More

    ಆರೋಗ್ಯ ಸೇವೆ ಕಲ್ಪಿಸದಿದ್ದರೆ ನೋಂದಣಿ ರದ್ದು

    ವಿಜಯಪುರ: ಸಾರ್ವಜನಿಕರಿಗೆ ಅನಾನುಕೂಲವಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ಆಸ್ಪತ್ರೆಗಳನ್ನು ತೆರೆದಿಡುವಂತೆ ಸೂಚಿಸಿರುವ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ಇದಕ್ಕೆ ತಪ್ಪಿದಲ್ಲಿ ಆಯಾ ಆಸ್ಪತ್ರೆಗಳ ನೋಂದಣಿ ರದ್ದುಗೊಳಿಸುವುದಾಗಿ ಎಚ್ಚರಿಸಿದ್ದಾರೆ.
    ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಖಾಸಗಿ ಆಸ್ಪತ್ರೆಗಳ ವೈದ್ಯರ ಸಭೆ ನಡೆಸಿದ ಅವರು, ಜಿಲ್ಲಾದ್ಯಂತ ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ಆಸ್ಪತ್ರೆಗಳನ್ನು ಹೊರತು ಪಡಿಸಿ ಇನ್ನುಳಿದ ಎಲ್ಲ ಆಸ್ಪತ್ರೆಗಳು ಸೇವೆ ಆರಂಭಿಸಬೇಕು. ಸೂಚನೆ ನೀಡಿದರೂ ಕೆಲವು ಆಸ್ಪತ್ರೆಗಳು ತೆರೆಯದೇ ಇರುವುದು ಕಂಡು ಬಂದಿದೆ. ಅಂಥ ಆಸ್ಪತ್ರೆಗಳ ವೈದ್ಯರು ತಕ್ಷಣ ಸೇವೆಗೆ ಅಣಿಯಾಗಬೇಕು. ಇಲ್ಲವಾದಲ್ಲಿ ಕ್ರಮ ಖಂಡಿತ ಎಂದರು.

    ಜಿಲ್ಲಾದ್ಯಂತ 229 ಆರ್ಯುವೇದಿಕ್ ಕ್ಲೀನಿಕ್, ನರ್ಸಿಂಗ್, 5 ಯುನಾನಿ, 29 ಹೋಮಿಯೋಪಥಿಕ್, 230 ಆಲೋಪಥಿಕ್ ಮತ್ತು 38 ಡೈಗ್ನೋಸ್ಟಿಕ್ ಆಸ್ಪತ್ರೆಗಳು ಯಾವುದೇ ಪರಿಸ್ಥಿತಿಯಲ್ಲಿ ಶ್ವ್ವಾಸಕೋಶ ತೊಂದರೆ(ಸಾರಿ) ಮತ್ತು ನೆಗಡಿ, ಕೆಮ್ಮು, ಜ್ವರ(ಐಎಲ್‌ಐ) ರೋಗಿಗಳನ್ನು ಉಪಚರಿಸುವಂತಿಲ್ಲ, ಇಂತಹ ರೋಗಿಗಳು ಕಂಡುಬಂದಲ್ಲಿ ತಕ್ಷಣ ತಜ್ಞ ವೈದ್ಯರ ಬಳಿಗೆ ಕಳುಹಿಸುವುದರ ಜತೆಗೆ ರೋಗಿ, ಸಂಬಂಧಿಸಿದ ಆಸ್ಪತ್ರೆಗೆ ತಲುಪಿದ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು. ಈ ಕುರಿತು ಆಯಾ ತಾಲೂಕು ಆರೋಗ್ಯಾಧಿಕಾರಿಗಳು ಮತ್ತು ಐಎಂಎ ಅಧ್ಯಕ್ಷರಿಗೂ ಮಾಹಿತಿ ಒದಗಿಸಬೇಕು. ರೋಗಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇಟ್ಟುಕೊಂಡಿರಬೇಕು ಎಂದು ತಿಳಿಸಿದರು.

