More

    ನಾಟಕ ಕಲೆ ಎಂದಿಗೂ ಜೀವಂತ

    ವಿಜಯಪುರ: ನಾಟಕವು ಎಲ್ಲವನ್ನು ಒಳಗೊಂಡ ಸಮಗ್ರ ಕಲೆಯಾಗಿದ್ದು, ಸಮಾಜದ ಹುಳುಕುಗಳನ್ನು ಎತ್ತಿ ತೋರಿಸುವ, ಸಮಾಜದ ಸಂಬಂಧಗಳನ್ನು ಗಟ್ಟಿಗೊಳಿಸುವ ಸಾಮರ್ಥ್ಯ ನಾಟಕಗಳಿಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಹೇಳಿದರು.

    ಇಲ್ಲಿನ ಕಸಾಪ ಸಭಾಭವನದಲ್ಲಿ ರಾಜ್ಯ ಕರ್ನಾಟಕ ನಾಟಕ ಅಕಾಡೆಮಿ ಹಾಗೂ ರಂಗಮೇಳ ಕಲಾ ಸಂಸ್ಥೆ ವತಿಯಿಂದ ಭಾನುವಾರ ಸಂಜೆ ಹಮ್ಮಿಕೊಂಡಿದ್ದ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ನಾಟಕ ಪುರಾತನ ಕಲೆಯಾಗಿದ್ದು, ರಂಗಭೂಮಿಯು ಬದುಕಿನ ಕನ್ನಡಿ. ನೈಜ ಕಲೆ, ಪ್ರೇಕ್ಷಕರೇ ಜೀವಾಳ. ಇಂದಿನ ಜಾಗತೀಕರಣ ಮತ್ತು ಅಧುನಿಕತೆಯ ಭರಾಟೆಯಲ್ಲಿ ನಮ್ಮ ಸಂಸ್ಕೃತಿಯ ಪ್ರತಿಬಿಂಬಗಳಾಗಿರುವ ನಾಟಕಗಳು ಜನರನ್ನು ತಲುಪುತ್ತಿಲ್ಲ. ಸಿನಿಮಾ, ಟಿವಿ ಕಡೆಗೆ ಆಕರ್ಷಿತರಾಗಿ ನಾಟಕಗಳನ್ನು ನೋಡುವುದನ್ನು ಕಡಿಮೆ ಮಾಡಿದ್ದಾರೆ. ಸಿನಿಮಾ, ಧಾರವಾಹಿಗಳ ಪ್ರಭಾವ ಎಷ್ಟೇ ಬೀರಿದರೂ ನಾಟಕ ಎಂದಿಗೂ ಜೀವಂತವಾಗಿರುತ್ತದೆ ಎಂದರು.

    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿಶ್ರಾಂತ ಸಹಾಯಕ ನಿರ್ದೇಶಕ ಡಾ.ಸೋಮಶೇಖರ ವಾಲಿ ಮಾತನಾಡಿ, ನಾಟಕಗಳನ್ನು ಜನರು ಹೆಚ್ಚು ಹೆಚ್ಚು ನೋಡಿದಾಗ ಸಾರ್ಥಕತೆ ಪಡೆಯುತ್ತವೆ. ಸಮಾಜದಲ್ಲಿ ಕಲಾವಿದರಿಗೆ ಉತ್ತಮ ಸ್ಥಾನಮಾನಗಳು ಸಿಗಬೇಕು. ಕಲಾವಿದರು ಬದುಕು ಸಂಕಷ್ಟದಲ್ಲಿದ್ದರೂ ತಮ್ಮ ರಕ್ತಗತವಾದ ಕಲೆಯಿಂದ ಸಮಾಜದ ಸಂಕಷ್ಟಗಳನ್ನು ಮರೆಸಿ, ಮನರಂಜಿಸುತ್ತಾರೆ. ಆಧುನಿಕ ಯುಗದ ಒತ್ತಡಗಳಿಗೆ ನಮ್ಮ ಸಾಂಪ್ರದಾಯಿಕ ಕಲಾ ಪ್ರಕಾರಗಳು ಅವನತಿಗೊಳ್ಳುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.

    ಇದೇ ವೇಳೆ ಸಾಧಕರಾದ ಮಹಾಂತೇಶ ಓಂಕಾರ, ವಿಜಯ ಮುಳವಾಡ, ಶಾಂತಯ್ಯ ಹಿರೇಮಠ, ರವೀಂದ್ರ ಮೆಡೆಗಾರ, ಹನುಮಂತ ಕುಲಕರ್ಣಿ, ರುಕ್ಮಿಣಿ ಹೆಗಡೆ, ರಾಜೇಶ್ವರಿ ಜೋಳಕೆ ಅವರನ್ನು ಸನ್ಮಾನಿಸಲಾಯಿತು. ವೆಂಕಟೇಶ್ ಹೆಗಡೆ ಮತ್ತು ರುಕ್ಮಿಣಿ ಹೆಗಡೆ ಅವರಿಂದ ರಂಗಗೀತೆಗಳು ಮತ್ತು ಜಾನಪದ ಗೀತೆಗಳು ಹಾಗೂ ರಂಗ ಸಂಸ್ಥೆ ಅವರಿಂದ ‘ಮೂನ್ನೂರು ಮುತ್ತು’ ಎನ್ನುವ ನಾಟಕ ಪ್ರದರ್ಶನಗೊಂಡಿತು.

    ನಿವೃತ್ತ ಅಭಿಯಂತರ ಶಂಕರಗೌಡ ಪಾಟೀಲ, ರಾಜ್ಯ ನಾಟಕ ಅಕಾಡೆಮಿ ಪುರಸ್ಕೃತ ಸಂಗಮೇಶ ಬದಾಮಿ, ರಂಗ ಮೇಳ ವೇದಿಕೆ ಅಧ್ಯಕ್ಷ ಡಿ.ಎಚ್.ಕೋಲಾರ, ಕಸಾಪ ಜಿಲ್ಲಾ ಕಾರ್ಯದರ್ಶಿ ಬಸವರಾಜ ಕುಂಬಾರ, ರವಿ ಕಿತ್ತೂರ , ಸಿದ್ಧಲಿಂಗ ಬಾಗೇವಾಡಿ, ಈರಣ್ಣ ತೊಂಡಿಕಟ್ಟಿ, ಮಯೂರ ತಿಳಗೂಳಕರ, ಎಂ.ಐ.ಬೇಪಾರಿ ಇನ್ನಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts