More

    ಕ್ರಾಂತಿಕಾರಿ ಹೆಜ್ಜೆಗಳು ಮಾದರಿ ಆಗಲಿ

    ವಿಜಯಪುರ: ಬಾಬು ಜಗಜೀವನರಾಮ್ ಅವರು ಪ್ರತಿ ಹಂತದಲ್ಲಿಯೂ, ತಮ್ಮ ಪ್ರತಿಯೊಂದು ಹೆಜ್ಜೆಯಲ್ಲಿಯೂ ಹೊಸ ಹೊಸ ವಿಚಾರಧಾರೆಗಳನ್ನು ಕಂಡುಕೊಂಡವರು. ಅವರ ಕ್ರಾಂತಿಕಾರಿ ಹೆಜ್ಜೆಗಳು ಇಂದಿನ ಯುವ ಪೀಳಿಗೆಗೆ ಮಾದರಿಯಾಗಿವೆ ಎಂದು ಧಾರವಾಡದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕೃಷಿ ವಿಜ್ಞಾನಿ ಪ್ರೊ.ಶರದ್ ದೇಶಪಾಂಡೆ ಹೇಳಿದರು.

    ನಗರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರ ಹಾಗೂ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಘಟಕದ ಸಹಯೋಗದಲ್ಲಿ ಡಾ.ಬಾಬು ಜಗಜೀವನರಾಮ್ ಅವರ ಜನ್ಮದಿನಾಚರಣೆ ಅಂಗವಾಗಿ ಸೋಮವಾರ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಬಾಬು ಜಗಜೀವನರಾಮ್ ಅವರು ಕೃಷಿ ಮಂತ್ರಿಯಾಗಿದ್ದಾಗ ತೆಗೆದುಕೊಂಡ ನಿರ್ಣಯಗಳು, ಜಾರಿಗೆ ತಂದ ಯೋಜನೆಗಳೆಲ್ಲವೂ ರೈತರಿಗೆ ಅನುಕೂಲಕರವಾಗಿದ್ದವು. ಕೃಷಿಯ ಜತೆಗೆ ನೀರಾವರಿ ಕ್ಷೇತ್ರದಲ್ಲಿಯೂ ಅವರು ಸೇವೆ ಸಲ್ಲಿಸಿದ್ದಾರೆ. ರೈತರಿಗೆ ಬೆನ್ನೆಲುಬಾಗಿ ನಿಂತ ಅವರು ರಾಷ್ಟ್ರದ ಅಭಿವೃದ್ಧಿಗೆ ಸಲ್ಲಿಸಿದ ಕೊಡುಗೆ ಅಪಾರ ಎಂದರು.

    ರಾಜ್ಯ ಜಾನಪದ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಅರುಣ್ ಜೋಳದ ಕೂಡ್ಲಿಗಿ ಮಾತನಾಡಿ, ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಶೋಷಣೆಗೆ ಒಳಗಾದ ದಮನಿತ ವರ್ಗದ ಪ್ರತಿನಿಧಿಯಾಗಿ ಅವರ ಸಮಾನತೆಗಾಗಿ ಹೋರಾಡಿದ ಬಾಬೂಜಿ ಇಂದಿಗೂ ಎಲ್ಲರಿಗೂ ಮಾದರಿ. ಆರ್ಥಿಕ ಸಮಾನತೆಗೆ ಒತ್ತು ನೀಡಿದ ಅವರು, ರಾಜಕೀಯ ಹಕ್ಕುಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದ್ದರು ಎಂದರು.

    ಬಾಬೂಜಿ ಅವರು ದುಡಿಯುವ ವರ್ಗದ ಜನರ ಭದ್ರತೆ, ಸಾಮಾಜಿಕ ವಿಮೆ, ಕನಿಷ್ಠ ಕೂಲಿ ಕಾಯ್ದೆ, ಭವಿಷ್ಯ ನಿಧಿ, ವಿಮಾನಯಾನದ ರಾಷ್ಟ್ರೀಕರಣ, ಕೃಷಿ ಸ್ವಾವಲಂಬನೆ, ನೀರಾವರಿಗೆ ಪ್ರಾಶಸ್ತ್ಯ ಹೀಗೆ ವಿವಿಧ ಯೋಜನೆಗಳನ್ನು ಜಾರಿಗೆ ತಂದು ನಮ್ಮ ದೇಶದ ಆರ್ಥಿಕ ಸುಧಾರಣೆಗೆ, ಅಭಿವೃದ್ಧಿಗೆ ಸ್ವಾರ್ಥವಿಲ್ಲದೆ ಕೊಡುಗೆ ನೀಡಿದ್ದಾರೆ. ಅವರ ವಿಚಾರಗಳನ್ನು ನಾವೆಲ್ಲರೂ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

    ವಿವಿ ಕುಲಸಚಿವೆ ಪ್ರೊ.ಆರ್. ಸುನಂದಮ್ಮ ಅಧ್ಯಕ್ಷತೆ ವಹಿಸಿ ಮಾತನಾಡಿ, ತುಂಬಾ ಜಾಗರೂಕವಾಗಿ, ಜಾಣತನದ ಹೆಜ್ಜೆ ಇಟ್ಟ ಭಾರತದ ಆರ್ಥಿಕ ಅಭಿವೃದ್ಧಿಗೆ ಪ್ರಮುಖ ಕೊಡುಗೆ ನೀಡಿದ ಬಾಬೂಜಿ ಅವರು, ಸಮಾನತೆ, ಸ್ವಾತಂತ್ರೃ, ನ್ಯಾಯ ಇವುಗಳ ಬಗ್ಗೆ ಧ್ವನಿ ಎತ್ತಿದ್ದರು. ಅವರ ಆದರ್ಶಗಳ ಬಗ್ಗೆ ಇಂದಿನ ಯುವಪೀಳಿಗೆ ಅರಿತುಕೊಳ್ಳಬೇಕಾಗಿದೆ ಎಂದು ತಿಳಿಸಿದರು.

    ಡಾ.ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ವೆಂಕೋಬ ನಾರಾಯಣಪ್ಪ, ಪ್ರಾಧ್ಯಾಪಕ ಡಾ.ವಿಷ್ಣು ಎಂ. ಶಿಂಧೆ, ಕೇಂದ್ರದ ಸಹಾಯಕ ನಿರ್ದೇಶಕ ಡಾ. ಸುರೇಶ್.ಕೆ.ಪಿ., ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಘಟಕದ ನಿರ್ದೇಶಕಿ ಡಾ. ಅನಿತಾ ನಾಟೆಕರ್ ಇನ್ನಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts