More

    ಸಚಿವ ಸ್ಥಾನಕ್ಕೆ ಲಾಬಿ ಮಾಡಲ್ಲ

    ವಿಜಯಪುರ: ನಾನು ಸಚಿವ ಸ್ಥಾನಕ್ಕಾಗಿ ಯಾವುದೇ ಲಾಬಿ ಮಾಡಲ್ಲ. ಕೊಟ್ಟರೆ ಸಮರ್ಥವಾಗಿ ಒಳ್ಳೆಯ ಕೆಲಸವನ್ನು ಮಾಡುತ್ತೇನೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪ್ರತಿಕ್ರಿಯಿಸಿದ್ದಾರೆ.
    ಸಚಿವ ಸಂಪುಟ ವಿಸ್ತರಣೆ ಹಾಗೂ ಆಕಾಂಕ್ಷಿಗಳ ಕುರಿತು ‘ವಿಜಯವಾಣಿ- ದಿಗ್ವಿಜಯ’ ದೊಂದಿಗೆ ಸೋಮವಾರ ಮಾತನಾಡಿದ ಅವರು, ನಾನು ಕೇಂದ್ರದಲ್ಲಿ ಮಂತ್ರಿಯಾಗಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದೇನೆ. ಸಂಘ-ಸಂಸ್ಥೆಗಳನ್ನು ಕಟ್ಟುವ ಮೂಲಕ ನನ್ನದೇ ಆದ ಸಾಮ್ರಾಜ್ಯವನ್ನು ನಿರ್ಮಿಸಿದ್ದೇನೆ. ಹೀಗಾಗಿ ನನಗೆ ಮಂತ್ರಿ ಮಾಡಿ ಎಂದು ಬಯೋಡೆಟಾ ಹಿಡಿದುಕೊಂಡು ಅಡ್ಡಾಡೋ ರಾಜಕಾರಣಿ ನಾನು ಅಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ.
    ಹಾಗೇನಾದರೂ ವಿಜಯಪುರಕ್ಕೆ ಪ್ರಾತಿನಿಧ್ಯ ಹಾಗೂ ಹಿರಿಯ ಶಾಸಕ ಎಂದು ಸಚಿವ ಸ್ಥಾನ ಕೊಟ್ಟರೆ ಅದನ್ನು ಸಮರ್ಥವಾಗಿ ನಿಭಾಯಿಸುತ್ತೇನೆ. ಹಾಗೆಂದು ನನ್ನನ್ನು ಮಂತ್ರಿ ಮಾಡಿ ಎಂದು ಯಾವ ನಾಯಕರಿಗೂ ಹೇಳಿಲ್ಲ. ಮುಖ್ಯಮಂತ್ರಿ ಅವರನ್ನೇ ಭೇಟಿಯಾಗಿ ಒಂದೂವರೆ ಗಂಟೆ ಅವರ ಮನೆಯಲ್ಲೇ ಇದ್ದೆ. ಆದರೂ ಮಂತ್ರಿ ಸ್ಥಾನ ಕೊಡಿ ಎಂದು ಅವರನ್ನು ಕೇಳಿಲ್ಲ. ಕೊಟ್ಟರೆ ಸಮರ್ಥವಾಗಿ ನಿಭಾಯಿಸುವೆ, ಕೊಡದಿದ್ದರೆ ಅಸಮಾಧಾನ ಮಾಡಿಕೊಳ್ಳುವುದಿಲ್ಲ ಎಂದರು.

    ಸಾಡೇಸಾತಿ ದಿನಗಳು ಮುಗಿದಿವೆ

    ಅದೃಷ್ಟ ಬಂದರೆ ಭಗವಂತ ‘ಛಪ್ಪಡ್ ಫಾಡಕೆ ದೇತೆ ಹೈ’ ಎನ್ನುವಂತೆ ಹಣೆಬರಹ ಬದಲಿಸಲು ಯಾರಿಂದಲೂ ಸಾಧ್ಯವಿಲ್ಲ. ಇಷ್ಟು ದಿನ ನನಗಿದ್ದ ಸಾಡೇಸಾತಿ ದಿನಗಳು ಮುಗಿದಿವೆ. ಈಗ ಶುಕ್ರದೆಸೆ ಆರಂಭವಾಗಿದ್ದು, 2040ರವರೆಗೂ ರಾಜಯೋಗವಿದೆ. ನಾನು ಎಲ್ಲಿ ಕುಳಿತರೂ ಅದೃಷ್ಟ ಹುಡುಕಿಕೊಂಡು ಬರುತ್ತದೆ. 2024ರಲ್ಲಿ ಸಿಎಂ ಯೋಗವಿದೆ. ಹಣೆಬರಹದಲ್ಲಿದ್ದರೆ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಷಾ ಅವರೇ ನನ್ನನ್ನು ಕರೆದು ಸಿಎಂ ಮಾಡುತ್ತಾರೆ ಎಂದು ಹೇಳಿದರು.

    ನೇರವಾಗಿ ಮಾತನಾಡಿ ಹಿಂದುಳಿದೆ

    ರಾಜಕಾರಣ ಗೊತ್ತಿಲ್ಲದವರೇ ಸಿಎಂ ಆಗಿದ್ದಾರೆ. ಕುಮಾರಸ್ವಾಮಿ, ಸದಾನಂದಗೌಡ, ಜಗದೀಶ ಶೆಟ್ಟರ್ ಇವರೆಲ್ಲ ಹಾಗೂ ನಾವು ಒಂದೇ ಬೆಂಚಿನವರು. ಅವರೆಲ್ಲ ಒಂದು ಬೆಂಚ್ ಮುಂದೆ ಜಿಗಿದು ಸಿಎಂ ಆಗಿದ್ದಾರೆ. ಆದರೆ ನಾನು ನೇರವಾಗಿ ಮಾತನಾಡಿ ಹಿಂದುಳಿದಿದ್ದೇನೆ. ಹೀಗಾಗಿ ‘ದೊಡ್ಡ ಹುದ್ದೆಗೆ ಹೋಗಿ ಸಣ್ಣ ಹುದ್ದೆಗೆ ಬರಬೇಡಿ’ ಎಂದು ನಾನು ಕೆಲವರಿಗೆ ಹುದ್ದೆ ತ್ಯಾಗ ಮಾಡಿ ಎಂದು ಹೇಳುತ್ತಿದ್ದೇನೆ ಎಂದು ಪರೋಕ್ಷವಾಗಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರಿಗೆ ಟಾಂಗ್ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts