ಶಿವಮೊಗ್ಗ: ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಭಾವಚಿತ್ರ ತೆಗಿಸಿದ ಕಿಡಿಗೇಡಿಯನ್ನು ಬಂಧಿಸಿದ್ದು ಇನ್ಮುಂದೆ ಸ್ವಾತಂತ್ರ್ಯ ಸೇನಾನಿಗಳಿಗೆ ಅವಮಾನ ಮಾಡದಂತಹ ಶಿಕ್ಷೆಯನ್ನೇ ಆತನಿಗೆ ನೀಡಬೇಕಿದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರೆಂದ್ಲಾಜೆ ಆಗ್ರಹಿಸಿದರು.
ಶಿಕಾರಿಪುರ ತಾಲೂಕಿನ ಈಸೂರಿನಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೀರ ಸಾವರ್ಕರ್ ಒಬ್ಬ ಸ್ವಾತಂತ್ರ್ಯಹೋರಾಟಗಾರ. ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿ ಏಳು ಬಾರಿ ಜೈಲಿಗೂ ಹೋಗಿದ್ದರು. ಅಂಡಮಾನ್ನ ಸೆಲ್ಯುಲರ್ ಜೈಲು ಅವರ ನೋವಿನ ಒಂದೊಂದು ಕಥೆಯನ್ನೂ ಹೇಳುತ್ತಿದೆ ಎಂದರು.
ಹೋರಾಟ ಮಾಡಿದ್ದರು ಎಂಬ ಕಾರಣಕ್ಕೆ ಅವರ ಆಸ್ತಿ-ಪಾಸ್ತಿಯನ್ನೂ ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ. ಸ್ವಾತಂತ್ರ್ಯ ಹೋರಾಟಗಾರರ ಇತಿಹಾಸ ತಿಳಿದ ಯಾವೊಬ್ಬ ದೇಶಪ್ರೇಮಿಯೂ ಸಾವರ್ಕರ್ಗೆ ವಿರೋಧ ಮಾಡುವುದಿಲ್ಲ. ಆದರೆ ದೇಶದ ಚರಿತ್ರೆಯನ್ನು ಓದದೇ ಇರುವ ಕಿಡಿಗೇಡಿಗಳು ಮಾತ್ರ ಇಂತಹ ಕೃತ್ಯಗಳನ್ನು ಮಾಡುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.