ವಿಜಯಪುರ: ವಿಶ್ವ ಗುಬ್ಬಚ್ಚಿ ದಿನ (ಮಾ.20), ವಿಶ್ವ ಅರಣ್ಯ ದಿನ (ಮಾ.21) ಹಾಗೂ ವಿಶ್ವ ಜಲ ದಿನ (ಮಾ.22) ನಿಮಿತ್ತ ಪರ್ಯಾವರಣ ಸಂರಕ್ಷಣಾ ಸಂಘಟನೆ ಹಾಗೂ ಕರ್ನಾಟಕ ಅಮೇಚೂರ್ ಸೈಕ್ಲಿಂಗ್ ಅಸೋಸಿಯೇಶನ್ ಸಹಯೋಗದಲ್ಲಿ ಬುಧವಾರ ಸೈಕಲ್ ಜಾಥಾ ನಡೆಯಿತು.ನಗರದ ಬಂಜಾರಾ ಕ್ರಾಸ್ನಿಂದ ಬೆಳಗ್ಗೆ 6ಕ್ಕೆ ಸೈಕ್ಲಿಂಗ್ ಅಸೋಶಿಯೇಶನ್ ಅಧ್ಯಕ್ಷ ರಾಜು ಬಿರಾದಾರ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ಅರಸಿದ್ದಿ, ಮಹಾನಗರಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ಅಪರ ಜಿಲ್ಲಾಧಿಕಾರಿ ಬಲರಾಮ ಲಮಾಣಿ, ಪ್ರಶಾಂತ ವಿ.ಕೆ., ಉಮೇಶ ಕಾರಜೋಳ ಚಾಲನೆ ನೀಡಿದರು.
ಸಾನ್ನಿಧ್ಯ ವಹಿಸಿದ್ದ ಜ್ಞಾನಯೋಗಾಶ್ರಮದ ಪರಮಪೂಜ್ಯ ಬಸಲಿಂಗ ಸ್ವಾಮೀಜಿ ಮಾತನಾಡಿ, ಸೈಕಲ್ ಬಳಸುವುದರಿಂದ ಪರಿಸರ ರಕ್ಷಣೆ, ವಾಯು ಮಾಲಿನ್ಯ ತಡೆಯಬಹುದು. ನಮ್ಮ ಶರೀರಕ್ಕೆ ಪರಿಶುದ್ಧ ಆಮ್ಲಜನಕವೂ ಲಭಿಸುತ್ತದೆ ಎಂದರು.
ಜಯರಾಮ ಬೊಲ್ಲೊಜಿ ಮಾತನಾಡಿ, ಮೂರು ಆಯಾಮಗಳ ಬಗ್ಗೆ ತಿಳಿಸಿದರು. ಗಿಡಗಳನ್ನು ಬೆಳೆಸಿರಿ, ನೀರನ್ನು ಸಂರಕ್ಷಿಸಿ, ಪಾಲಿಥಿನ್ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವ ಕುರಿತು ಮತ್ತು ಮರು ಬಳಕೆಯಾಗದಂತಹ ಪ್ಲಾಸ್ಟಿಕ್ನ್ನು ಇಕೋ ಬ್ರಿಕ್ಸ್ ಆಗಿ ಹೇಗೆ ಮಾಡಬೇಕೆಂದು ಡೆಮೊ ತೋರಿಸಿದರು. ಪ್ಲಾಸ್ಟಿಕ್ ಸುಡದಂತೆ ತಿಳಿಸಿದರು.
ಪ್ರೇಮಾನಂದ ಬಿರಾದಾರ, ರಮೇಶ ಬಿದನೂರ, ರಾಜೇಶ ದೇವಗಿರಿ, ಬಾಬು ಶಿರಶ್ಯಾಡ, ವೀರೇಂದ್ರ ಗುಚ್ಚಟ್ಟಿ, ಪಲ್ಲವಿ ವೈದಂಡೆ, ಸುವರ್ಣಾ ಮೆಣಸಿನಕಾಯಿ, ವಿಜಯ ಸುಲಾಖೆ, ಬಸವರಾಜ ದೇವರ, ಬಸವರಾಜ ಬೈಚಬಾಳ ಹಾಗೂ ನನ್ನ ಗಿಡ ನನ್ನ ಭೂಮಿ ತಂಡ, ಸ್ವಚ್ಛ ವಿಜಯಪುರ ವಿವಿಧ ಶಿಕ್ಷಣ ಸಂಸ್ಥೆಗಳು, ವಿಜಯಪುರ ಸೈಕ್ಲಿಂಗ್ ಗ್ರೂಪ್, ಪರಿಸರ ಆಸಕ್ತರು ಹಾಗೂ ಹವ್ಯಾಸ ಸೈಕಲ್ ಚಾಲಕರು ಉಪಸ್ಥಿತರಿದ್ದರು.
ಲಿಂಗದ ಗುಡಿ ರಸ್ತೆ, ಸಿದ್ಧೇಶ್ವರ ಮಂದಿರ, ಗಾಂಧಿ ವೃತ್ತ, ಬಸವೇಶ್ವರ ವೃತ್ತ, ಬಸ್ ನಿಲ್ದಾಣ ಮಾರ್ಗವಾಗಿ ಗಗನ ಮಹಲ್ ತಲುಪಿ ಜಾಥಾ ಸಮಾಪ್ತಿಗೊಂಡಿತು.