ಹಾಸನ: ಸಕಲೇಶಪುರ ತಾಲೂಕಿನ ಹೆಗ್ಗೋವೆ ಗ್ರಾಮದಲ್ಲಿ ಸೋಮವಾರ ಮುಂಜಾನೆ ಕಾಡಾನೆಯೊಂದು ಮನೆ ಎದುರಿನ ದನದ ಕೊಟ್ಟಿಗೆ ಮೇಲೆ ದಾಳಿ ಮಾಡಿ ಆತಂಕ ಹುಟ್ಟುಹಾಕಿತ್ತು.
ಬೆಳಗ್ಗೆ 8 ಗಂಟೆ ಸಮಯದಲ್ಲಿ ಒಂಟಿ ಸಲಗ ಏಕಾಏಕಿ ಕೊಟ್ಟಿಗೆಗೆ ಹಣೆಯಿಂದ ಗುದ್ದಿದೆ. ಒಳಗೆ ಕಟ್ಟಿದ್ದ ಹಸುವಿನ ಮೇಲೆ ದಾಳಿ ಮಾಡುವ ಉದ್ದೇಶದಿಂದ ನುಗ್ಗಿ ಕೊಟ್ಟಿಗೆಯ ಚಾವಣಿಗೆ ಡಿಕ್ಕಿ ಹೊಡೆದು ನಂತರ ಅಲ್ಲಿಂದ ಕಾಲ್ಕಿತ್ತಿದೆ. ಹಾಲು ಕರೆಯುವ ಸಮಯದಲ್ಲಿ ಆನೆ ಬಂದಿದ್ದರೆ ಇನ್ನೂ ಹೆಚ್ಚಿನ ಅನಾಹುತ ಸಂಭವಿಸುತ್ತಿತ್ತು ಎಂದು ಮನೆ ಮಾಲೀಕರಾದ ಮಂಜುನಾಥ್ ಹಾಗೂ ನಾಗರಾಜ್ ತಮ್ಮ ಆತಂಕ ವ್ಯಕ್ತಪಡಿಸಿದರು.
ಆನೆ ದಾಳಿಯ ದೃಶ್ಯಾವಳಿಗಳನ್ನು ಅವರು ಮೊಬೈಲ್ ಕ್ಯಾಮರಾ ಬಳಸಿ ಸೆರೆ ಹಿಡಿದಿದ್ದು ವಿಡಿಯೋ ವೈರಲ್ ಆಗಿದೆ.