ಬೆಂಗಳೂರು: ‘ಎ’ ಬಿಟ್ಟು ‘ಬಿ’ ಮತ್ತು ‘ಸಿ’ ದರ್ಜೆಯ ಯೂನಿವರ್ಸಿಟಿ ಮತ್ತು ಕಾಲೇಜುಗಳನ್ನು ಮುಚ್ಚಬೇಕೆಂದು ರಾಜ್ಯಪಾಲರಾದ ವಜುಭಾಯಿ ವಾಲಾ ಅವರು ಹೇಳಿದ್ದಾರೆ. ಆದರೆ, ‘ಬಿ’ ಮತ್ತು ‘ಸಿ’ ಜೀವನದ ಭಾಗವಾಗಿದೆ. ಹೀಗಾಗಿ ‘ಬಿ’ ಮತ್ತು ‘ಸಿ’ ದರ್ಜೆಯನ್ನು ‘ಎ’ ದರ್ಜೆಯನ್ನಾಗಿ ಪರಿವರ್ತನೆ ಆಗುವ ರೀತಿ ಕೆಲಸ ಮಾಡಬೇಕೆಂದು ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರು ತಿಳಿಸಿದರು.
ಮಂಗಳವಾರ ರಾಜಭವನದಲ್ಲಿ ಆಯೋಜಿಸಿದ ನ್ಯಾಕ್ನ ಬೆಳ್ಳಿ ಮಹೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಕನ್ನಡದಲ್ಲೇ ಭಾಷಣ ಆರಂಭಿಸಿದ ವೆಂಕಯ್ಯನಾಯ್ಡು ಅವರು. ಎಲ್ಲ ವಲಯದಲ್ಲೂ ಇರುವಂತೆ ಶಿಕ್ಷಣದಲ್ಲೂ ಖಾಸಗಿಕರಣ ಇರಬೇಕು ಎಂದು ಅಭಿಪ್ರಾಯಪಟ್ಟರು.
ನಾವು ಹಲವು ವಿಚಾರಗಳಲ್ಲಿ ಮುಂದೆ ಇದ್ದೀವಿ. ಆದರೆ, ಇಂದು ಕೆಲ ಸವಾಲುಗಳನ್ನು ಎದುರಿಸುತ್ತಿದ್ದೇವೆ. ಅದರ ಬಗ್ಗೆ ಚರ್ಚೆ ಮಾಡಬೇಕು ಎಂದು ಪರೋಕ್ಷವಾಗಿ ದೇಶದ ಜಿಡಿಪಿ ಮತ್ತು ನಿರುದ್ಯೋಗದ ಬಗ್ಗೆ ಪ್ರಸ್ತಾಪ ಮಾಡಿದರು.
ಕಸ್ತೂರಿ ರಂಗನ್ ವರದಿಗೆ ಮೆಚ್ಚುಗೆ ಸೂಚಿಸಿ, ಅದನ್ನು ರಾಜ್ಯ ಸರ್ಕಾರ ಜಾರಿ ಮಾಡುವ ಕೆಲಸ ಮಾಡಲಿ. ವಿದ್ಯಾರ್ಥಿಗಳು ಜವಾಬ್ದಾರಿ ಪ್ರಜೆಗಳಾಗಿ ಕಾಲೇಜಿನಿಂದ ಹೊರ ಬರಬೇಕು. ಫಿಟ್ನೆಸ್ ಇಂಡಿಯಾ ಪಿಎಂ ಮೋದಿ ಮತ್ತು ಸಿಎಂ ಬಿಸ್ವೈಗೆ ಮಾತ್ರ ಸಿಮೀತವಲ್ಲ. ದೇಶದ ಎಲ್ಲರಿಗೂ ಅನ್ವಯ ಆಗುತ್ತದೆ ಎಂದರು. ಇದೇ ವೇಳೆ ರಾಗಿ ಮುದ್ದೆ ಮತ್ತು ನಾಟಿಕೋಳಿ ಸಾಂಬಾರು ಬಗ್ಗೆ ಪ್ರಸ್ತಾಪ ಮಾಡಿದ ವೆಂಕಯ್ಯನಾಯ್ಡು ಅವರು ಒಂದೊಂದು ಭಾಗದ್ದು ಒಂದೊಂದು ವಿಭಿನ್ನತೆ ಇರುತ್ತದೆ. ಫೈವ್ಸ್ಟಾರ್ಗಿಂತಲೂ ಪುಟ್ಪಾಥ್ ಮೇಲೆ ಮಾಡುವ ತಿಂಡಿ ರುಚಿ ಆಗಿ ಇರುತ್ತದೆ ಎಂದು ನೆನೆದರು.
ಕಾಶ್ಮೀರದಲ್ಲಿ ಏನೋ ಆದರೆ ಕರ್ನಾಟಕದಲ್ಲಿ ಸಮಸ್ಯೆ. ಕರ್ನಾಟಕದಲ್ಲಿ ಏನೋ ಆದರೆ ಕೇರಳದಲ್ಲಿ ಸಮಸ್ಯೆ. ಇಂತಹ ಶಿಕ್ಷಣ ಕೊಡುವುದು ಬೇಡ. ಪರಿಸರ ಮತ್ತು ಸಂಸ್ಕೃತಿ ಹೊಂದಾಣಿಕೆ ಶಿಕ್ಷಣ ಕೊಡಬೇಕೆಂದು ಹೇಳಿ ಸಣ್ಣ ಘಟನೆಯನ್ನು ಮೆಲಕು ಹಾಕಿ, ನಾನು ಇಂಗ್ಲೆಂಡ್ಗೆ ಹೋಗಿದ್ದೆ ಚಾಲಕನೊಬ್ಬ ಇಂದು ಸೂರ್ಯನ ದಿನ ಸರ್ ಅಂದ. ನಾನು ಏಕೆ ಎಂದು ಪ್ರಶ್ನಿಸಿದೆ. ಅದಕ್ಕೆ ಸೂರ್ಯ ಕಾಣಿಸ್ತಿದ್ದಾರೆ ಅಂದ. ಅಯ್ಯೋ ಮಾರಾಯಾ ಭಾರತದಲ್ಲಿ 365 ದಿನವೂ ಸೂರ್ಯ ಕಾಣಿಸ್ತಾನೆ ಅಂದೆ. ಅದಕ್ಕೆ ಆತ ಸರ್ ನಾವು ಸನ್ ಬಗ್ಗೆ ಕಾಳಜಿ ತೆಗೆದುಕೊಳ್ಳುತ್ತಿಲ್ಲ. ಬರೀ ನಮ್ಮ ಸನ್ ಬಗ್ಗೆ ಮಾತ್ರ ಕಾಳಜಿ ತೆಗೆದುಕೊಳ್ಳುತ್ತಿದ್ದೇವೆ ಎಂದು ಚಾಲಕನೊಬ್ಬ ಹೇಳಿದ್ದು ನೋಡಿ ನನಗೆ ಅಚ್ಚರಿಯಾಯಿತು ಎಂದರು.
ನಮ್ಮನ್ನು ಒಂದು ಭಾಷೆಗೆ ಸೀಮಿತ ಮಾಡಿಕೊಳ್ಳುವುದು ಬೇಡ. ಆದರೆ, ಪ್ರಾಥಮಿಕ ಶಿಕ್ಷಣ ಮಾತೃ ಭಾಷೆಯಲ್ಲಿ ಇರಬೇಕು. ವಿವಿಗಳ ಒಳಗೆ ಪಾಲಿಟಿಕ್ಸ್ ಬೇಡ. ಅವು ದೇವಸ್ಥಾನ ಇದ್ದಂತೆ. ಚಪ್ಪಲಿ ಹೊರಗೆ ಬಿಟ್ಟು ಕೈ ಮುಗಿದು ಮತ್ತೆ ವಾಪಸ್ ಬಂದು ನಿನ್ನ ಚಪ್ಪಲಿ ಹಾಕಿಕೊಂಡು ಹೋಗಬೇಕು. ಯುನಿವರ್ಸಿಟಿ ಶಿಕ್ಷಣ ಕೊಡುವುದಷ್ಟೇ ಅಲ್ಲ. ನಿನ್ನ ಭವಿಷ್ಯ ನಿರ್ಧಾರ ಮಾಡುತ್ತದೆ ಎಂದು ಪರೋಕ್ಷವಾಗಿ ಜೆಎಸ್ಯು ವಿವಿ ಬಗ್ಗೆ ಪ್ರಸ್ತಾಪ ಮಾಡಿದರು.