಕರ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಮಕ್ಕಳು ಮತ್ತು ಪಾಲಕರ ಮನಸ್ಸಿನಲ್ಲಿರುವ ಪ್ರಶ್ನೆಗಳಿಗೆ ಸಚಿವರಿಂದಲೇ ಸಮಾಧಾನಕರ ಉತ್ತರ ಕೊಡಿಸಲು ವಿಜಯವಾಣಿ-ದಿಗ್ವಿಜಯ 247 ನ್ಯೂಸ್ ‘ಫೋನ್-ಇನ್’ ಕಾರ್ಯಕ್ರಮ ಆಯೋಜಿಸಿದ್ದವು. ನೂರಾರು ಮಕ್ಕಳು, ಪಾಲಕರು, ಶಿಕ್ಷಕರು ಕರೆ ಮಾಡಿ ತಮ್ಮಮನಸ್ಸಿನಲ್ಲಿದ್ದ ಸಂಶಯಗಳನ್ನು ನಿವಾರಿಸಿ ಕೊಂಡರು.
ಪರೀಕ್ಷೆ ಎಂಬುದು ಯುದ್ಧವೇನಲ್ಲ. ಎಸ್ಸೆಸ್ಸೆಲ್ಸಿ- ಪಿಯುಸಿಯೇ ಜೀವನದ ಕೊನೆಯೂ ಅಲ್ಲ. ಪರೀಕ್ಷೆ ಬಗ್ಗೆ ಯಾವುದೇ ಭಯ ಇಟ್ಟುಕೊಳ್ಳಬೇಡಿ. ಇನ್ನೂ ಸಾಕಷ್ಟು ಸಮಯವಿದೆ. ಎರಡು ತಿಂಗಳ ಕಾಲ ಮೊಬೈಲು ಬಿಟ್ಹಾಕಿ, ಏಕಾಗ್ರತೆಯಿಂದ ಓದಿ. ಸರಿಯಾಗಿ ಸಿದ್ಧತೆ ಮಾಡಿಕೊಳ್ಳಿ. ಅದೇ ನಿಮಗೆ ಪರೀಕ್ಷೆ ಎದುರಿಸುವ ಶಕ್ತಿಯನ್ನು, ಆತ್ಮವಿಶ್ವಾಸವನ್ನು ಕೊಡುತ್ತದೆ… ಪರೀಕ್ಷಾ ತಯಾರಿ ನಡೆಸುತ್ತಿರುವ ಮಕ್ಕಳಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ಕುಮಾರ್ ಅವರ ಕಿವಿಮಾತುಗಳಿವು. ವಿಜಯವಾಣಿ-ದಿಗ್ವಿಜಯ 247 ನ್ಯೂಸ್ ಆಯೋಜಿಸಿದ್ದ ಫೋನ್-ಇನ್ ಕಾರ್ಯಕ್ರಮದಲ್ಲಿ ಸೋಮವಾರ ಭಾಗವಹಿಸಿದ್ದ ಅವರು, ರಾಜ್ಯದ ನಾನಾ ಕಡೆಯಿಂದ ದೂರವಾಣಿ ಕರೆ ಮಾಡಿ ಸಮಸ್ಯೆಗಳನ್ನು ಹೇಳಿಕೊಂಡ ಮಕ್ಕಳು, ಪಾಲಕರು ಮತ್ತು ಶಿಕ್ಷಕರಿಗೆ ಸಮಾಧಾನಚಿತ್ತದಿಂದ ಸೂಕ್ತ ಉತ್ತರಗಳನ್ನು ನೀಡಿದರು. ಕೆಲವು ಪ್ರಶ್ನೆಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ. ಕೆ.ಜಿ. ಜಗದೀಶ್, ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಿರ್ದೇಶಕಿ ವಿ. ಸುಮಂಗಲಾ, ಪಿಯು ಇಲಾಖೆ ಜಂಟಿ ನಿರ್ದೇಶಕ (ಪರೀಕ್ಷೆ) ಕಲ್ಲಯ್ಯ ಮತ್ತು ಸಹಾಯಕ ನಿರ್ದೇಶಕ (ಪರೀಕ್ಷೆ) ಪ್ರಸನ್ನ ಕುಮಾರ್ ಉತ್ತರ ನೀಡಿದರು.
