ವಿಜಯಪುರ: ಖಾಸಗಿ ಆಸ್ಪತ್ರೆಗಳಲ್ಲಿ ಸಂಭವಿಸುವ ಎಲ್ಲಾ ಸಾವುಗಳ ಮಾಹಿತಿಯನ್ನು ಆಯಾ ದಿನವೇ ವರದಿ ಮಾಡಬೇಕು ಎಂದು ಜಿಲ್ಲಾಧಿಕಾರಿ ಪಿ. ಸುನೀಲ್ಕುಮಾರ್ ಸೂಚನೆ ನೀಡಿದರು.
ಮಂಗಳವಾರ ಸಂಜೆ ನಗರದ ನೇಮಿಗೌಡ ಆಸ್ಪತ್ರೆಗೆ ಜಿಲ್ಲಾಧಿಕಾರಿ ನೇತೃತ್ವದ ವಿಶೇಷ ತಜ್ಞರ ಸಮಿತಿ ಭೇಟಿ ನೀಡಿ ಪರಿಶೀಲನೆ ಹಾಗೂ ಡೆತ್ ಆಡಿಟ್ ಬಗ್ಗೆ ಪರಿಶೀಲನೆ ಸಭೆ ನಡೆಸಿ, ಆಸ್ಪತ್ರೆಗೆ ದಾಖಲಾದ ತೀವ್ರ ತರವಾದ ರೋಗ ಲಕ್ಷಣ ಹೊಂದಿರುವ ರೋಗಿಗಳಿಗೆ ತಕ್ಷಣ ಚಿಕಿತ್ಸೆ ಆರಂಭಿಸುವ ಮೂಲಕ ಸಾವಿನ ಪ್ರಮಾಣ ಕಡಿಮೆ ಮಾಡಲು ತಿಳಿಸಿದರು.
ಆಕ್ಸಿಜನ್ ಏಜೆನ್ಸಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದು ಆಕ್ಸಿಜನ್ ದಾಸ್ತಾನು ಇಟ್ಟುಕೊಳ್ಳುವ ಮೂಲಕ ಪ್ರಾಣವಾಯುವಿಗೆ ಕೊರತೆಯಾಗಿ ರೋಗಿಗಳಿಗೆ ತೊಂದರೆ ಆಗದಂತೆ ನೋಡಿಕೊಳ್ಳಲಾಗುತ್ತಿದೆ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಮಹೇಂದ್ರ ಕಾಪ್ಸೆ ಮಾಹಿತಿ ನೀಡಿ, ಜಿಲ್ಲೆಯಲ್ಲಿ ಸೋಮವಾರದ ತನಕ ಒಟ್ಟು 25 ಬ್ಲಾೃಕ್ ಫಂಗಸ್ ರೋಗಿಗಳು ಪತ್ತೆಯಾಗಿದ್ದು, ಮಂಗಳವಾರ ಮತ್ತೆ ಮೂರು ಹೊಸ ಪ್ರಕರಣಗಳು ಕಂಡು ಬಂದಿವೆ. ರೋಗ ನಿರೋಧಕ ಶಕ್ತಿ ಕಡಿಮೆಯಾದವರಲ್ಲಿ ಬ್ಲಾೃಕ್ ಫಂಗಸ್ ರೋಗ ಪತ್ತೆಯಾಗುತ್ತಿದೆ. ಹೆಚ್ಚಿನ ರೋಗಿಗಳು ಬಿಎಲ್ಡಿಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರಣ ಆಸ್ಪತ್ರೆಯಲ್ಲಿ ಎಲ್ಲ ತರಹದ ರೋಗಿಗಳನ್ನು ಪರೀಕ್ಷಿಸಲು ಬೇಕಾದ ನುರಿತ ತಜ್ಞರ ತಂಡ ಲಭ್ಯವಿರುವುದರಿಂದ ಚಿಕಿತ್ಸೆಗೆ ಸಹಕಾರಿಯಾಗಿದೆ ಎಂದರು.
ಪ್ರತಿಯೊಂದು ಪ್ರಕರಣಗಳ ಹಾಗೂ ರೆಮ್ಡೆಸಿವರ್ ಇಂಜೆಕ್ಷನ್ ಲಭ್ಯತೆಯ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಶರಣಪ್ಪ ಕಟ್ಟಿ, ಬಿಎಲ್ಡಿಇ ವೈದ್ಯಕೀಯ ಮಹಾವಿದ್ಯಾಲಯದ ಪಲ್ಮೋನರಿ ಮೆಡಿಸಿನ್ ವಿಭಾಗ ಮುಖ್ಯಸ್ಥ ಡಾ. ಸಂತೋಷ ನೇಮಿಗೌಡ, ಆಲ್ಅಮಿನ್ ವೈದ್ಯಕೀಯ ಮಹಾವಿದ್ಯಾಲಯದ ಅನಾಸ್ಥೇಶಿಯ ವಿಭಾಗದ ಮುಖ್ಯಸ್ಥ ಡಾ. ರಾಜೇಂದ್ರಕುಮಾರ್, ಜಿಲ್ಲಾಸ್ಪತ್ರೆಯ ಸ್ಥಳೀಯ ವೈದ್ಯಾಧಿಕಾರಿ ಡಾ. ಎಸ್.ಎಲ್. ಲಕ್ಕಣ್ಣವರ್, ವಿಜಯಪುರ ಐಎಂಎ ಅಧ್ಯಕ್ಷ ಡಾ. ಸಂತೋಷ ನಂದಿ, ವಿಜಯಪುರ ಸ್ವಯಂಸೇವಾ ಸಂಸ್ಥೆ ಮುಖ್ಯಸ್ಥ ಪೀಡರ್ ಅಲೆಗ್ಸಾಂಡರ್ ಉಪಸ್ಥಿತರಿದ್ದರು.