ವಿಜಯಪುರ : ಮೀಸೆಯಿಂದಲೇ 55 ಕೆಜಿ ಭಾರದ ಸಂಗ್ರಾಣಿ ಕಲ್ಲು ಎತ್ತಿದ ಭೂಪ.. ಹಲ್ಲಿನಿಂದಲೇ 1.10 ಕ್ವಿಂಟಾಲ್ನ ಒತ್ತು ಕಲ್ಲು ಎಳೆದ ಜಟ್ಟಿ!
ಒಂದೆಡೆ ಜಟ್ಟಿಗಳ ತಾಕತ್ತು, ಇನ್ನೊಂದೆಡೆ ಮೀಸೆ ಮಾವನ ಕರಾಮತ್ತು ಪ್ರೇಕ್ಷಕರಲ್ಲಿ ರೋಮಾಂಚನಗೊಳಿಸಿತು.
ವಿಜಯಪುರದಲ್ಲಿ ಶ್ರೀಸಿದ್ಧೇಶ್ವರ ಜಾತ್ರೆ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಭಾರ ಎತ್ತುವ ಸ್ಪರ್ಧೆಯಲ್ಲಿ ಗಮನ ಸೆಳೆದ ದೃಶ್ಯಗಳಿವು.
ಈ ಬಾರಿ ಜಿಲ್ಲೆ ಸೇರಿ ಮಹಾರಾಷ್ಟ್ರ, ಉತ್ತರ ಪ್ರದೇಶದಿಂದ ಜಟ್ಟಿಗಳು ಆಗಮಿಸಿದ್ದು ಜಾತ್ರಾಮಹೋತ್ಸವಕ್ಕೆ ಮೆರುಗು ತಂದಿತು. ನೆರೆದಿದ್ದ ಸಾವಿರಾರು ಪ್ರೇಕ್ಷಕರು ಜಟ್ಟಿಗಳ ಬಲ ಪ್ರದರ್ಶನ ಕಂಡು ‘ಹೌದ್ದ ಹುಲಿಯಾ’ ಎಂದು ಅವರನ್ನು ಪ್ರೋತ್ಸಾಹಿಸಿದರು.
ಗಮನ ಸೆಳೆದ ಮೀಸೆಮಾವಂದಿರು
ಮೀಸೆ ಮಾವ ಎಂದೇ ಖ್ಯಾತಿ ಪಡೆದಿರುವ ಮನಗೂಳಿಯ ರಂಗಪ್ಪ ಕಿರಶ್ಯಾಳ 55 ಕೆಜಿ ಭಾರದ ಸಂಗ್ರಾಣಿ ಕಲ್ಲನ್ನು ಮೀಸೆಯಿಂದ ಎತ್ತಿ ಎಲ್ಲರ ಗಮನ ಸೆಳೆದರು. ಮಹಾರಾಷ್ಟ್ರದ ಸಿದ್ಧನಾಥ ಗ್ರಾಮದ ದಿಗಂಬರಪ್ಪ ಕಕ್ಕಳಮೇಲಿ 55 ಕೆಜಿ ಸಂಗ್ರಾಣಿ ಕಲ್ಲನ್ನು ಮೀಸೆಯಿಂದ ಎತ್ತುವ ಮೂಲಕ ಮೀಸೆಯ ಸಾಮರ್ಥ್ಯ ಪ್ರದರ್ಶಿಸಿದರು.