ನಮ್ಮ ಊರಿನಲ್ಲಿ ಶಿಕ್ಷಕರು ಶಾಲೆಗಳಿಗೆ ಸರಿಯಾಗಿ ಬರುವುದಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ.
| ನಾಗರಾಜ್ ಕೋಲಾರ
- ಈ ಬಗ್ಗೆ ಕ್ರಮ ಕೈಗೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ. ಇಂತಹ ಪ್ರಕರಣಗಳು ರಾಜ್ಯದ ಬೇರೆ ಕಡೆಗಳಲ್ಲಿಯೂ ಇದ್ದರೆ, ನಮಗೆ ನಿರ್ದಿಷ್ಟವಾಗಿ ಲಿಖಿತ ದೂರುಗಳು ಬಂದರೆ ಖಂಡಿತ ಕ್ರಮ ಕೈಗೊಳ್ಳುತ್ತೇವೆ.
8, 9 ಮತ್ತು 10ನೇ ತರಗತಿಗೆ ಪ್ರತ್ಯೇಕವಾಗಿ ಆಂತರಿಕ ಮೌಲ್ಯಾಂಕ ನಿಗದಿ ಮಾಡಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಗೊಂದಲವುಂಟಾಗುತ್ತಿದ್ದು, ಮೂರು ತರಗತಿಗಳಿಗೆ ಏಕರೂಪ ಮೌಲ್ಯಾಂಕ ನಿಗದಿ ಮಾಡಿದರೆ ಒಳ್ಳೆಯದಾಗುತ್ತದೆ.
| ಶಾಲಿನಿ ಬೆಂಗಳೂರು
- ಈ ಬಗ್ಗೆ ಸಾಕಷ್ಟು ವಿದ್ಯಾರ್ಥಿಗಳು ಸಮಸ್ಯೆ ಹೇಳಿಕೊಂಡಿದ್ದಾರೆ. ಹೀಗಾಗಿ 8ರಿಂದ 10ನೇ ತರಗತಿವರೆಗೆ ಏಕರೂಪ ಮೌಲ್ಯಾಂಕ ನಿಗದಿ ಮಾಡುವ ಕುರಿತು ಚಿಂತನೆ ನಡೆಸಲಾಗಿದೆ.
8ನೇ ತರಗತಿಯಲ್ಲಿ ಮೊದಲ ಮತ್ತು 2ನೇ ಸೆಮಿಸ್ಟರ್ನಲ್ಲಿ ಪ್ರಶ್ನೆಗಳನ್ನು ಬೇರೆ ಬೇರೆಯಾಗಿ ಕೇಳಲಾಗುತ್ತದೆ. ಆದರೆ, 9 ಮತ್ತು 10ನೇ ತರಗತಿಯಲ್ಲಿ ಎರಡೂ ಸೆಮಿಸ್ಟರ್ಗಳ ಪ್ರಶ್ನೆಗಳನ್ನು ಅಂತಿಮ ಪರೀಕ್ಷೆಯಲ್ಲಿ ಕೇಳಲಾಗುತ್ತಿದೆ. ಅದರಿಂದ ವಿದ್ಯಾರ್ಥಿಗಳಿಗೆ ಗೊಂದಲ ಮತ್ತು ಪರೀಕ್ಷೆ ಕಷ್ಟವಾಗುತ್ತಿದೆ.
| ಕೀರ್ತನಾ ಬೆಂಗಳೂರು
- ಈ ಬಗ್ಗೆ ಪರಿಶೀಲಿಸಲಾಗುತ್ತಿದೆ. ಸೆಮಿಸ್ಟರ್ಗಳಲ್ಲಿನ ಗೊಂದಲವನ್ನು ಆದಷ್ಟು ಬೇಗ ನಿವಾರಿಸಲಾಗುವುದು.
ನನ್ನ ಮಗ ಎಸ್ಸೆಸ್ಸೆಲ್ಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ನಮ್ಮ ಊರಿನಲ್ಲಿರುವ ಶಾಲೆಗಳಲ್ಲಿ ಸರಿಯಾದ ಮೂಲಭೂತ ಸೌಕರ್ಯಗಳಿಲ್ಲ. ಈ ಸಮಸ್ಯೆಯನ್ನು ಬಗೆಹರಿಸಬಹುದೇ?
| ರಘುನಾಥ್ ಮೈಸೂರು
- ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿ, ಶಾಲೆಗಳಿಗೆ ಬೇಕಾದ ಮೂಲಭೂತ ಸೌಕರ್ಯ ಕಲ್ಪಿಸಿ ಸಮಸ್ಯೆ ಬಗೆಹರಿಸುತ್ತೇವೆ.
ನನ್ನ ಮಗ ದ್ವಿತೀಯ ಪಿಯುಸಿಯಲ್ಲಿ ಮತ್ತು ಮಗಳು ಎಸ್ಸೆಸ್ಸೆಲ್ಸಿಯಲ್ಲಿ ಓದುತ್ತಿದ್ದಾರೆ. ಮಗ ವೈದ್ಯನಾಗಬೇಕು ಎಂಬ ಆಸೆ ಹೊಂದಿದ್ದಾನೆ. ಸೂಕ್ತ ರೀತಿಯಲ್ಲಿ ಮಾರ್ಗದರ್ಶನ ನೀಡಲು ಸಾಧ್ಯವಾಗುತ್ತಿಲ್ಲ.
| ಓರ್ವ ಪಾಲಕರು ಕೊಪ್ಪಳ
- ಶ್ರಮ ವಹಿಸಿ ಕಲಿತರೆ ಕನಸನ್ನು ಆದಷ್ಟು ಬೇಗ ನನಸಾಗಿಸಬಹುದು. ಸರಿಯಾಗಿ ವ್ಯಾಸಂಗ ಮಾಡಿದರೆ, ಉತ್ತಮ ಅಂಕ ಗಳಿಸಬಹುದು.
ಕೆಲ ಪರೀಕ್ಷಾ ಕೊಠಡಿಗಳಲ್ಲಿ ಗಾಳಿ, ಬೆಳಕು ಸರಿಯಾಗಿ ಬಾರದೇ ಇರುವುದರಿಂದ ಮಕ್ಕಳಿಗೆ ಸಮಸ್ಯೆ ಯಾಗುತ್ತಿದೆ. ಪರೀಕ್ಷಾ ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯಗಳಿಲ್ಲದೇ ಪರೀಕ್ಷೆ ಎದುರಿಸುವುದು ಹೇಗೆ ?
| ರವಿಶಂಕರ್ ಉಡುಪಿ
- ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಪರೀಕ್ಷಾ ಕೇಂದ್ರ ಹೇಗಿರಬೇಕು ಎಂಬ ಬಗ್ಗೆ ಸುತ್ತೋಲೆ ಹೊರಡಿಸುತ್ತೇವೆ.
ಕೆಲವೇ ದಿನಗಳಲ್ಲಿ ಎಸ್ಸೆಸ್ಸೆಲ್ಸಿ ಪೂರ್ವಭಾವಿ ಪರೀಕ್ಷೆ ಬರುತ್ತಿದ್ದು, ಓದಿನ ಕಡೆ ಗಮನ ಕೇಂದ್ರೀಕರಿಸಲು ಏನು ಮಾಡಬೇಕೆಂದು ಸಲಹೆ ನೀಡಬಹುದೇ?
| ಪ್ರಜ್ವಲ್ ಪಟೇಲ್ ಚಂದರಗಿ
- ಬೆಳಗ್ಗೆ ಬೇಗ ಎದ್ದು ಯೋಗ, ಧ್ಯಾನ ಮಾಡಿದರೆ ಉತ್ತಮ. ಪುಸ್ತಕದಲ್ಲಿ ಓದಿರುವುದನ್ನು ಮತ್ತೆ ಬರೆದು ಕಲಿತರೆ ಓದಿರುವ ಅಂಶಗಳು ನೆನಪಿನಲ್ಲಿ ಉಳಿದುಕೊಳ್ಳುತ್ತವೆ.
