ಕೊಪ್ಪಳ: ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ನಿಯಮಿತದ ಜಿಲ್ಲಾ ಕಾರ್ಯಪಾಲಕ ಅಭಿಯಂತರ ಝರಣಪ್ಪ ಎಂ.ಚಿಂಚೋಳಿಕರ್ ವಿರುದ್ಧ ಆರ್ಥಿಕ ಅವ್ಯವಹಾರ ಸಾಬೀತಾದ ಹಿನ್ನೆಲೆಯಲ್ಲಿ ಸೇವೆಯಿಂದ ವಜಾಗೊಳಿಸಿ ಕೆಆರ್ಐಡಿಎಲ್ ವ್ಯವಸ್ಥಾಪಕ ನಿರ್ದೇಶಕ ಬಸವರಾಜು ಬುಧವಾರ ಆದೇಶಿಸಿದ್ದಾರೆ.
ಮಾಜಿ ಸಚಿವ ಹಾಲಪ್ಪ ಆಚಾರ್ ಹೆಚ್ಚುವರಿ ಸುವರ್ಣ ಗ್ರಾಮ ಯೋಜನೆಗಳಲ್ಲಿ 2016&18ರಲ್ಲಿ ಅವ್ಯವಹಾರ ನಡೆದ ಬಗ್ಗೆ ದೂರು ಸಲ್ಲಿಸಿದ್ದರು. ವರದಿ ಪರಿಶೀಲಿಸದ ಅಧಿಕಾರಿಗಳು ಅಂದಿನ ಇಇ ಜೆ.ಎಂ.ಕೊರಬು ಮತತ್ಉ ಪ್ರಸ್ತುತ ಇಇ ಇರುವ ಝರಣಪ್ಪ ಎಂ.ಚಿಂಚೋಳಿಕರ್ಗೆ ನೋಟಿಸ್ ನೀಡಿದರೂ ಉತ್ತರಿಸಿರಲಿಲ್ಲ.
ತನಿಖಾ ಸಂಸ್ಥೆ ನೇಮಿಸಿ ಪರಿಶೀಲಿಸಿದಾಗ ಕೊರಬು ಅವಧಿಯಲ್ಲಿ 6.12 ಕೋಟಿ ರೂ. ಹಾಗೂ ಚಿಂಚೋಳಿಕರ್ ಅವಧಿಯಲ್ಲಿ 1.55 ಕೋಟಿ ರೂ. ಅವ್ಯವಹಾರ ಆಗಿದೆ ಎಂಬುದು ಬೆಳಕಿಗೆ ಬಂದಿದೆ. ಈ ಸಂಬಂಧ ತನಿಖಾ ವಿಚಾರಣೆಗೂ ಅಧಿಕಾರಿಗಳು ಹಾಜರಾಗಿಲ್ಲ.
ನಿವೃತ್ತ ಜಿಲ್ಲಾ ನ್ಯಾಯಾಧೀಶ ಬಸವರಾಜ ಎಸ್ ತಡಹಾಳ ನೇತೃತ್ವದಲ್ಲಿ ತನಿಖಾ ಆಯೋಗ ರಚಿಸಿ ವಿಚಾರಣೆ ನಡೆಸಲಾಗಿದೆ. ಇಲ್ಲಿಯೂ ಅಧಿಕಾರಿಗಳು ಲಿಖಿತ ಹೇಳಿಕೆ, ದಾಖಲೆ ಸಲ್ಲಿಸಿಲ್ಲ. ಬದಲಾಗಿ ಶಾಸಕರೂ ಸೂಚಿಸಿದ್ದಕ್ಕೆ ಕಾಮಗಾರಿ ನಡೆಸಲಾಗಿದೆ ಎಂದು ಸಬೂಬು ಹೇಳಿದ್ದಾರೆ.
2016-17ರಲ್ಲಿ ಮಂಜೂರಾದ 19,226 ಮೀಟರ್ ಸಿಸಿ ರಸ್ತೆ ಪೈಕಿ 14,500 ಮೀಟರ್ ನಿರ್ಮಿಸಿದ್ದು, 4725 ಮೀಟರ್ ಸುಳ್ಳು ಲೆಕ್ಕ ತೋರಿಸಲಾಗಿದೆ. 956 ಮೀ. ಚರಂಡಿಯಲ್ಲಿ 507 ಮೀಟರ್ ನಿರ್ಮಿಸಿ, 447 ಮೀಟರ್ ಕಾಮಗಾರಿ ನಡೆಸಿಲ್ಲ.
2017-18ರಲ್ಲಿ 8526 ಮೀಟರ್ ಸಿಸಿ ರಸ್ತೆಯಲ್ಲಿ 5844 ಮೀಟರ್ ನಿರ್ಮಿಸಲಾಗಿದೆ. ಬಾಕಿ 2681 ಮೀಟರ್ ಕಾಮಗಾರಿ ನಡೆದಿಲ್ಲ. 1572 ಮೀಟರ್ ಚರಂಡಿ ಪೈಕಿ ಕೇವಲ 571 ಮೀಟರ್ ನಿರ್ಮಿಸಿ 1001 ಮೀಟರ್ ಸುಳ್ಳು ಲೆಕ್ಕ ತೋರಿಸಲಾಗಿದೆ. ಈ ಬಗ್ಗೆ ವಿಚಾರಣೆಲ್ಲಿ ಸಾಬೀತಾಗಿದ್ದು, ಚಿಂಚೋಳಿಕರ್ ವಜಾಕ್ಕೆ ನ್ಯಾಯಾಧೀಶರು ಶೀಾರಸ್ಸು ಮಾಡಿದ್ದಾರೆ.
ಅದರಂತೆ ಕೆಆರ್ಐಡಿಎಲ್ ಕೊಪ್ಪಳ ವಿಭಾಗದ ಇಇ ಝರಣಪ್ಪ ಚಿಂಚೋಳಿಕರ್ನ್ನು ಸಂಸ್ಥೆಯಿಂದ ವಜಾಗೊಳಿಸಲಾಗಿದೆ. ಅಕ್ರಮ ಎಸಗಿರುವ 1,55,44,897ರೂ. ಮೊತ್ತವನ್ನು ಒಂದೇ ಕಂತಿನಲ್ಲಿ ಸಂಸ್ಥೆಗೆ ಜಮಾ ಮಾಡುವಂತೆ ಸೂಚಿಸಲಾಗಿದೆ. ತಪ್ಪಿದಲ್ಲಿ ನ್ಯಾಯಾಲಯದಲ್ಲಿ ದಾವೆ ಹೂಡುವುದಾಗಿ ಆದೇಶದಲ್ಲಿ ತಿಳಿಸಲಾಗಿದೆ.