ವಿಜಯಪುರ: ರಾಜ್ಯದಲ್ಲಿ ನಡೆಯುತ್ತಿರುವ ಜಾತ್ರೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಗೆ ಅನುಮತಿ ನೀಡಲು ಆಗ್ರಹಿಸಿ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಬುಧವಾರ ಜಿಲ್ಲಾಡಳಿತ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಕಳೆದ ವರ್ಷ ಕರೊನಾ ನಿಯಂತ್ರಣ ಹಿನ್ನೆಲೆ ಲಾಕ್ಡೌನ್ ವಿಧಿಸಲಾಗಿತ್ತು. ಪರಿಣಾಮ ಎಲ್ಲ ಜಾತ್ರೆ ಹಾಗೂ ಸಮಾರಂಭಗಳನ್ನು ನಿಷೇಧಿಸಲಾಗಿತ್ತು. ಈ ಬಾರಿ ಕರೊನಾ ಪ್ರಕರಣ ಹೆಚ್ಚುತ್ತಿದ್ದು, ಎಲ್ಲ ಉದ್ಯಮಗಳು, ರಾಜಕೀಯ ಸಮಾವೇಶಗಳು ಎಗ್ಗಿಲ್ಲದೆ ನಡೆದಿವೆ. ಅವುಗಳಿಗಿಲ್ಲದ ನಿಷೇಧ ಜಾತ್ರೆಗಳಿಗೇಕೆ ಎಂದು ಪಟ್ಟಣಶೆಟ್ಟಿ ಪ್ರಶ್ನಿಸಿದ್ದಾರೆ.
ಬಾರ್, ಹೋಟೆಲ್, ಶಾಲೆ-ಕಾಲೇಜ್, ಚಿತ್ರಮಂದಿರಗಳು ಆರಂಭಗೊಂಡಿವೆ. ಅಲ್ಲಲ್ಲಿ ಜಾತ್ರೆಗಳು ಆರಂಭಗೊಂಡಿದ್ದು, ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಸಾಮೂಹಿಕ ವಿವಾಹ, ಜಾನುವಾರು ಜಾತ್ರೆ ಮುಂತಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇಂಥ ವೇಳೆ ಜಾತ್ರೆ ನಿಷೇಧಿಸುವುದು ಸರಿಯಲ್ಲ. ಅದರ ಬದಲಾಗಿ ಮಾಸ್ಕ್ ಧರಿಸುವಂತೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಕಲ್ಲುಗೌಡ ಹರನಾಳ, ಸಿದ್ದು ಮಲ್ಲಿಕಾರ್ಜುನ ಮಠ, ಸಿದ್ದು ಬೆಲ್ಲದ, ಭರತ ಕೋಳಿ, ವಿಜು ಕೋಳಿ, ಜಗದೀಶ ಮುಚ್ಚಂಡಿ, ಮುದಕಣ್ಣ ಅವಟಿ, ಗುರುರಾಜ ದೇಶಪಾಂಡೆ, ಸಂತೋಷ ಹವಾಲ್ದಾರ, ವಿನಾಯಕ ದಹಿಂಡೆ, ರಾಜೇಶ ತೌಸೆ, ಸಚಿನ ಅಡಕಿ, ವಿಜಯ ಜೋಶಿ, ಸಂಪತ್ ಕೋಹಳ್ಳಿ, ಬಸಯ್ಯ ಗೊಳಸಂಗಿಮಠ, ಸನ್ನಿ ಗವಿಮಠ, ರಜಾಕ ಕಾಖಂಡಕಿ, ರಾಹುಲ್ ಮಾನೆ, ಶಿವಾನಂದ ರೇಷ್ಮಿ, ಗಣೇಶ ರಣದೇವಿ, ಲಖಣ ದೇವಕುಳಿ, ಉಮೇಶ ವೀರಕರ ಮತ್ತಿತರರಿದ್ದರು.