ಉಳ್ಳಾಲ: ಕಡಲ್ಕೊರೆತ ಪ್ರದೇಶ ಸೋಮೇಶ್ವರದ ಉಚ್ಚಿಲ, ಬಟ್ಟಪ್ಪಾಡಿಗೆ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಲಿ ಶನಿವಾರ ಭೇಟಿ ನೀಡಿ ಪರಿಶೀಲಿಸಿದರು.
ಕರಾವಳಿ ಭಾಗದಲ್ಲಿ ಕಡಲ್ಕೊರೆತ ಸಮಸ್ಯೆ ಹೊಸತಲ್ಲ. ಕಡಲ್ಕೊರೆತ ತಡೆ ನಿಟ್ಟಿನಲ್ಲಿ ಎನ್ಡಿಆರ್ಎಫ್ ನಿಧಿಯಿಂದ ತುರ್ತು ಕಾಮಗಾರಿಗೆ ಹಣ ಬಿಡುಗಡೆಗೆ ಅವಕಾಶವಿದೆ. ಆದರೂ ಸರ್ಕಾರ ಈ ನಿಧಿ ಖರ್ಚು ಮಾಡದೆ ಸುಮ್ಮನೆ ಕುಳಿತಿದೆ. ಕಾಂಗ್ರೆಸ್ ಸರ್ಕಾರವಿದ್ದಾಗ ಅಳಿವೆಬಾಗಿಲು ಸಹಿತ ಕಡಲ್ಕೊರೆತ ಪ್ರದೇಶಗಳಲ್ಲಿ ಕಾಮಗಾರಿ ನಡೆಸಲಾಗಿದೆ. ಶಾಶ್ವತ ಕಾಮಗಾರಿ ನಡೆದರೂ ಪ್ರತಿವರ್ಷ ನಿರ್ವಹಣೆ ಮಾಡಬೇಕು. ಆದರೆ ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರ್ಕಾರ ಈ ವಿಚಾರದಲ್ಲಿ ಅಸಡ್ಡೆ ತೋರಿ ಕಳೆದ ಮೂರು ವರ್ಷಗಳಿಂದಲೂ ಉಚ್ಚಿಲ, ಬಟ್ಟಪ್ಪಾಡಿ ಪ್ರದೇಶಗಳನ್ನು ಕಡೆಗಣಿಸುತ್ತಾ ಬಂದಿದೆ. ನಾನು ಮತ್ತು ಶಾಸಕ ಖಾದರ್ ತಕ್ಷಣವೇ ಮುಖ್ಯಮಂತ್ರಿ ಭೇಟಿ ಮಾಡಿ ತುರ್ತು, ಮಾಧ್ಯಮಿಕ, ಶಾಶ್ವತ ಕಾಮಗಾರಿ ನಡೆಸುವ ಬಗ್ಗೆ ಮಾತುಕತೆ ನಡೆಸಲಿದ್ದೇವೆ ಎಂದು ತಿಳಿಸಿದರು.
ಶಾಸಕ ಯು.ಟಿ. ಖಾದರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ್, ಉಪಾಧ್ಯಕ್ಷ ಸುರೇಶ್ ಭಟ್ನಗರ, ಸುರೇಖಾ ಚಂದ್ರಹಾಸ್ ಇನ್ನಿತರರು ಇದ್ದರು.