ವಿಜಯಪುರ : ಕೇಂದ್ರ ಸರ್ಕಾರದ ಮಾದರಿಯಲ್ಲಿ ರಾಜ್ಯದಲ್ಲಿಯೂ ಪ್ರತಿ ಮೂರು ತಿಂಗಳಿಗೊಮ್ಮೆ ಸಚಿವರ ಮೌಲ್ಯಮಾಪನ ನಡೆಯಬೇಕು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ನಗರದಲ್ಲಿ ಸುದ್ದಿಗಾರರ ಜತೆ ಭಾನುವಾರ ಮಾತನಾಡಿದ ಅವರು, ಸರ್ಕಾರಿ ಕಾರು, ಗನ್ಮನ್, ಹಿಂದೆ ಎಸ್ಕಾರ್ಟ್, ಮುಂದೆ ಪೈಲಟ್ ಇಟ್ಟುಕೊಂಡು ಮಂತ್ರಿಯಾಗಿ ಸಂಚರಿಸಿದರೆ ಏನೂ ಪ್ರಯೋಜನ ಇಲ್ಲ. ಕೆಲ ಸಚಿವರು ತಮ್ಮ ಮತಕ್ಷೇತ್ರಕ್ಕೆ ಸೀಮಿತರಾಗುತ್ತಿದ್ದಾರೆ. ಸಚಿವರಾದವರು ರಾಜ್ಯಾದ್ಯಂತ ಸಂಚರಿಸಿ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಆಗಬೇಕು. ಪ್ರತಿ ಇಲಾಖೆಯಲ್ಲಿ ನಡೆಯುತ್ತಿರುವ ಅಭಿವೃದ್ಧಿಗಳ ಬಗ್ಗೆ ಪರಿಶೀಲನೆ ನಡೆಸಬೇಕಿದೆ ಎಂದರು.
ಸಚಿವ ಸ್ಥಾನಕ್ಕೆ ತ್ಯಾಗಮಾಡಿ
ಈ ಹಿಂದೆ ಮಂತ್ರಿ ಸ್ಥಾನ ಅನುಭವಿಸಿದವರು ರಾಜ್ಯ ಹಾಗೂ ಸರ್ಕಾರದ ಹಿತದೃಷ್ಟಿಯಿಂದ ಸಚಿವ ಸ್ಥಾನದ ತ್ಯಾಗಕ್ಕೆ ಮುಂದಾಗಬೇಕು ಎಂದು ಶಾಸಕ ಯತ್ನಾಳ ಪರೋಕ್ಷವಾಗಿ ಸಲಹೆ ನೀಡಿದರು.
ಸಂಪುಟ ವಿಸ್ತರಣೆಯಾಗಬೇಕು. ಮುಂದಿನ ಮೂರುವರೆ ವರ್ಷ ಸರ್ಕಾರ ಸುಭದ್ರವಾಗಿರಬೇಕಾದರೆ ಕೆಲ ಸಚಿವರು ಸ್ಥಾನ ತ್ಯಾಗಕ್ಕೆ ಸಿದ್ಧರಾಗಬೇಕಾಗುತ್ತದೆ. ನನಗೆ ಸಚಿವ ಸ್ಥಾನದ ಹಪಾಹಪಿ ಇಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಅವರನ್ನು ಸಚಿವ ಸ್ಥಾನದಿಂದ ಕೆಳಗಿಳಿಸಿ ನನಗೆ ಸಚಿವ ಸ್ಥಾನ ಸಿಗುವುದಾದರೂ ಅಂತಹ ಸಚಿವ ಸ್ಥಾನ ನನಗೆ ಬೇಡ, ಹಾಗೆ ನಾನು ಬಯಸುವುದೂ ಇಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮುಂಬೈ ಕರ್ನಾಟಕ ಮಂಡಳಿ ರಚನೆಯಾಗಲಿ
ಹೈದರಾಬಾದ್ ಕರ್ನಾಟಕ ವ್ಯಾಪ್ತಿಗೆ ವಿಜಯಪುರ ಸೇರ್ಪಡೆಯಾಗಬೇಕು ಎಂಬ ಕೂಗಿಗೆ ಸ್ಪಂದನೆ ದೊರಕಲಿಲ್ಲ. ಈ ಹಿಂದೆ ಎಂ.ಬಿ. ಪಾಟೀಲರು ಸಹ ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ, ಈಗ ನಾನು ಸಹ ಪ್ರಯತ್ನಪಟ್ಟರೆ ಲ ಸಿಗುವುದು ವಿರಳ. ಹೀಗಾಗಿ ಹೈದರಾಬಾದ್ ಕರ್ನಾಟಕ ಮಾದರಿಯಲ್ಲಿಯೇ ಮುಂಬೈ ಕರ್ನಾಟಕ ಮಂಡಳಿ ರಚನೆಯಾಗಬೇಕು. ವೈಜ್ಞಾನಿಕವಾಗಿ ಹೆಚ್ಚಿನ ಅನುದಾನ ವಿನಿಯೋಗಿಸಬೇಕು, ಶೀಘ್ರದಲ್ಲಿ ಮುಂಬೈ ಕರ್ನಾಟಕ ಭಾಗದ ಶಾಸಕರೊಂದಿಗೆ ಈ ವಿಷಯವನ್ನು ಸಮಾಲೋಚನೆ ನಡೆಸುವೆ ಎಂದು ಶಾಸಕ ಬಸನಗೌಡ ಪಾಟೀಲ ಹೇಳಿದರು.