ವಿಜಯಪುರ: ಕರೊನಾ ವೈರಸ್ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಪ್ರತಿ ಸಂಡೇ ಲಾಕ್ಡೌನ್ ಘೋಷಿಸಿದ್ದು, ಜಿಲ್ಲಾದ್ಯಂತ ಭಾನುವಾರ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ವಿಜಯಪುರ ನಗರ ಸೇರಿದಂತೆ ಜಿಲ್ಲಾದ್ಯಂತ ಸಂಪೂರ್ಣ ಸ್ತಬ್ಧಗೊಂಡಿತ್ತು.
ವಿಜಯಪುರದ ಕೇಂದ್ರ ಬಸ್ ನಿಲ್ದಾಣ, ರೈಲು ನಿಲ್ದಾಣ, ಖಾಸಗಿ ಆಸ್ಪತ್ರೆ, ಜಿಲ್ಲಾಸ್ಪತ್ರೆ ಸೇರಿದಂತೆ ಅಂಗಡಿ ಮುಂಗಟ್ಟು ಸಂಪೂರ್ಣ ಬಂದ್ ಆಗಿದ್ದವು. ಇನ್ನು ವಾಹನ ಸವಾರರು ಮನೆ ಬಿಟ್ಟು ಹೊರಬರದೆ ಇರುವುದರಿಂದ ನಗರ ಸೇರಿದಂತೆ ಪಟ್ಟಣ, ಗ್ರಾಮೀಣ ಭಾಗದ ರಸ್ತೆಗಳೆಲ್ಲ ಬಿಕೋ ಎನ್ನುತ್ತಿದ್ದವು.
ಇಲ್ಲಿನ ಹೃದಯ ಭಾಗ ಗಾಂಧಿ ಚೌಕ್, ಕೆ.ಸಿ. ಮಾರುಕಟ್ಟೆ, ಲಾಲ್ಬಹಾದುರ್ ಶಾಸಿ ಮಾರುಕಟ್ಟೆ, ತರಕಾರಿ ಮಾರುಕಟ್ಟೆ, ಕೇಂದ್ರ ಬಸ್ ನಿಲ್ದಾಣ, ಹೋಟೆಲ್, ಚಿತ್ರಮಂದಿರ, ಪೆಟ್ರೋಲ್ ಬಂಕ್, ಸಲೂನ್, ಬ್ಯೂಟಿ ಪಾರ್ಲರ್ ಸೇರಿ ಸಾರ್ವಜನಿಕ ಸ್ಥಳಗಳು ಸಂಪೂರ್ಣ ಬಂದ್ ಆಗಿದ್ದವು. ಆಟೋ, ಖಾಸಗಿ ವಾಹನಗಳು ರಸ್ತೆಯಲ್ಲಿ ಸಂಚರಿಸದೆ ಇರುವುದರಿಂದ ರಸ್ತೆಗಳಲ್ಲಿ ಸ್ಮಶಾನ ಮೌನ ಆವರಿಸಿದಂತಾಗಿತ್ತು.
ಪೊಲೀಸ್ ಬಿಗಿಬಂದೋಬಸ್ತ್
ವಿಜಯಪುರ ನಗರದ ಗಾಂಧಿ ಚೌಕ್ ಸೇರಿದಂತೆ ಶಿವಾಜಿ ವೃತ್ತ, ಅಂಬೇಡ್ಕರ್ ವೃತ್ತ, ಬಸವೇಶ್ವರ ವೃತ್ತ, ಕೇಂದ್ರ ಬಸ್ ನಿಲ್ದಾಣ, ಗೋದಾವರಿ ಹೋಟೆಲ್ ಇನ್ನಿತರ ಕಡೆಗಳಲ್ಲಿ ಸಂಚಾರಿ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದ ದೃಶ್ಯಗಳು ಕಂಡು ಬಂದವು. ಕೆಲವು ಕಡೆಗಳಲ್ಲಿ ಬೈಕ್ನಲ್ಲಿ ಅಡ್ಡಾಡುತ್ತಿದ್ದವರಿಗೆ ಪೊಲೀಸರು ಲಾಠಿ ಬೀಸುವ ಮೂಲಕ ಬೆತ್ತದ ರುಚಿ ತೋರಿಸಿದ ದೃಶ್ಯಗಳು ಕಂಡು ಬಂದವು.