ಬೆಂಗಳೂರು: ದಿಗಂತ್ ಮತ್ತು ಹರಿಪ್ರಿಯಾ ಮೊದಲ ಬಾರಿಗೆ ಜತೆಯಾಗಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಸೆಪ್ಟೆಂಬರ್ನಲ್ಲೇ ಕೇಳಿಬಂದಿತ್ತಾದರೂ, ಚಿತ್ರ ಶುರುವಾಗಿರಲಿಲ್ಲ. ಈಗ ಆ ಚಿತ್ರಕ್ಕೆ ಶನಿವಾರ ಅಧಿಕೃತವಾಗಿ ಚಾಲನೆ ಸಿಕ್ಕಿದೆ. ಮಹಾಲಕ್ಷ್ಮೀ ಲೇಔಟ್ನ ಪಂಚಮುಖಿ ಗಣಪತಿ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತವಾಗಿದ್ದು, ಮೊದಲ ದೃಶ್ಯಕ್ಕೆ ಗಣೇಶ್ ಕ್ಲಾಪ್ ಮಾಡಿ, ಚಿತ್ರತಂಡದವರಿಗೆ ಶುಭ ಹಾರೈಸಿದ್ದಾರೆ.
ಇದನ್ನೂ ಓದಿ: ಮುಂದಿನ ವರ್ಷ ಸರ್ಕಸ್ ಮಾಡ್ತಾರಂತೆ ರಣವೀರ್ ಸಿಂಗ್- ರೋಹಿತ್ ಶೆಟ್ಟಿ
ಅಂದಹಾಗೆ, ಇದು ಕಳೆದ ವರ್ಷ ತೆಲುಗಿನಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ಆದ ‘ಎವರು’ ಚಿತ್ರದ ಕನ್ನಡ ರೀಮೇಕ್. ಮೂಲ ಚಿತ್ರದಲ್ಲಿ ಅಡವಿ ಶೇಷ್ ಮತ್ತು ರೆಜಿನಾ ಕೆಸಾಂಡ್ರಾ ನಟಿಸಿದ್ದರು. ಈಗ ಕನ್ನಡ ರೀಮೇಕ್ನಲ್ಲಿ ದಿಗಂತ್ ಮತ್ತು ಹರಿಪ್ರಿಯಾ ನಟಿಸುತ್ತಿದ್ದಾರೆ. ಈ ಮೊದಲು ಅವರಿಬ್ಬರೂ ಜತೆಯಾಗಿ ನಟಿಸುವುದಕ್ಕೆ ಒಂದಿಷ್ಟು ಅವಕಾಶಗಳು ಇತ್ತಾದರೂ, ಕಾರಣಾಂತರಗಳಿಂದ ಜತೆಗೆ ನಟಿಸುವುದಕ್ಕೆ ಸಾಧ್ಯವಾಗಿರಲಿಲ್ಲ. ಈಗ ‘ಎವರು’ ರೀಮೇಕ್ ಮೂಲಕ ಅದು ಸಾಧ್ಯವಾಗಿದೆ.
ಮೊದಲಿಗೆ, ಈ ಚಿತ್ರದಲ್ಲಿ ದಿಗಂತ್ ಮತ್ತು ಹರಿಪ್ರಿಯಾ ಜತೆಗೆ ನಟ ಪ್ರಭು ಮುಂಡ್ಕೂರ್ ಸಹ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಎಂಬ ಸುದ್ದಿ ಇತ್ತು. ಆದರೆ, ಇದೀಗ ಪ್ರಭು ಜಾಗಕ್ಕೆ ವಸಿಷ್ಠ ಸಿಂಹ ಬಂದಿದ್ದಾರೆ. ವಸಿಷ್ಠ ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದು, ಅವರ ಪಾತ್ರವು ಚಿತ್ರದ ಹೈಲೈಟ್ಗಳಲ್ಲೊಂದು ಎಂದು ಹೇಳಲಾಗುತ್ತಿದೆ.
ಈ ಚಿತ್ರಕ್ಕೆ ಸದ್ಯಕ್ಕೆ ಹೆಸರಿಟ್ಟಿಲ್ಲ. ‘ಪ್ರೊಡಕ್ಷನ್ ನಂಬರ್ ಒನ್’ ಹೆಸರಿನಲ್ಲಿ ಪ್ರಾರಂಭವಾಗಿರುವ ಈ ಚಿತ್ರವನ್ನು ಅಶೋಕ್ ತೇಜ ನಿರ್ದೇಶನ ಮಾಡುತ್ತಿದ್ದಾರೆ. ವಸಿಷ್ಠ ಅಭಿನಯದ ಮೊದಲ ತೆಲುಗು ಚಿತ್ರ ‘ಓದೆಲ್ಲಾ ರೈಲ್ವೇ ಸ್ಟೇಷನ್’ ನಿರ್ದೇಶಿಸಿದವರು ಇದೇ ಅಶೋಕ್ ತೇಜ. ಈಗ ಈ ಚಿತ್ರವನ್ನು ನಿರ್ದೇಶಿಸುವ ಮೂಲಕ ಮೊದಲ ಬಾರಿಗೆ ಕನ್ನಡಕ್ಕೆ ಬರುತ್ತಿದ್ದಾರೆ. ಮೂಲ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದ ಶ್ರೀಚರಣ್ ಪಾಕಳ ಈ ಚಿತ್ರಕ್ಕೂ ಸಂಗೀತ ಸಂಯೋಜಿಸುತ್ತಿದ್ದಾರೆ.
ಇದನ್ನೂ ಓದಿ: ಕ್ಯಾಮರಾ ಬಗ್ಗೆ ನಟ ಗಣೇಶ್ ಭಾವುಕ ಮಾತು; ತ್ರಿಬಲ್ ರೈಡಿಂಗ್ ಶೂಟಿಂಗ್ ಶುರು
ಅಂದಹಾಗೆ, ‘ಎವರು’ ಚಿತ್ರವು ಸ್ಪಾನಿಶ್ ಚಿತ್ರ ‘ದಿ ಇನ್ವಿಸಿಬಲ್ ಗೆಸ್ಟ್’ನ ರೀಮೇಕ್ ಆಗಿದ್ದು, ಇದೇ ಚಿತ್ರವನ್ನು ಆಧರಿಸಿ ಹಿಂದಿಯಲ್ಲಿ ‘ಬದ್ಲಾ’ ಎಂಬ ಚಿತ್ರವನ್ನೂ ನಿರ್ಮಿಸಲಾಗಿದೆ.
‘ನಡು ರಸ್ತೆಯಲ್ಲಿ ಕಂಗಾಳನ್ನು ಅತ್ಯಾಚಾರ ಮಾಡಬೇಕು’ ಎಂದ ವಕೀಲ; ಮುಂದೆ ನಡೆದಿದ್ದೇ ಬೇರೆ!!