ಬೆಂಗಳೂರು: ರಾಜಧಾನಿಯಲ್ಲಿ ನಡೆಯುತ್ತಿರುವ 14ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಇಂದು ‘ವಿಜಯಾನಂದ’ ಸಿನಿಮಾ ಪ್ರದರ್ಶನಗೊಂಡಿದೆ. ವಿಆರ್ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ.ವಿಜಯ ಸಂಕೇಶ್ವರ ಅವರ ಜೀವನಾಧಾರಿತ ಈ ಸಿನಿಮಾ ಚಿತ್ರೋತ್ಸವದ ಅಂಗವಾಗಿ ಒರಾಯನ್ ಮಾಲ್ನ ಪಿವಿಆರ್ ಚಿತ್ರಮಂದಿರದ ಆಡಿ 4ನಲ್ಲಿ ಪ್ರದರ್ಶನವಾಯಿತು.
ಅಂತಾರಾಷ್ಟ್ರೀಯ ಚಿತ್ರೋತ್ಸವದ ಕನ್ನಡ ಚಿತ್ರಗಳ ಸ್ಪರ್ಧೆ ವಿಭಾಗದಲ್ಲಿ ಪ್ರದರ್ಶನಗೊಂಡ ಈ ಚಿತ್ರವನ್ನು ನೂರಾರು ಪ್ರೇಕ್ಷಕರು ವೀಕ್ಷಿಸಿದ್ದು, ಅವರೆಲ್ಲರ ಮೆಚ್ಚುಗೆಗೆ ಈ ಸಿನಿಮಾ ಪಾತ್ರವಾಯಿತು. ವಿಆರ್ಎಲ್ ಫಿಲ್ಮ್ ಪ್ರೊಡಕ್ಷನ್ಸ್ ಮೂಲಕ ಈ ಚಿತ್ರವನ್ನು ನಿರ್ಮಾಣ ಮಾಡಿರುವ ಹಾಗೂ ವಿಆರ್ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರೂ ಆಗಿರುವ ಡಾ. ಆನಂದ ಸಂಕೇಶ್ವರ ಅವರು ಕೂಡ ಚಿತ್ರೋತ್ಸವಕ್ಕೆ ಆಗಮಿಸಿದ್ದರು.
ಇದನ್ನೂ ಓದಿ: ಡಾ.ವಿಜಯ ಸಂಕೇಶ್ವರ ಅವರಿಗೆ ‘ಶ್ರೀ ಸಿದ್ಧಶ್ರೀ ಪ್ರಶಸ್ತಿ’, ವಿಜಯಾನಂದ ಚಿತ್ರಕ್ಕೆ ‘ಅತ್ಯುತ್ತಮ ಬಯೋಪಿಕ್’ ಪ್ರದಾನ
ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ‘ವಿಜಯಾನಂದ’ ಸಿನಿಮಾ ಪ್ರದರ್ಶನವಾಗುತ್ತಿರುವುದು ಸಂತಸದ ಸಂಗತಿ. ನಮ್ಮ ತಂದೆ ಡಾ.ವಿಜಯ ಸಂಕೇಶ್ವರ ಅವರು ಒಂದು ಟ್ರಕ್ನಿಂದ ತಮ್ಮ ವೃತ್ತೀಜಿವನ ಪ್ರಾರಂಭಿಸಿದವರು. ಈ ಚಿತ್ರದಲ್ಲಿ ಅವರ ಜೀವನ ಚಿತ್ರಣ ಇದ್ದು, ಯುವಕರಿಗೆ ಈ ಸಿನಿಮಾದಲ್ಲಿ ಒಂದು ಸಂದೇಶವಿದೆ. ಎಷ್ಟೇ ಕಷ್ಟ ಬಂದರೂ ಮುಂದಿಟ್ಟ ಹೆಜ್ಜೆಯಿಂದ ಹಿಂದೆ ಸರಿಯಬೇಡ ಎಂಬ ಸಂದೇಶವಿರುವ ಈ ಚಿತ್ರ ಕನ್ನಡದಲ್ಲಿ ತಯಾರಾಗಿ, ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂಗೆ ಡಬ್ ಆಗಿ ಬಿಡುಗಡೆಯಾಗಿದೆ. ಈ ಚಿತ್ರ ನೋಡಿ ಯುವಕರು ಸ್ಫೂರ್ತಿಗೊಳ್ಳುತ್ತಾರೆ ಎಂಬ ನಂಬಿಕೆ ಇದೆ ಎಂದು ಡಾ.ಆನಂದ ಸಂಕೇಶ್ವರ ಅವರು ತಿಳಿಸಿದರು.
ಡಾ.ಆನಂದ ಸಂಕೇಶ್ವರ ಅವರೊಂದಿಗೆ ವಿಜಯಾನಂದ ಚಿತ್ರದ ನಿರ್ದೇಶಕಿ ರಿಷಿಕಾ ಶರ್ಮ, ನಾಯಕ ನಿಹಾಲ್ ಮುಂತಾದವರು ಇದ್ದರು. ಚಿತ್ರೋತ್ಸವದ ಕಲಾತ್ಮಕ ನಿರ್ದೇಶಕ ನರಹರಿ ರಾವ್ ಅವರು ಡಾ.ಆನಂದ ಸಂಕೇಶ್ವರ ಅವರಿಗೆ ಚಿತ್ರೋತ್ಸವದ ಸ್ಮರಣಿಕೆ ನೀಡಿ ಗೌರವಿಸಿದರು.