ವಿಜಯಪುರ: ಕ್ಯಾನ್ಸರ್ ಮಾರಕ ರೋಗ. ಆದರೆ, ಹೆದರುವ ಅವಶ್ಯಕತೆ ಇಲ್ಲ. ಸೂಕ್ತ ಸಮಯಕ್ಕೆ ಚಿಕಿತ್ಸೆ ಪಡೆದರೆ ಈ ರೋಗವನ್ನು ತಡೆಯಲು ಸಾಧ್ಯ ಹಾಗೂ ಅದರಿಂದ ದೂರವಿರಲು ಸೂಕ್ತ ಜೀವನಶೈಲಿ ಅತ್ಯಗತ್ಯ ಎಂದು ಡಾ.ಶೈಲೇಶ ಕನ್ನೂರ ಹೇಳಿದರು.
ನಗರದ ಬಿಎಲ್ಡಿಇ ಸಂಸ್ಥೆಯ ಎ.ಎಸ್. ಪಾಟೀಲ ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ದಲ್ಲಿ ಬಿ.ಎಂ. ಪಾಟೀಲ ವೈದ್ಯಕೀಯ ಸಂಶೋಧನಾ ಕೇಂದ್ರ ಹಾಗೂ ಆಸ್ಪತ್ರೆ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕ್ಯಾನ್ಸರ್ ಕೇವಲ ಒಂದೇ ಬಗೆಯದ್ದಲ್ಲ. ಅದರಲ್ಲಿ ನೂರಾರು ಬಗೆಗಳಿವೆ. ಪ್ರಾಥಮಿಕ ಹಂತದಲ್ಲೇ ಅದನ್ನು ಕಂಡು ಹಿಡಿದರೆ, ತಡೆಹಟ್ಟಲು ಹಾಗೂ ಸೂಕ್ತ ಚಿಕಿತ್ಸೆ ಮೂಲಕ ವಾಸಿಮಾಡುವ ಸಾಧ್ಯ ಎಂದು ಹೇಳಿದರು.
ಪ್ರಾಚಾರ್ಯ ಡಾ.ಎಚ್.ಎಂ. ಮುಜಾವರ್ ಅಧ್ಯಕ್ಷತೆ ವಹಿಸಿ, ಮಾರಕ ರೋಗಗಳ ಕುರಿತು ಯುವಕರು ತಿಳಿದುಕೊಳ್ಳಲೇಬೇಕು. ಉತ್ತಮ ಆಹಾರ ಸೇವನೆ ಪದ್ಧತಿ ಅನುಸರಿಸುವ ಮೂಲಕ ರೋಗಗಳನ್ನು ತಡೆಯಲು ಸಾಧ್ಯ ಎಂದು ಹೇಳಿದರು.
ಬಿ.ಎಂ. ಪಾಟೀಲ ವೈದ್ಯಕೀಯ ಸಂಶೋಧನಾ ಕೇಂದ್ರ ಮತ್ತು ಆಸ್ಪತ್ರೆ ಮುಖ್ಯಸ್ಥ ಡಾ. ಎಂ.ಬಿ. ಪಾಟೀಲ, ಉಪಪ್ರಾಚಾರ್ಯ ಪ್ರೊ. ವಿ.ಎಸ್. ಬಿಗಲಿ, ಎನ್ ಎಸ್ ಎಸ್ ಕಾರ್ಯಕ್ರಮ ಅಧಿಕಾರಿ ಪ್ರೊ.ಡಿ.ಬಿ. ಕೋಟಿ, ಪ್ರೊ.ಎಸ್. ಬಿ. ದೇಸಾಯಿ, ಡಾ. ಭಾರತಿ ಹಿರೇಮಠ, ಪ್ರೊ. ಎಂ.ಎಸ್. ಜೇವೂರ, ಪ್ರೊ.ವಿ.ಎಸ್. ಚಿಕ್ಕರೆಡ್ಡಿ, ಪ್ರೊ.ಸಿ.ಪಿ. ಧಡೇಕರ ಮತ್ತಿತರರು ಉಪಸ್ಥಿತರಿದ್ದರು. ಪ್ರಿಯಾಂಕಾ ಯಳೆಗಾಂವ್ ನಿರೂಪಿಸಿದರು. ಪ್ರೊ.ಸೋಮಶಂಕರ ವಂದಿಸಿದರು.