ಅಂತಿಮ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದವರಿಗೆ ಮಾತ್ರ ಉತ್ತಮ ಕಾಲೇಜುಗಳಲ್ಲಿ ಪ್ರವೇಶ ಸಿಗುತ್ತದೆ. ಸಾಧಾರಣ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಉತ್ತಮ ಶಾಲೆ ಮತ್ತು ಕಾಲೇಜುಗಳಲ್ಲಿ ಸೀಟೇ ದೊರೆಯುತ್ತಿಲ್ಲ. ಅಂತಹ ವಿದ್ಯಾರ್ಥಿಗಳಿಗೂ ಅವಕಾಶ ನೀಡಲು ಏನು ಕ್ರಮ ಕೈಗೊಳ್ಳುತ್ತೀರಿ?
| ವರ್ಷಾ ಬೆಂಗಳೂರು
- ಇದು ಸ್ಪರ್ಧಾತ್ಮಕ ಕಾಲ. ವಿದ್ಯಾರ್ಥಿಗಳು ಹೆಚ್ಚು ಅಂಕ ಗಳಿಸುವುದು ಕೂಡ ಮುಖ್ಯ. ಆದರೂ ಸಾಧಾರಣ ಅಂಕ ಗಳಿಸಿದ ವಿದ್ಯಾರ್ಥಿಗಳಿಗೂ ಅನೇಕ ಶಾಲೆ, ಕಾಲೇಜುಗಳು ಪ್ರವೇಶ ನೀಡುತ್ತಿವೆ. ಅಂಥವುಗಳನ್ನು ಗುರುತಿಸಿ ಸರ್ಕಾರದಿಂದ ಪ್ರೋತ್ಸಾಹ ನೀಡಲಾಗುವುದು.
ಪರೀಕ್ಷಾ ವೇಳಾಪಟ್ಟಿಯಲ್ಲಿ ಕೆಲವು ವಿಷಯಗಳ ಪರೀಕ್ಷೆ ಬಳಿಕ ಇನ್ನೊಂದು ಪರೀಕ್ಷೆಗೆ ಸಾಕಷ್ಟು ಸಮಯ ಇರುವುದರಿಂದ ಓದಲು ಸಮಯ ಸಿಗುತ್ತದೆ. ಭಾಷಾ ವಿಷಯಗಳಿಗೆ ಸಂಬಂಧಿಸಿದಂತೆ ಹೀಗಿಲ್ಲ. ಅವುಗಳ ನಡುವೆ ಕಡಿಮೆ ಸಮಯ ನೀಡಲಾಗಿದೆ. ಜತೆಗೆ, ಕೆಲವು ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಿದ್ದರೂ, ಅಂಕ ಕಡಿತ ಮಾಡಲಾಗುತ್ತಿದೆ. ಈ ಸಮಸ್ಯೆ ನಿವಾರಿಸಿ.
| ಅರ್ಪಿತಾ ಬೆಂಗಳೂರು
- ಒಂದು ವಿಷಯದ ನಂತರ ಇನ್ನೊಂದು ವಿಷಯದ ಪರೀಕ್ಷೆ ಬರೆಯಲು ಸಮಯ ನೀಡುವುದು ವಿದ್ಯಾರ್ಥಿಗಳಲ್ಲಿನ ಒತ್ತಡ ನಿವಾರಣೆಗಷ್ಟೇ. ಅದರಲ್ಲಿ ಕೋರ್ ಸಬ್ಜೆಕ್ಟ್, ಲ್ಯಾಂಗ್ವೇಜ್ ಎಂಬ ಭೇದ ಮಾಡಿಲ್ಲ. ಅದಲ್ಲದೆ ಉತ್ತರ ಸರಿಯಾಗಿ ಬರೆದಿದ್ದರೂ, ಕಡಿಮೆ ಅಂಕ ನೀಡಿದರೆ, ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿ. ಪರಿಶೀಲಿಸಲು ಸಮಿತಿ ಇರುತ್ತದೆ. ಮೌಲ್ಯಮಾಪಕರ ತಪ್ಪಿದ್ದರೆ, ಸರಿಪಡಿಸಿ ವಿದ್ಯಾರ್ಥಿಗೆ ಸರಿಯಾದ ಅಂಕ ನೀಡಲಾಗುತ್ತದೆ.
ಎಸ್ಸೆಸ್ಸೆಲ್ಸಿಯಲ್ಲಿ ಶೇ. 65 ಅಂಕಗಳನ್ನು ಪಡೆದಿದ್ದೇನೆ. ದ್ವಿತೀಯ ಪಿಯುಸಿಯಲ್ಲಿ ಶೇ. 95 ಅಂಕ ಗಳಿಸಬೇಕು ಎಂಬ ಗುರಿ ಹೊಂದಿದ್ದೇನೆ. ಇದಕ್ಕೆ ನಿಮ್ಮ ಸಲಹೆಗಳೇನು?
| ಉಷಾ ಕಾಕಂಬಿ
- ಆಯಾ ದಿನ ಶಿಕ್ಷಕರು ಮಾಡಿದ ಪಾಠವನ್ನು ಅಂದೇ ಅಭ್ಯಾಸ ಮಾಡಿದರೆ ಉತ್ತಮ. ಇದರಿಂದ ಹೆಚ್ಚಿನ ಒತ್ತಡ ನಿಮ್ಮಮೇಲೆ ಬೀಳುವುದಿಲ್ಲ. ಜತೆಗೆ ಹೆಚ್ಚು ಅಂಕ ಗಳಿಸಲು ಸಾಧ್ಯವಾಗುತ್ತದೆ.
ನನ್ನ ಮಗಳು ಪ್ರಥಮ ಪಿಯುಸಿ ಕಾಮರ್ಸ್ನಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಅವಳಿಗೆ ವಿಜ್ಞಾನ ವಿಷಯದಲ್ಲಿ ಕಲಿಯಬೇಕೆಂದು ಆಸಕ್ತಿ ಉಂಟಾಗಿದೆ. ದ್ವಿತೀಯ ಪಿಯುಸಿಗೆ ವಿಜ್ಞಾನ ವಿಷಯ ತೆಗೆದುಕೊಳ್ಳಲು ಅವಕಾಶವಿದೆಯೇ?
| ಪಲ್ಲವಿ ದೇವನಹಳ್ಳಿ
- ಕಾಲೇಜಿನ ಪ್ರಾಂಶುಪಾಲರಿಗೆ ಈ ಬಗ್ಗೆ ಅರ್ಜಿ ಸಲ್ಲಿಸಿ ವಿಷಯ ಬದಲಾಯಿಸಿಕೊಳ್ಳಲು ಅವಕಾಶವಿದೆ. ಆದರೆ, ಮುಂದಿನ ವರ್ಷದಿಂದ ಪ್ರಥಮ ಪಿಯುಸಿ ವಿಜ್ಞಾನ ವಿಭಾಗಕ್ಕೆ ಸೇರಿಕೊಳ್ಳಬೇಕಾಗುತ್ತದೆ. ಪ್ರಥಮ ಪಿಯುಸಿಯಲ್ಲಿ ಕಾಮರ್ಸ್ ವಿಷಯದಲ್ಲಿ ಕಲಿತು, ದ್ವಿತೀಯ ಪಿಯುಸಿಯಲ್ಲಿ ನೇರವಾಗಿ ವಿಜ್ಞಾನ ವಿಷಯದಲ್ಲಿ ವ್ಯಾಸಂಗ ಮಾಡಲು ಸಾಧ್ಯವಾಗುವುದಿಲ್ಲ.
ನಮ್ಮ ಶಾಲೆಗೆ ವರ್ಷದಲ್ಲಿ ಮೂರ್ನಾಲ್ಕು ಹೊಸ ಶಿಕ್ಷಕರು ವರ್ಗಾವಣೆಯಾಗಿ ಬರುತ್ತಾರೆ. ಒಬ್ಬ ಶಿಕ್ಷಕರು ಕಲಿಸುವ ರೀತಿಯ ಹಾಗೆ ಇನ್ನೊಬ್ಬ ಶಿಕ್ಷಕರು ಕಲಿಸುವ ರೀತಿ ಇರುವುದಿಲ್ಲ. ಹೊಸ ಶಿಕ್ಷಕರು ಬಂದಾಗಲೆಲ್ಲ ನಮಗೆ ಗೊಂದಲವಾಗುತ್ತದೆ. ಆದ್ದರಿಂದ ಶೈಕ್ಷಣಿಕ ವರ್ಷದ ಮಧ್ಯದಲ್ಲಿ ಶಿಕ್ಷಕರ ವರ್ಗಾವಣೆ ಮಾಡುವುದನ್ನು ಕಡಿಮೆ ಮಾಡಿ.
| ಪವಿತ್ರಾ ಬೆಂಗಳೂರು
- ಸರ್ಕಾರಿ ಶಾಲೆಗಳಲ್ಲಿ ಪ್ರತಿ ವರ್ಷದ ಜೂನ್ ಒಳಗೆ ವರ್ಗಾವಣೆ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಬಿಬಿಎಂಪಿ ಶಾಲೆಗಳಲ್ಲೂ ಅದೇ ಕ್ರಮ ವಹಿಸುವಂತೆ ಸೂಚಿಸಲಾಗುವುದು.
