ಲಂಡನ್: ಭಾರತದಲ್ಲಿನ ಬ್ಯಾಂಕ್ಗಳಿಗೆ ಕೋಟ್ಯಂತರ ರೂಪಾಯಿ ಪಂಗನಾಮ ಹಾಕಿ ಲಂಡನ್ನಲ್ಲಿ ತಲೆ ಮರೆಸಿಕೊಂಡಿರುವ ಮದ್ಯದ ದೊರೆ ವಿಜಯ ಮಲ್ಯಗೆ ಮತ್ತೆ ಸಂಕಷ್ಟ ಎದುರಾಗಿದೆ.
ತಮ್ಮನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಈ ಹಿಂದೆ ಲಂಡನ್ ಕೋರ್ಟ್ ಹೊರಡಿಸುವ ಆದೇಶದ ವಿರುದ್ಧ ಸಲ್ಲಿಸಿದ್ದ ಮೇಲ್ಮನವಿಯನ್ನು ಲಂಡನ್ ಹೈಕೋರ್ಟ್ ವಜಾ ಮಾಡಿದೆ. ಲಾಕ್ಡೌನ್ ಇರುವ ಹಿನ್ನೆಲೆಯಲ್ಲಿ ಹಾಗೂ ಅರ್ಜಿದಾರರ (ಮಲ್ಯ) ಮೇಲಿರುವ ಆರೋಪಗಳು ಮೇಲ್ನೋಟಕ್ಕೆ ಸಾಬೀತಾಗಿರುವ ಕಾರಣದಿಂದ ಅರ್ಜಿಯನ್ನು ವಜಾ ಮಾಡಲಾಗುವುದು ಎಂದು ನ್ಯಾಯಮೂರ್ತಿ ಸ್ಟೆಫನ್ ಐರ್ವಿನ್ ನೇತೃತ್ವದ ಪೀಠ ಹೇಳಿದೆ.
ಈ ಆದೇಶದಿಂದ ಮಲ್ಯ ಇನ್ನು ಭಾರತಕ್ಕೆ ಮರಳಲೇಬೇಕಾದ ಅನಿವಾರ್ಯತೆ ಉಂಟಾಗಿದೆ.
ಕಿಂಗ್ಫಿಷರ್ ಏರ್ಲೈನ್ಸ್ಗೆ ಸಂಬಂಧಿಸಿದಂತೆ ಭಾರತದ ಬ್ಯಾಂಕ್ಗಳಿಂದ ಸುಮಾರು 9 ಸಾವಿರ ಕೋಟಿ ರೂಪಾಯಿ ಸಾಲ ಪಡೆದು ವಂಚನೆ ಮಾಡಿರುವ ಮಲ್ಯ, ಸದ್ಯ ಲಂಡನ್ನಲ್ಲಿ ನೆಲೆಸಿದ್ದಾರೆ. ಭಾರತ ಮತ್ತು ಲಂಡನ್ ದೇಶಗಳ ನಡುವೆ ಇವರಿಗೆ ಸಂಬಂಧಿಸಿದಂತೆ ಕೇಸುಗಳು ದಾಖಲಾಗಿದ್ದವು. ನಂತರ ಅವರನ್ನು ಭಾರತಕ್ಕೆ ಹಸ್ತಾಂತರಿಸಬೇಕು ಎಂದು ಲಂಡನ್ ಕೋರ್ಟ್ ಆದೇಶಿಸಿತ್ತು. ಈ ಆದೇಶವನ್ನು ಮಲ್ಯ ಈಗ ಪ್ರಶ್ನಿಸಿದ್ದರು.
‘ಈ ಹಿಂದೆ ‘ಲಂಡನ್ನ ಹಿರಿಯ ಜಿಲ್ಲಾ ನ್ಯಾಯಾಧೀಶರು ತಮ್ಮ ಆದೇಶದಲ್ಲಿ ಉಲ್ಲೇಖಿಸಿರುವ ಅಂಶಗಳಿಗೂ ಮತ್ತು ಭಾರತದ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯಗಳು ಮಾಡಿರುವ ಆರೋಪಗಳಿಗೂ ಸಾಮ್ಯತೆ ಇದೆ. ಅಷ್ಟೇ ಅಲ್ಲದೇ, ಜಿಲ್ಲಾ ನ್ಯಾಯಾಧೀಶರು ಇನ್ನೂ ಹೆಚ್ಚಿನ ರೀತಿಯಲ್ಲಿಯೇ ಆರೋಪಗಳ ಕುರಿತು ಉಲ್ಲೇಖಿಸಿದ್ದಾರೆ. ಈ ಕಾರಣಗಳಿಂದ, ಅರ್ಜಿಯನ್ನು ಪರಿಗಣಿಸಲಾಗದು ಎಂದು ಕೋರ್ಟ್ ಹೇಳಿದೆ. ಈ ಆದೇಶದ ಹಿನ್ನೆಲೆಯಲ್ಲಿ ಮಲ್ಯ ಅವರಿಗೆ ಸದ್ಯ ಭಾರತಕ್ಕೆ ಬರಲೇಬೇಕಾಗಿದೆ. (ಏಜೆನ್ಸೀಸ್)