ಶತಮಾನದ ದಾಖಲೆ ಸರಿಗಟ್ಟಿದ ಜಟ್ಟಿ
ಉತ್ತರಪ್ರದೇಶದ ಜಟ್ಟಿ ಭೈರಾಟಿದಾದಾ ಎಂಬಾತ 110 ಕೆಜಿ ಸಂಗ್ರಾಣಿ ಕಲ್ಲು ಎತ್ತುವ ಮೂಲಕ ಶತಮಾನದ ದಾಖಲೆಯನ್ನು ಸರಗಟ್ಟಿದರು. 95 ಕೆಜಿ ಸಂಗ್ರಾಣಿ ಕಲ್ಲನ್ನು ಒಂದೇ ಕೈಯಲ್ಲಿ ಎರಡು ಬಾರಿ ಎತ್ತುವ ಮೂಲಕ ಪ್ರೇಕ್ಷಕರ ಮನ ಗೆದ್ದರು. ಮುಂದುವರಿದು ಒಂದು ಕ್ವಿಂಟಾಲ್ 10 ಕೆಜಿ ಭಾರದ ಸಂಗ್ರಾಣಿ ಕಲ್ಲನ್ನು ಎತ್ತುವ ಮೂಲಕ ದಾಖಲೆ ಬರೆದರು. ಕಳೆದ ಬಾರಿ ಮಹಾರಾಷ್ಟ್ರದ ಅ್ಜಲ್ ಮುಜಾವರ 95 ಕೆಜಿ ಸಂಗ್ರಾಣಿ ಕಲ್ಲನ್ನು ಮೂರು ಬಾರಿ ಎತ್ತುವ ಮೂಲಕ ಬಲಾಢ್ಯ ಜಟ್ಟಿ ಎನಿಸಿಕೊಂಡಿದ್ದರು.
ಚಿಣ್ಣರ ಜುಗಲ್ಬಂದಿಗೆ ಫಿದಾ
ಗುಂಡು ಎತ್ತುವ ಸ್ಪರ್ಧೆಯಲ್ಲಿ ಚಿಣ್ಣರು ಭಾಗವಹಿಸಿದ್ದು ವಿಶೇಷವಾಗಿತ್ತು. 10 ವರ್ಷದ ಬಾಲಕ ಬೀರಪ್ಪ ಗುನ್ನಾಪುರ 55 ಕೆಜಿ ಭಾರದ ಗುಂಡನ್ನು ಮೂರು ಬಾರಿ ಎತ್ತುವ ಮೂಲಕ ಗಮನ ಸೆಳೆದರೆ, 12 ವರ್ಷದ ಕೇದಾರಲಿಂಗ ಲೋಗಾಂವಿ 55 ಕೆಜಿ ಗುಂಡನ್ನು 8 ಬಾರಿ ಎತ್ತುವ ಮೂಲಕ ಜುಗಲ್ಬಂದಿ ಪ್ರದರ್ಶಿಸಿದರು.
ಇನ್ನು ಪುರುಷರ ವಿಭಾಗದಲ್ಲಿ ನಾಗಠಾಣದ ಬೀರಪ್ಪ ಪೂಜಾರಿ ಒಂದು ಕ್ವಿಂಟಾಲ್ 82 ಕೆಜಿ ಗುಂಡು ಎತ್ತಿದರೆ ಬಳಗಾನೂರಿನ ಹೂವಣ್ಣ ಅಳಗುಂಡಗಿ ಒಂದು ಕ್ವಿಂಟಾಲ್ 60 ಕೆಜಿ ಗುಂಡು ಎತ್ತುವ ಮೂಲಕ ತೋಳ್ಬಲ ಪ್ರದರ್ಶಿಸಿದರು.
ಹಲ್ಲಿನಿಂದ 1.10 ಕ್ವಿಂಟಾಲ್ ಕಲ್ಲು ಜಗ್ಗಿದ
ಮುದ್ದೇಬಿಹಾಳ ತಾಲೂಕಿನ ಹಿರಗಾರ ಗ್ರಾಮದ ಕಾಂತಪ್ಪ ತೆಲಗಿ ಅವರು ಹಲ್ಲಿನಿಂದಲೇ ಒಂದು ಕ್ವಿಂಟಾಲ್ 10 ಕೆಜಿ ಸಂಗ್ರಾಣಿ ಕಲ್ಲನ್ನು ಹಗ್ಗದ ಸಹಾಯದಿಂದ ಎಳೆಯುವ ಮೂಲಕ ಮನಗೆದ್ದರು. ಇನ್ನು ಸಿಂದಗಿಯ ರಮೇಶ ಎಂಬುವವರು ಹಲ್ಲಿನಿಂದಲೇ 70 ಕೆಜಿ ತೂಕದ ಕಬ್ಬಿಣದ ಸಲಾಕೆಯನ್ನು ಎತ್ತಿ ಬಿಸಾಡಿದರು.
ಹೀರಾನಾಯ್ಕ ಟಿ.