ಪಾಂಡವಪುರ: ರೈತ ಸಂಘಟನೆಗಳ ಹೋರಾಟದ ಫಲವಾಗಿ ಸರ್ಕಾರ ಭಾಗ್ಯಜ್ಯೋತಿ ಮತ್ತು ಕುಟೀರ ಜ್ಯೋತಿ ವಿದ್ಯುತ್ ಫಲಾನುಭವಿಗಳ ಬಾಕಿ ಮೊತ್ತವನ್ನು ಮನ್ನಾ ಮಾಡಿದೆ ರೈತಸಂಘ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ಹೇಳಿದರು.
ಭಾಗ್ಯಜ್ಯೋತಿ ಮತ್ತು ಕುಟೀರ ವಿದ್ಯುತ್ ಫಲಾನುಭವಿಗಳು ಬಾಕಿ ಉಳಿಸಿಕೊಂಡಿದ್ದ ಮೊತ್ತ ಪಾವತಿಸುವಂತೆ ನಿಗಮದ ಅಧಿಕಾರಿಗಳು ಒತ್ತಾಯಿಸಿ ವಿದ್ಯುತ್ ಸಂಪರ್ಕ ಕಡಿತಗೊಳಿಸುತ್ತಿದ್ದರು. ರೈತಸಂಘದ ಕಾರ್ಯಕರ್ತರು ನಿಗಮದ ಅಧಿಕಾರಿಗಳನ್ನು ತಡೆದು ಬಡವರ ಮನೆಗಳ ವಿದ್ಯುತ್ ಮರು ಸಂಪರ್ಕ ಕೊಡಿಸುವ ಕೆಲಸವನ್ನು ಮಾಡಿತ್ತು. ಸರ್ಕಾರ ಈ ಎರಡು ಯೋಜನೆಗಳ ಫಲಾನುಭವಿಗಳು ಉಳಿಸಿಕೊಂಡಿದ್ದ ಬಿಲ್ ಬಾಕಿ ಮನ್ನಾ ಮಾಡುವಂತೆ ಒತ್ತಾಯಿಸಿ 2021ರಲ್ಲಿ ರೈತ ಸಂಘಟನೆಗಳು ಬೆಂಗಳೂರು ಚಲೋ ಕರೆಕೊಟ್ಟು ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿವಾಸ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿದ್ದರು. ರೈತ ಸಂಘಟನೆಯ ನಿರಂತರ ಹೋರಾಟದ ಫಲ ಹಾಗೂ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಇಚ್ಚಾಸಕ್ತಿಯಿಂದ ಯೋಜನೆಯ ಬಾಕಿ ಮನ್ನಾ ಆಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬಡವರ ಮನೆಗಳಿಗೆ ಬೆಳಕು ನೀಡುವ ಈ ಎರಡು ಯೋಜನೆಗಳ ಬಾಕಿ ಮನ್ನಾ ಮಾಡಿರುವ ಸಿಎಂ ಸಿದ್ದರಾಮಯ್ಯ, ಸಚಿವ ಚಲುವರಾಯಸ್ವಾಮಿ ಹಾಗೂ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು. ಜತೆಗೆ ರಾಜ್ಯ ಸರ್ಕಾರ ರೈತರು ಬೆಳೆದ ಬೆಳೆಗಳಿಗೆ ಎಸ್ಎಪಿ, ಎಂಎಸ್ಪಿ ದರ ನಿಗದಿಪಡಿಸಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ರೈತಸಂಘ ಮುಖಂಡರಾದ ಎಣ್ಣೆಹೊಳೆಕೊಪ್ಪಲು ವೈ.ಪಿ.ಮಂಜು, ವೈ.ಜಿ.ರಘು ಇದ್ದರು.