ವಿಜಯಪುರ: ಲಾಕ್ಡೌನ್ ಆದಾಗಿನಿಂದ ಜಿಲ್ಲಾಡಳಿತ ಪಾಲಿಗೆ ದಿನಸಿ ಮತ್ತು ತರಕಾರಿ ಮಾರಾಟ ಸವಾಲಾಗಿ ಪರಿಣಮಿಸಿದ್ದು, ಎಪಿಎಂಸಿ ಆವರಣದಲ್ಲಿ ಶನಿವಾರ ಖುದ್ದು ಮುಂದೆ ನಿಂತು ಅಧಿಕಾರಿಗಳೇ ಸವಾಲ್ ಕೂಗಿಸಿ ಗಮನ ಸೆಳೆದರು.
ಆರಂಭದಲ್ಲಿ ಮಾರುಕಟ್ಟೆ ಪ್ರದೇಶದಲ್ಲಿ ತರಕಾರಿ ಮತ್ತು ಹಣ್ಣು ಮಾರಾಟಕ್ಕೆ ಅವಕಾಶ ಕಲ್ಪಿಸಿದ್ದ ಜಿಲ್ಲಾಡಳಿತ ಆ ಬಳಿಕ ನೂಕು ನುಗ್ಗಲು ಉಂಟಾಗುತ್ತಿರುವುದನ್ನು ಗಮನಿಸಿ ವಲಯವಾರು ತರಕಾರಿ ಮಾರಾಟಕ್ಕೆ ಅವಕಾಶ ಕಲ್ಪಿಸಿತು.
ಆ ಬಳಿಕ ಹಾಪ್ಕಾಮ್ಸ್ ಸಂಚಾರಿ ವಾಹನದ ಮೂಲಕ ಬಡಾವಣೆಗಳಿಗೆ ತರಕಾರಿ ಸಾಗಿಸಲಾಯಿತು. ಎಪಿಎಂಸಿ ಆವರಣದಲ್ಲಿ ವಿಶೇಷ ಸೌಲಭ್ಯ ಕಲ್ಪಿಸುವ ಮೂಲಕ ತರಕಾರಿ ಅಭಾವ ನೀಗಿಸುವ ಕ್ರಮ ಕೈಗೊಳ್ಳಲಾಯಿತು.
ಬೆಳಗ್ಗೆ ಗ್ರಾಮೀಣ ಭಾಗಗಳಿಂದ ಬರುವ ರೈತರಿಗೆ ಎಪಿಎಂಸಿ ಆವರಣದಲ್ಲಿ ತರಕಾರಿ ಮಾರಾಟಕ್ಕೆ ಅವಕಾಶ ಕಲ್ಪಿಸಲಾಯಿತು. ಕೆಲವರು ದಲ್ಲಾಳಿಗಳಿಗೆ ನೀಡಿದರೆ ಇನ್ನುಳಿದವರು ಸ್ಥಳದಲ್ಲೇ ಮಾರಾಟ ಮಾಡಿದರು. ತಳ್ಳುಗಾಡಿಯವರು ಸವಾಲು ಕೂಗಿ ಕಾಯಿಪಲ್ಲೆ ಭರ್ತಿ ಮಾಡಿಕೊಂಡು ಬಡಾವಣೆಗಳತ್ತ ತೆರಳಿದರು.
ಜನಸಂದಣಿ ತಪ್ಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಇಂಥದ್ದೊಂದು ವಿನೂತನ ಕ್ರಮ ಕೈಗೊಂಡಿದ್ದು ಭಾರಿ ಮೆಚ್ಚುಗೆಗೆ ಪಾತ್ರವಾಯಿತು. ರೈತರಿಗೆ ಮಾಸ್ಕ್ ನೀಡಲಾಯಿತು. ಸಾಮಾಜಿಕ ಅಂತರ ಕಾಯ್ದುಕೊಂಡು ರೈತರು ತರಕಾರಿ ಮಾರಾಟ ಮಾಡಿದ್ದು ವಿಶೇಷವಾಗಿತ್ತು. ಗ್ರಾಹಕರಿಗಾಗಿ ಅಲ್ಲಲ್ಲಿ ಬಾಕ್ಸ್ ಮಾಡಿ ನಿಗದಿತ ಅಂತರ ಕಾಯ್ದುಕೊಳ್ಳಲು ಸೂಚಿಸಲಾಯಿತು.
ಪ್ರತಿ ಬಡಾವಣೆಗಳಿಗೆ ತರಕಾರಿ ತಳ್ಳುಗಾಡಿ ಕಳುಹಿಸಿಕೊಡುವ ವ್ಯವಸ್ಥೆ ಮಾಡುತ್ತಿರುವುದಾಗಿ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ತಿಳಿಸಿದರು. ಎಸ್ಪಿ ಅನುಪಮ ಅಗರವಾಲ್, ಎಎಸ್ಪಿ ರಾಮ್ ಅರಸಿದ್ದಿ, ಜಿಪಂ ಸಿಇಒ ಗೋವಿಂದ ರೆಡ್ಡಿ ಮತ್ತಿತರರಿದ್ದರು.