ವಿಜಯಪುರ: ಕರೊನಾ ನಿಯಂತ್ರಣ ಕಾರ್ಯದಲ್ಲಿ ತೊಡಗಿಸಿಕೊಂಡ ಆಶಾ, ಅಂಗನವಾಡಿ ಹಾಗೂ ಆರೋಗ್ಯ ಕಾರ್ಯಕರ್ತೆಯರು ಸೇರಿ ಎಲ್ಲ ಸೇನಾನಿಗಳಿಗೆ ಶಾಸಕ ಡಾ. ದೇವಾನಂದ ಚವಾಣ್ ಆಹಾರ ಮತ್ತು ಆರೋಗ್ಯ ಕಿಟ್ ವಿತರಿಸಿದರು.
ಶುಕ್ರವಾರ ನಾಗಠಾಣ ಕ್ಷೇತ್ರದ ಐನಾಪುರ, ಹಡಗಲಿ, ಅಲಿಯಾಬಾದ, ಮಕಣಾಪುರ ಮತ್ತಿತರ ಭಾಗಗಳಿಗೆ ಭೇಟಿ ನೀಡಿ ಕರೊನಾ ಸೇನಾನಿಗಳನ್ನು ಗೌರವಿಸಿದ ಅವರು, ಮಹಾಮಾರಿ ತಡೆಯುವಲ್ಲಿ ತಮ್ಮ ಪಾತ್ರ ಅಮೋಘ ಎಂದು ಬಣ್ಣಿಸಿದರು.
ಜಿಲ್ಲೆಯಲ್ಲಿ ಕರೊನಾ ಸಾಕಷ್ಟು ಸಾವು ನೋವು ಉಂಟು ಮಾಡಿತು. ಗ್ರಾಮೀಣ ಭಾಗಗಳಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಯಿತು. ಪರಿಣಾಮ ಜನ ತೀವ್ರ ಸಂಕಷ್ಟಕ್ಕೆ ಸಿಲುಕಿದರು. ಇಂಥ ಸಂದರ್ಭ ಅವರ ನೆರವಿಗೆ ಧಾವಿಸುವ ಮೂಲಕ ಕರೊನಾ ಸೇನಾನಿಗಳು ಮಾನವೀಯ ಕಳಕಳಿ ಮೆರೆದಿದ್ದಾರೆ. ಅಂಥವರ ಕಾಳಜಿ ನಮಗಿಂದು ಮುಖ್ಯವಾಗಿದೆ ಎಂದರು.
ತಾಪಂ ಇಒ ಬಿ.ಆರ್. ಬಿರಾದಾರ ಮಾತನಾಡಿದರು. ಪಿಎಸ್ಐ ರೇಣುಕಾ ದಿನ್ನಿ, ಐನಾಪುರ ಗ್ರಾಪಂ ಅಧ್ಯಕ್ಷೆ ಯಲ್ಲಕ್ಕ ಒಂಬಾಸೆ, ಪಿಡಿಒ ಜಯಶ್ರೀ ಪವಾರ, ಎಸ್.ಬಿ. ಹೈದರಖಾನ, ಮಹಾದೇವ ರಾಠೋಡ, ಖಂಡೋಬಾ ಒಂಬಾಸೆ, ಸುಭಾಷ ಹಳ್ಳದ, ಚಂದು ಜಾಧವ, ಕರಿಯಪ್ಪ ಬಿಸನಾಳ, ಆರೋಗ್ಯ ಅಧಿಕಾರಿ ಜಯಶ್ರೀ ದೇವಗಿರಿಕರ, ಹಡಗಲಿ ಗ್ರಾಪಂ ಅಧ್ಯಕ್ಷೆ ಸುಶೀಲಾಬಾಯಿ ಜಾಧವ, ರಾಜೇಶ ಗಾಯಕವಾಡ, ಅಲಿಯಾಬಾದ ಗ್ರಾಪಂ ಅಧ್ಯಕ್ಷ ರಾವಣ್ಣ ಹಕ್ಕೆ, ಜಾಫರ ಕಲಾಲ, ಮಕಣಾಪುರ ಗ್ರಾಪಂ ಅಧ್ಯಕ್ಷ ರಮೇಶ ಚವಾಣ್, ಪ್ರಕಾಶ ಚವಾಣ್ ಮತ್ತಿತರರಿದ್ದರು.