    ಜಿಲ್ಲೆಯಲ್ಲಿ ಈಗಾಗಲೇ ಘೋಷಿಸಿರುವ ಕಂಟೇನ್ಮೆಂಟ್ ವಲಯದಲ್ಲಿ ಯಾವುದೇ ಆಸ್ಪತ್ರೆಗಳು ಐಪಿಡಿ, ಡೆಲೆವರಿ, ಸರ್ಜರಿಗಳನ್ನು ಕೈಗೊಳ್ಳುವಂತಿಲ್ಲ. ಕೇವಲ ಓಪಿಡಿಗಳನ್ನು ಮಾತ್ರ ತೆರೆದು ಚಿಕಿತ್ಸೆ ನೀಡಬಹುದಾಗಿದ್ದು, ಆರೋಗ್ಯಕ್ಕೆ ಸಂಬಂಧಿಸಿದ ತುರ್ತುಚಿಕಿತ್ಸಾ ಪ್ರಕರಣಗಳು ಬಂದಲ್ಲಿ ಅಂತಹ ರೋಗಿಗಳನ್ನು ಇತರೇ ತಜ್ಞ ವೈದ್ಯರ ಬಳಿ ಕಳುಹಿಸಲು ಪೊಲೀಸ್ ಇಲಾಖೆ (ಗೋಳಗುಮ್ಮಟ ಸಿಪಿಐ ಬಿ.ಕೆ. ಮುಕರ್ತಿಹಾಳ ಮೊ. 9480804232)ಯ ನೆರವನ್ನು ಪಡೆಯಬಹುದಾಗಿದೆ ಎಂದರು.
    ಅದರಂತೆ ಈ ಆಸ್ಪತ್ರೆಗಳಲ್ಲಿ ಶೇ. 25 ರಷ್ಟು ಸಿಬ್ಬಂದಿಯನ್ನು ಇಟ್ಟುಕೊಂಡು ಅವರನ್ನು ಕಂಟೆನ್ಮೇಂಟ್ ವಲಯದಿಂದ ಸಂಚರಿಸಲು ಅವಕಾಶ ನೀಡದೆ, ಸೂಕ್ತ ಸುರಕ್ಷತಾ ಪರಿಕರಗಳೊಂದಿಗೆ ಆರೋಗ್ಯ ಸೇವೆ ಕಲ್ಪಿಸುವಂತೆ ತಿಳಿಸಿರುವ ಜಿಲ್ಲಾಧಿಕಾರಿಗಳು ಬರ್‌ರೆನ್ ಆಸ್ಪತ್ರೆಗಳು ಜಿಲ್ಲಾ ಟಾಸ್ಕ್‌ಫೋರ್ಸ್ ಸಮಿತಿಯ ಮಾರ್ಗಸೂಚಿಯನ್ವಯ ಕಾರ್ಯ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.

    ಕರೊನಾದಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಸಾರ್ವಜನಿಕರಿಗೆ ಆರೋಗ್ಯ ಸೇವೆ ಕಲ್ಪಿಸಿ ಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ತಿಳಿಸಿರುವ ಅವರು, ಬಯೋಮೆಡಿಕಲ್ ವೇಸ್ಟ್ ನಿರ್ವಹಣೆಗೆ ಸಮನ್ವಯ ಸಾಧಿಸಲಾಗುವುದು. ಕರೊನಾ ಹೊರತು ಪಡಿಸಿ ಇತರೆ ಯಾವುದಾದರು ಸಾವು ಆಗಿದಲ್ಲಿ ದೃಢೀಕರಣ ಪ್ರಮಾಣ ಪತ್ರ ಇಟ್ಟುಕೊಳ್ಳುವುದರ ಜೊತೆಗೆ ಸಂಬಂಧಪಟ್ಟವರಿಗೂ ನೀಡಬೇಕು. ಕರೊನಾ ಪಾಸಿಟಿವ್ ರೋಗಿಗಳನ್ನು ಅಲ್ ಅಮಿನ್ ಮತ್ತು ಬಿಎಲ್‌ಡಿಇ ಆಸ್ಪತ್ರೆಗಳ ವೈದ್ಯರು ನಿರ್ವಹಿಸಿದ ರೀತಿಯಿಂದ ಇದರ ವಿಸ್ತರಣೆ ತಡೆಗೆ ಸಹಕಾರಿಯಾಗಿದೆ ಎಂದು ಅವರು ಅಭಿಪ್ರಾಯಿಸಿದರು.
    ಜಿಲ್ಲಾ ಪೊಲೀಸ್ ಅಧೀಕ್ಷಕ ಅನುಪಮ್ ಅಗರವಾಲ್, ಜಿಪಂ ಸಿಇಒ ಗೋವಿಂದ ರೆಡ್ಡಿ ಹಾಗೂ ಜಿಲ್ಲೆಯ ವೈದ್ಯರು ಉಪಸ್ಥಿತರಿದ್ದರು.

    ಆರೋಗ್ಯ ಸೇವೆ ಕಲ್ಪಿಸದಿದ್ದರೆ ನೋಂದಣಿ ರದ್ದು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts