ವಿಜಯಪುರ: ಬೈಕ್ಗಳ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿ ಗಂಭೀರ ಗಾಯಗೊಂಡಿದ್ದ ಸವಾರರಿಬ್ಬರನ್ನು ಚಿಕಿತ್ಸೆಗೆ ಸಾಗಿಸುವ ವೇಳೆ ಮಾರ್ಗ ಮಧ್ಯೆ ಅಸುನೀಗಿದ್ದಾರೆ.
ನಗರ ಹೊರವಲಯದ ಹುಂಡೇಕಾರ ಪೆಟ್ರೋಲ್ ಪಂಪ್ ಬಳಿ ಮಂಗಳವಾರ ತಡರಾತ್ರಿ ಈ ಘಟನೆ ನಡೆದಿದೆ. ಸ್ಥಳೀಯ ಲಕ್ಷ್ಮಣ ನಗರದ ನಿವಾಸಿ ಸಿದ್ರಾಮಪ್ಪ ಪ್ರಕಾಶ ಭೈರವಾಡಗಿ (28) ಹಾಗೂ ಕಾಳಿಕಾನಗರದ ವಿಜಯಕುಮಾರ ಶಿವಶಂಕ್ರೆಪ್ಪ ದುಲಂಗಿ (45) ಮೃತ ದುರ್ದೈವಿಗಳು. ಎರಡೂ ಬೈಕ್ಗಳ ಹಿಂದೆ ಕುಳಿತಿದ್ದ ಇಬ್ಬರು ಗಾಯಗೊಂಡಿದ್ದಾರೆ.
ನವೀನ ಅಶೋಕ ಗೋಪಶೆಟ್ಟಿ ಎಂಬಾತನನ್ನು ಬೈಕ್ ಹಿಂದೆ ಕೂರಿಸಿಕೊಂಡು ಸಿದ್ರಾಮಪ್ಪ ಪ್ರಕಾಶ ಭೈರವಾಡಗಿ ಹುಂಡೆಕಾರ ಪೆಟ್ರೋಲ್ ಪಂಪ್ನಿಂದ ಗಣೇಶನಗರದ ಕಡೆ ಹೊರಟಿದ್ದನು. ಇದೇ ವೇಳೆ ಎದುರಿನಿಂದ ವಿಜಯಕುಮಾರ ದುಲಂಗಿ ಹಾಗೂ ರವಿಕುಮಾರ ಅಚ್ಚೆಗಾವಿ ಬೈಕ್ ಮೇಲೆ ವೇಗವಾಗಿ ಬರುತ್ತಿದ್ದರು. ಈ ವೇಳೆ ಎರಡೂ ಬೈಕ್ಗಳ ಮಧ್ಯೆ ಡಿಕ್ಕಿ ಸಂಭವಿಸಿದೆ. ಬೈಕ್ ಸವಾರರು ಗಂಭೀರ ಗಾಯಗೊಂಡು ಕೆಲ ಕಾಲ ರಸ್ತೆ ಮೇಲೆ ಬಿದ್ದು ನರಳಾಡಿದ್ದಾರೆ. ಬಳಿಕ ಆಂಬುಲೆನ್ಸ್ ಮೂಲಕ ಅವರನ್ನು ಸಾಗಿಸುತ್ತಿದ್ದ ವೇಳೆ ಮಾರ್ಗಮಧ್ಯೆ ಅಸುನೀಗಿದ್ದಾರೆ. ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.