More

    ಪಿಪಿಇ ಕಿಟ್-ಟ್ರಿಪಲ್ ಲೇಯರ್ ಮಾಸ್ಕ್ ಶೀಘ್ರ ಪೂರೈಕೆ

    ವಿಜಯಪುರ: ಕರೊನಾ ನಿರ್ವಹಣೆ ಹಿನ್ನೆಲೆ ವೈದ್ಯರಿಗೆ ನೆರವಾಗಲು 1400 ಪರ್ಸನಲ್ ಪ್ರೊಟೆಕ್ಷನ್ ಇಕ್ವಿಪ್‌ಮೆಂಟ್ (ಪಿಪಿಇ) ಕಿಟ್‌ಗಳು ಶೀಘ್ರದಲ್ಲೇ ಸರ್ಕಾರದಿಂದ ಜಿಲ್ಲೆಗೆ ಪೂರೈಕೆಯಾಗಲಿವೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜೆ. ರವಿಶಂಕರ ಹೇಳಿದರು.
    ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಕರೊನಾ ಮುನ್ನೆಚ್ಚರಿಕೆ ಕ್ರಮಗಳ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಅವರು, ಸರ್ಕಾರದಿಂದ 1400 ಪಿಪಿಇ ಕಿಟ್‌ಗಳು ಮುಂಜೂರಾಗಿದ್ದು, ಶೀಘ್ರದಲ್ಲಿಯೇ ಪೂರೈಕೆಯಾಗಲಿವೆ. ಅದರಂತೆ 40,000 ಟ್ರಿಪಲ್ ಮಾಸ್ಕ್‌ಗಳು ಮತ್ತು 35,000 ಹೈಡ್ರಾಕ್ಸಿಕ್ಲೋರೋಕ್ವೀನ್ ಮಾತ್ರೆಗಳು ಮತ್ತು ಗಂಟಲು ದ್ರವ ಸಂಗ್ರಹಣಕ್ಕೆ ಬೇಕಾಗುವ ವೈರಲ್ ಟ್ರಾನ್ಸ್‌ಪೋರ್ಟ್ ಮಿಡಿಯಮ್ (ವಿಟಿಎಮ್) 13 ಕಿಟ್‌ಗಳು ಸಹ ಜಿಲ್ಲೆಗೆ ಪೂರೈಕೆಯಾಗಲಿವೆ ಎಂದರು.

    ಸರ್ವಸನ್ನದ್ಧರಾಗಿರಲು ಸೂಚನೆ

    ಜಿಲ್ಲೆಯಲ್ಲಿ ಮುಂಬರುವ ದಿನಗಳಲ್ಲಿ ಕರೊನಾ ಪಾಸಿಟಿವ್ ಪ್ರಕರಣ ಬಂದ ಸಂದರ್ಭದಲ್ಲಿ ಸರ್ವರೀತಿಯಿಂದಲೂ ಸನ್ನದ್ಧಗೊಳ್ಳುವಂತೆ ತಿಳಿಸಿದ ರವಿಶಂಕರ ಅವರು, ಫೀವರ್ ಕ್ಲಿನಿಕ್, ಕ್ವಾರಂಟೈನ್ ಸೆಂಟರ್, ಸೂಪರ್‌ವೈಜಡ್ ಐಸೋಲೇಷನ್ ಸೆಂಟರ್ ಮತ್ತು ಕರೊನಾ ಆಸ್ಪತ್ರೆಗೆ ಕೈಗೊಳ್ಳಬೇಕಾದ ಅವಶ್ಯಕ ಸಿದ್ಧತೆಗಳ ಬಗ್ಗೆ ಮಾಹಿತಿ ಪಡೆದರು.

    ಜಿಲ್ಲಾದ್ಯಂತ ಪಡಿತರ ಹಂಚಿಕೆ ಮತ್ತು ತರಕಾರಿ, ಅಗತ್ಯ ವಸ್ತುಗಳ ಮಾರಾಟ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಟ್ಟುನಿಟ್ಟಾಗಿ ಪಾಲಿಸುವ ಕುರಿತು ಸಾರ್ವಜನಿಕರಿಗೆ ಮನವರಿಕೆ ಮಾಡಬೇಕು. ಕೃಷಿ ಮತ್ತು ಕೃಷಿ ಪೂರಕ ಚಟುವಟಿಕೆಗಳು, ಜೀವನಾವಶ್ಯಕ ವಸ್ತುಗಳಿಗೆ ಯಾವುದೇ ನಿರ್ಬಂಧ ಇಲ್ಲದಿದ್ದರೂ ಸಾಮಾಜಿಕ ಅಂತರ ನಿಯಮ ಕಡ್ಡಾಯವಾಗಿ ಪಾಲಿಸುವಂತೆ ನೋಡಿಕೊಳ್ಳಬೇಕು. ಅದರಂತೆ ಮುಸ್ಲಿಂ ಬಾಂಧವರು ಶಬ್-ಎ-ಬರಾತ್ ಮತ್ತು ಶುಕ್ರವಾರದ ಪ್ರಾರ್ಥನೆಗಳನ್ನು ಸಾಮೂಹಿಕವಾಗಿ ಆಚರಿಸದಂತೆ ಮನವರಿಕೆ ಮಾಡಲು ತಿಳಿಸಿದರು.

