ಚೆನ್ನೈ: ನಾನು ಯಾವುದೇ ಧರ್ಮಕ್ಕೆ ಸೇರಿದವನಲ್ಲ ಎಂದು ಕಾಲಿವುಡ್ ಖ್ಯಾತ ನಟ ವಿಜಯ್ ಸೇತುಪತಿ ಈಗಾಗಲೇ ಅನೇಕ ಸಂದರ್ಶನಗಳಲ್ಲಿ ಹೇಳಿದ್ದಾರೆ. ಆದರೂ ಇತ್ತೀಚೆಗೆ ನಟ ಇಳಯದಳಪತಿ ವಿಜಯ್ ನಿವಾಸದ ಮೇಲೆ ನಡೆದ ಆದಾಯ ತೆರಿಗೆ ಇಲಾಖೆ ದಾಳಿಯನ್ನು ಆಧಾರವಾಗಿಟ್ಟುಕೊಂಡು ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿರುವ ಚರ್ಚೆಯಿಂದ ಸಿಟ್ಟಾಗಿರುವ ಸೇತುಪತಿ ಟ್ರೋಲಿಗರಿಗೆ ತಿರುಗೇಟು ನೀಡಿದ್ದಾರೆ.
ಐಟಿ ದಾಳಿಯಿಂದ ಅನೇಕ ಪಿತೂರಿಗಳು ಆಚೆ ಬಂದಿದೆ. ನಟ ವಿಜಯ್ ಸೇತುಪತಿ ಈಗಾಗಲೇ ಕ್ರಿಶ್ಚಿಯನ್ಗೆ ಮತಾಂತರವಾಗಿದ್ದಾರೆ ಎಂದೆಲ್ಲ ಜಾಲತಾಣದಲ್ಲಿ ಸಂದೇಶಗಳು ಹರಿದಾಡುತ್ತಿದೆ. ಇದರಿಂದ ಆಕ್ರೋಶಗೊಂಡಿರುವ ಸೇತುಪತಿ, ತಮ್ಮ ವಿರುದ್ಧದ ಪೋಸ್ಟ್ಗಳನ್ನು ಟ್ವಿಟರ್ನಲ್ಲಿ ಶೇರ್ ಮಾಡಿ, “ಹೋಗ್ರಯ್ಯ ಹೋಗಿ ನಿಮ್ಮ ಕೆಲಸ ಮಾಡಿ ಹೋಗಿ” ಎಂದು ತಮಿಳು ಭಾಷೆಯಲ್ಲಿ ಟ್ರೋಲಿಗರಿಗೆ ಖಡಕ್ ಪ್ರತಿಕ್ರಿಯೆ ನೀಡಿ, ಆರೋಪಗಳನ್ನು ಅಲ್ಲಗೆಳೆದಿದ್ದಾರೆ.
ಇನ್ನು ಹರಿದಾಡಿರುವ ಸಂದೇಶದಲ್ಲಿರುವಂತೆ ಜೆಪ್ಪೈರ್ ಮಗಳಾದ ರೆಜಿನಾ ತಮಿಳು ನಾಡಿನಲ್ಲಿ ಕ್ರಿಶ್ಚಿಯನ್ ಮತಾಂತರ ಚಳವಳಿ ಮಾಡಲು ಬಯಸಿದ್ದಾರೆ. ಇದಕ್ಕೆ ನಟರಾದ ವಿಜಯ್ ಸೇತುಪತಿ, ಆರ್ಯ ಮತ್ತು ಇತರೆ ನಟರು ಸಾಥ್ ನೀಡಿದ್ದಾರೆ. ಅಲ್ಲದೆ, ಇವರೆಲ್ಲರೂ ಈಗಾಗಲೇ ಕ್ರಿಶ್ಚಿಯನ್ಗೆ ಮತಾಂತರವಾಗಿದ್ದಾರೆ ಎಂಬುದನ್ನು ಸೂಚಿಸುತ್ತಿದೆ ಎಂದು ಬರೆಯಲಾಗಿದೆ.
ರೆಜಿನಾ ಅವರು ವಿಜಯ್ ಅಭಿನಯದ ಬಿಗಿಲ್ ಸಿನಿಮಾಗೆ ಬಂಡವಾಳ ಹೂಡಿದ್ದು, ಅದನ್ನು ಎಜಿಎಸ್ ಎಂಟರ್ಟೈನ್ಮೆಂಟ್ ಹೆಸರಲ್ಲಿ ಮಾಡಿದ್ದಾರೆ. ಚಿತ್ರದಿಂದ ಬಂದ ಕಪ್ಪು ಹಣದ ಆದಾಯವನ್ನು ನಿರ್ಮಾಪಕರಾದ ಏಜಿಎಸ್ ಮತ್ತು ಅಬು ಚೆಝೈನ್ ಅವರು ರೆಜಿನಾಗೆ ವರ್ಗಾಯಿಸಿದ್ದಾರೆ. ಈ ಪ್ರಕರಣದಲ್ಲಿ ಮತ್ತಷ್ಟು ನಿಗೂಢಗಳು ಹಾಗೂ ಸರ್ಪ್ರೈಸ್ಗಳು ಮುಂದಿನ ದಿನಗಳಲಿ ಹೊರಬರಲಿದೆ ಎಂದಿದ್ದಾರೆ.
ಸುಖಾಸುಮ್ಮನ್ನೇ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಚಾರಗಳು ಸದ್ಯ ಮಾಸ್ಟರ್ ಚಿತ್ರದ ಶೂಟಿಂಗ್ನಲ್ಲಿ ಬಿಜಿಯಾಗಿರುವ ವಿಜಯ್ ಸೇತುಪತಿಯ ಕಿವಿಗೆ ಬಿದ್ದಿದೆ. ಇದಕ್ಕೇ ತನ್ನದೇ ಆದ ಶೈಲಿಯಲ್ಲಿ ಸೇತುಪತಿ ಉತ್ತರ ನೀಡಿದ್ದಾರೆ. (ಏಜೆನ್ಸೀಸ್)
போயி வேற வேலை இருந்தா பாருங்கடா… pic.twitter.com/6tcwhsFxgT
— VijaySethupathi (@VijaySethuOffl) February 12, 2020