10ನೇ ತರಗತಿ ಪ್ರಶ್ನೆ ಪತ್ರಿಕೆಯ ಪ್ಯಾಟರ್ನ್ ಬದಲಾಗಿದೆ. ಅದರಿಂದ ವಿದ್ಯಾರ್ಥಿಗಳಿಗೆ ಗೊಂದಲವುಂಟಾಗು ವುದಿಲ್ಲವೆ?
| ಮಂದಾರ ಬೆಂಗಳೂರು
- ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಪ್ಯಾಟರ್ನ್ ಬದಲಿಸಲಾಗಿದೆ. ಅದರಿಂದ ಯಾವುದೇ ಸಮಸ್ಯೆಯಿಲ್ಲ. ವಿದ್ಯಾರ್ಥಿಗಳು ಮಾಮೂಲಿಯಂತೆ ಓದಿ, ಪರೀಕ್ಷೆ ಬರೆಯಬಹುದು.
ಪರೀಕ್ಷೆಯಲ್ಲಿ ಪ್ರಶ್ನೆಗಳನ್ನು ನೇರವಾಗಿ ಕೇಳದೆ ಟ್ವಿಸ್ಟ್ ಮಾಡಿ ವಿಭಿನ್ನ ರೀತಿಯಲ್ಲಿ ಕೇಳುತ್ತಾರೆ. ಅದರಿಂದ ಪ್ರಶ್ನೆಗಳೇ ಅರ್ಥವಾಗದಂತಾಗಿ ಗೊಂದಲವಾಗುತ್ತಿದೆ. ಇದಕ್ಕೆ ಪರಿಹಾರ ತಿಳಿಸಿ…
| ಅರ್ಪಿತಾ ಬೆಂಗಳೂರು
- ವಿದ್ಯಾರ್ಥಿಗಳಲ್ಲಿ ತರ್ಕ ಸಾಮರ್ಥ್ಯ ಹೆಚ್ಚಿಸುವ ಸಲುವಾಗಿ ಆ ರೀತಿ ಟ್ವಿಸ್ಟ್ ಮಾಡಿ ಪ್ರಶ್ನೆಗಳನ್ನು ಕೇಳುವುದು ಸಹಜ. ನೇರವಾಗಿ ಕೇಳಿದರೆ ಸುಲಭವಾಗುತ್ತದೆ. ರ್ತಾಕ ಸಾಮರ್ಥ್ಯ ಹೆಚ್ಚುವುದಿಲ್ಲ. ಅದರ ಬದಲು ಎಲ್ಲವನ್ನೂ ಓದಿ. ಉತ್ತರ ತಿಳಿದಿದ್ದರೆ, ಯಾವುದೇ ರೀತಿಯಲ್ಲಿ ಪ್ರಶ್ನೆ ಕೇಳಿದರೂ ಉತ್ತರಿಸಬಹುದು.
ಪದವಿ ಪೂರ್ವದ ಬೇರೆ ವಿಷಯಗಳ ಪ್ರಶ್ನೆಪತ್ರಿಕೆಯಲ್ಲಿರುವಂತೆ ಗಣಿತ ಪ್ರಶ್ನೆ ಪತ್ರಿಕೆಯಲ್ಲಿ ಒಂದು ಅಂಕದ ಪ್ರಶ್ನೆಗಳನ್ನು ಯಾಕೆ ಕೇಳುತ್ತಿಲ್ಲ? | ಸಾಗರ್ ಆದರ್ಶ ಪಿಯು ಕಾಲೇಜು
- ಗಣಿತಕ್ಕೆ ಸಂಬಂಧಿಸಿದಂತೆ ಕೆಲವೊಂದು ಬದಲಾವಣೆಗಳಿವೆ. ಒಂದು ಅಂಕದ ಪ್ರಶ್ನೆಗಳನ್ನು ಅದರಲ್ಲಿ ಕೇಳುವುದಕ್ಕೆ ಸಾಧ್ಯವಿಲ್ಲ. ಆದರೂ ಮುಂದಿನ ದಿನಗಳಲ್ಲಿ ಅದನ್ನು ಪರಿಶೀಲಿಸಲಾಗುವುದು.
ಶಿಕ್ಷಕರು ಪಠ್ಯದಲ್ಲಿನ ಕೆಲವೊಂದು ವಿಷಯ ಮಾತ್ರ ಪ್ರಮುಖ ಎಂದು ಹೇಳುತ್ತಿದ್ದಾರೆ. ಬೇರೆಯದನ್ನು ಓದುವುದು ಅನಗತ್ಯ ಎನ್ನುತ್ತಿದ್ದಾರೆ. ಅದರಿಂದ ಗೊಂದಲವುಂಟಾಗುತ್ತಿದೆ.
| ದೇವಿಕಾ ಬೆಂಗಳೂರು
- ಪಠ್ಯದಲ್ಲಿನ ಪ್ರತಿಯೊಂದು ವಿಷಯವೂ ಪ್ರಮುಖವೇ. ಯಾವುದಾದರೂ ಶಿಕ್ಷಕರು ಕೆಲವು ವಿಷಯ ಮಾತ್ರ ಪ್ರಮುಖ ಅಂತ ಹೇಳುತ್ತಿದ್ದರೆ ಅದು ತಪ್ಪು. ವಿದ್ಯಾರ್ಥಿಗಳು ಪರೀಕ್ಷೆಗೆ ಕೆಲವು ವಿಷಯಗಳನ್ನು ಮಾತ್ರ ಓದದೆ, ಎಲ್ಲವನ್ನೂ ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಆಗ ಯಾವುದೇ ಪ್ರಶ್ನೆ ಬಂದರೂ ಅದಕ್ಕೆ ಸಮರ್ಪಕವಾಗಿ ಉತ್ತರ ಬರೆಯಬಹುದು.
ನಾನು ಎಸ್ಸೆಸ್ಸೆಲ್ಸಿ ವ್ಯಾಸಂಗ ಮಾಡುತ್ತಿದ್ದು, ಶಿಕ್ಷಕರು ಕೊಡುವ ನೋಟ್ಸ್ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ… ಏನು ಮಾಡಲಿ?
| ನಟರಾಜ್ ರಾಯಚೂರು
- ಪಠ್ಯದಲ್ಲಿ ಅರ್ಥವಾಗದಿರುವುದನ್ನು ಪಾಠ ಮುಗಿದ ಬಳಿಕ ಶಿಕ್ಷಕರ ಜತೆ ಕೇಳಿ ರ್ಚಚಿಸಿ ಅರ್ಥ ಮಾಡಿಕೊಳ್ಳಬೇಕು. ಒಂದೊಂದು ವಿಷಯಕ್ಕೆ ಇಂತಿಷ್ಟು ಅಂತ ಸಮಯ ಮೀಸಲಿಟ್ಟು ವ್ಯಾಸಂಗ ಮಾಡಿದರೆ ಉತ್ತಮ.
ಪರೀಕ್ಷೆ ಎನ್ನುವುದು ಶಿಕ್ಷೆ ರೀತಿ ಆಗ್ತಿದೆ. ಹಿಂದೆಲ್ಲ ಪರೀಕ್ಷೆಯಲ್ಲಿ ಯಾವ ಪಠ್ಯದಲ್ಲಿನ ಪ್ರಶ್ನೆಗಳು ಬರುತ್ತವೆ ಎಂಬುದನ್ನು ತಿಳಿಸಲು ನೀಲಿನಕ್ಷೆ ನೀಡಲಾಗುತ್ತಿತ್ತು. ಅದನ್ನು ಈಗ ನಿಲ್ಲಿಸಲಾಗಿದೆ. ಅದರ ಬಗ್ಗೆ ಸ್ಪಷ್ಟತೆ ನೀಡಿ.
| ಐಶ್ವರ್ಯಾ ಬೆಂಗಳೂರು
- ನೀಲಿನಕ್ಷೆ ಎನ್ನುವುದು ಶಿಕ್ಷಕರಿಗೆ ಸಂಬಂಧಪಟ್ಟಿದ್ದು. 2019ರ ಆಗಸ್ಟ್ನಲ್ಲಿಯೇ ಆ ಬಗ್ಗೆ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ. ಅದರ ಬಗ್ಗೆ ವಿದ್ಯಾರ್ಥಿಗಳು ಚಿಂತಿಸುವ ಅಗತ್ಯವಿಲ್ಲ. ಪರೀಕ್ಷೆಗೆ ತಯಾರಾಗುವುದು ಮುಖ್ಯ.
ನನ್ನ ಮಗಳಿಗೆ ಕಲಿಕೆಯಲ್ಲಿ ಆಸಕ್ತಿ ಇಲ್ಲ. ಸರಿಯಾಗಿ ವ್ಯಾಸಂಗ ಮಾಡುತ್ತಿಲ್ಲ. ನಾನು ಶಿಕ್ಷಕಿಯಾದರೂ ನನ್ನ ಮಗಳಿಗೆ ಸೂಕ್ತ ರೀತಿಯಲ್ಲಿ ಕಲಿಸಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಪರಿಹಾರವೇನಾದರೂ ತಿಳಿಸಬಹುದೇ ?
| ಅನ್ನಪೂರ್ಣ ಅಂಗಡಿ ಶಿಕ್ಷಕಿ
- ನಿಮ್ಮ ಮಗಳ ತರಗತಿಯ ಶಿಕ್ಷಕರು ಹಾಗೂ ಆಕೆಯ ಸ್ನೇಹಿತೆಯರ ಜತೆ ಈ ಬಗ್ಗೆ ರ್ಚಚಿಸಿ. ಆಕೆಗೆ ಕಲಿಕೆಯ ಮಹತ್ವ ತಿಳಿಸಿ ಬುದ್ಧಿವಾದ ಹೇಳಿ. ಆಗ ಆಕೆಗೆ ಕಲಿಕೆಯಲ್ಲಿ ಆಸಕ್ತಿ ಬೆಳೆಯುವಂತೆ ಮಾಡಬಹುದು.
ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಹೇಗೆ ಎದುರಿಸಬೇಕು ಎಂಬುದು ತಿಳಿಯುತ್ತಿಲ್ಲ. ಪರೀಕ್ಷಾ ಭಯ ಹೋಗಲಾಡಿಸಲು ನಿಮ್ಮ ಸಲಹೆಗಳೇನು ?
| ವಿನೋದ್ ರೆಡ್ಡಿ ಬೆಳಗಾವಿ
- ಪಠ್ಯಗಳನ್ನು ಸರಿಯಾಗಿ ಅಭ್ಯಾಸ ಮಾಡಿ, ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿದರೆ ಉತ್ತಮ ಅಂಕಗಳನ್ನು ಗಳಿಸಬಹುದು. ಭಯ ಪಡುವುದರಿಂದ ನಿಮ್ಮ ಆತ್ಮವಿಶ್ವಾಸ ಕುಗ್ಗುತ್ತದೆ.
ಪ್ರಶ್ನೆ ಪತ್ರಿಕೆ ಸೋರಿಕೆಯಾಗುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಯಾವೆಲ್ಲಾ ಕ್ರಮಗಳನ್ನು ಕೈಗೊಂಡಿದೆ ?
| ಕವಿತಾ ಹಿರೇಮಠ್ ಧಾರವಾಡ
- ಪ್ರಶ್ನೆ ಪತ್ರಿಕೆ ಸೋರಿಕೆಯಾಗದಂತೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಪರೀಕ್ಷೆ ವೇಳೆ ವಿದ್ಯಾರ್ಥಿಗಳು ಸಾಮೂಹಿಕವಾಗಿ ನಕಲು ಮಾಡುವುದರ ವಿರುದ್ಧವೂ ಕ್ರಮ ಕೈಗೊಳ್ಳುತ್ತೇವೆ. ಉತ್ತರ ಪತ್ರಿಕೆಗಳನ್ನು ಸೂಕ್ತ ರೀತಿಯಲ್ಲಿ ಮುತುವರ್ಜಿಯಿಂದ ಮೌಲ್ಯಮಾಪನ ಮಾಡುವಂತೆ ಸೂಚಿಸಲಾಗಿದೆ.