    ಜಿಪಂ ಸಿಇಒ ಗೋವಿಂದ ರೆಡ್ಡಿ, ಜಿಲ್ಲಾ ಪೊಲೀಶ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್, ಅಪರ ಜಿಲ್ಲಾಧಿಕಾರಿ ಡಾ. ಔದ್ರಾಮ್, ಮಹಾನಗರ ಪಾಲಿಕೆ ಆಯುಕ್ತ ಹರ್ಷಾ ಶೆಟ್ಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಹೇಂದ್ರ ಕಾಪಸೆ, ವಿಶ್ವ ಆರೋಗ್ಯ ಸಂಸ್ಥೆಯ ಪ್ರತಿನಿಧಿ ಡಾ.ಮುಕುಂದ ಗಲಗಲಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಶರಣಪ್ಪ ಕಟ್ಟಿ, ಆಹಾರ ಇಲಾಖೆ ಜಂಟಿ ನಿರ್ದೇಶಕಿ ಸುರೇಖಾ, ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ.ಮಲ್ಲನಗೌಡ ಬಿರಾದಾರ, ಡಾ. ಧಾರವಾಡಕರ, ಪಶು ಸಂಗೋಪನಾ ಇಲಾಖೆ ಉಪನಿರ್ದೇಶಕ ಪ್ರಾಣೇಶ ಜಾಹಗೀರದಾರ, ಡಾ.ಸಂಪತ್ ಕುಮಾರ್ ಗುನಾರೆ ಮತ್ತಿತರರಿದ್ದರು.

    61 ಪ್ರಕರಣಗಳು ನೆಗೆಟಿವ್

    ಜಿಲ್ಲೆಯಲ್ಲಿ ಈವರೆಗೆ ಸಂಗ್ರಹಿಸಲಾದ 63 ಗಂಟಲು ದ್ರವ ಮಾದರಿಗಳ ಪೈಕಿ 61 ಪ್ರಕರಣಗಳ ವರದಿ ನೆಗೆಟಿವ್ ಬಂದಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ತಿಳಿಸಿದರು. ಈವರೆಗೆ ವಿದೇಶ ಮತ್ತು ಇತರ ಕಡೆಗಳಿಂದ ಬಂದ 422 ಜನರ ಮೇಲೆ ತೀವ್ರ ನಿಗಾ ಇಡಲಾಗಿದೆ. 231 ಜನ 28 ದಿನಗಳ ಅವಧಿ ಪೂರ್ಣಗೊಳಿಸಿದ್ದಾರೆ. 160 ಜನ ರೀಪೋರ್ಟಿಂಗ್ ಅವಧಿಯಲ್ಲಿದ್ದಾರೆ. 31 ಜನ ಗೃಹಬಂಧನ ಅವಧಿಯಲ್ಲಿದ್ದಾರೆ. ಅದರಂತೆ ಹೆಚ್ಚುವರಿಯಾಗಿ 8 ಗಂಟಲು ದ್ರವ ಮಾದರಿಯನ್ನು ಇಂದು ಕಳುಹಿಸಲಾಗಿದೆ ಎಂದು ತಿಳಿಸಿದರು.

    ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಮಾಹಿತಿಯಂತೆ ಪ್ರತಿದಿನ ರಾಜ್ಯದ 3000 ಗಂಟಲು ದ್ರವ ಮಾದರಿಗಳನ್ನು ಪರೀಕ್ಷಿಸಲಾಗುತ್ತಿದ್ದು, ಯಾವುದೇ ರೀತಿಯ ಕರೊನಾ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ 1077 ಜಿಲ್ಲಾ ಸಹಾಯವಾಣಿಗೆ ಸಂಪರ್ಕಿಸಬೇಕು. ಆಯಾ ತಾಲೂಕುವಾರು ಕರೊನಾ ಆಂಬುಲೆನ್ಸ್ ವ್ಯವಸ್ಥೆ ಮಾಡಿದ್ದು, ತಾಲೂಕುವಾರು ನೋಡಲ್ ಮತ್ತು ತಾಲೂಕು ಆರೋಗ್ಯ ಅಧಿಕಾರಿಗಳನ್ನು ನೇಮಿಸಲಾಗಿದೆ. ಅವಶ್ಯಕ ಸಂದರ್ಭದಲ್ಲಿ ಆರೋಗ್ಯ ಸಿಬ್ಬಂದಿಗೆ ಸಮರ್ಪಕ ಪರಿಕರ ಪೂರೈಸಲಾಗುತ್ತದೆ. 200 ಬೆಡ್‌ಗಳ ಜಿಲ್ಲಾಸ್ಪತ್ರೆಯನ್ನು ಕರೊನಾ ಆಸ್ಪತ್ರೆಯಾಗಿ ಪರಿವರ್ತಿಸಲಾಗುತ್ತದೆ. 15 ಹೆಚ್ಚುವರಿ ಆಸ್ಪತ್ರೆಗಳನ್ನು ಗುರುತಿಸಲಾಗಿದೆ. ಬಿಎಲ್‌ಡಿಇ, ಅಲ್ ಆಮೀನ್ ಐಸೋಲೇಷನ್ ವಾರ್ಡ್‌ಗಳನ್ನು ಸಹ ಸಿದ್ಧತೆಯಲ್ಲಿ ಇಟ್ಟುಕೊಂಡಿದ್ದಾರೆ ಎಂದು ಅವರು ತಿಳಿಸಿದರು.

    ಜಿಲ್ಲಾಸ್ಪತ್ರೆ ಕರೊನಾ ಆಸ್ಪತ್ರೆಯಾಗಿ ಪರಿವರ್ತನೆ

    ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಮಾತನಾಡಿ, ಜಿಲ್ಲಾಸ್ಪತ್ರೆಯನ್ನು ಕರೊನಾ ಆಸ್ಪತ್ರೆಯಾಗಿ ಪರಿವರ್ತನೆಗೆ ಪ್ರಾಥಮಿಕ ಹಾಗೂ ಸಿವಿಲ್ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಡಯಾಲಿಸಿಸ್ 80 ರೋಗಿಗಳ ಮ್ಯಾಪಿಂಗ್ ಸಹ ಮಾಡಲಾಗುತ್ತಿದೆ. ದ್ರಾಕ್ಷಿ ಹಾಗೂ ಒಣದ್ರಾಕ್ಷಿ ಆನ್‌ಲೈನ್ ಟ್ರೇಡಿಂಗ್‌ಗೆ ಕ್ರಮ ಕೈಗೊಳ್ಳಲಾಗಿದೆ. ತೋಟಗಾರಿಕೆ ಮತ್ತು ಕೃಷಿ ಬೆಳೆಗಳ ಮಾರಾಟ ಮತ್ತು ಸಾಗಾಣಿಕೆಗೆ ಅವಶ್ಯಕ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ತೊಂದರೆಯಾಗದಂತೆ ಈ ಹಿಂದೆ ಬರಗಾಲ ತಾಲೂಕುಗಳಿಗೆ ನೀಡಲಾಗುತ್ತಿದ್ದ ಅನುದಾನವನ್ನು ಮುಂಬರುವ ದಿನಗಳಲ್ಲಿಯೂ ಮುಂದುವರೆಸುವಂತೆ ಮನವಿ ಮಾಡಿದರು.

    ಜಿಲ್ಲೆಗೆ ಒಣದ್ರಾಕ್ಷಿಗೆ ಅವಶ್ಯಕತೆಯಿರುವ ಡಿಪ್ಪಿಂಗ್ ಆಯಿಲ್ ಕುರಿತು ಸಮಗ್ರ ವರದಿ ಸಲ್ಲಿಸಬೇಕು. ಜಿಲ್ಲೆಯ ಗಡಿಭಾಗಗಳಲ್ಲಿ ತೀವ್ರ ನಿಗಾ ವಹಿಸಬೇಕು. ಎಪಿಎಂಸಿ ಚಟುವಟಿಕೆಗಳು ಸಾಮಾಜಿಕ ಅಂತರದೊಂದಿಗೆ ಆಗಬೇಕು.
    ಜೆ. ರವಿಶಂಕರ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ


    ಪಿಪಿಇ ಕಿಟ್-ಟ್ರಿಪಲ್ ಲೇಯರ್ ಮಾಸ್ಕ್ ಶೀಘ್ರ ಪೂರೈಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts