ಮುಂಬೈ: ಮಾವೋವಾದಿ ಹಿತೈಷಿ ಕವಿ-ಆ್ಯಕ್ಟಿವಿಸ್ಟ್ ವರವರ ರಾವ್ ಅವರನ್ನು ಬಾಂಬೆ ಹೈಕೋರ್ಟ್ ನಿರ್ದೇಶನಾನುಸಾರ ಜೈಲಿನಿಂದ ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ ಎಂದು ಜೈಲು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ವರವರ ರಾವ್ ಅವರನ್ನು ಎಲ್ಗಾರ್ ಪರಿಷದ್- ಮಾವೋವಾದಿ ಲಿಂಕ್ ಕಾರಣಕ್ಕೆ ಬಂಧಿಸಿ ರಾಯಗಡ ಜಿಲ್ಲೆಯ ತಾಲೋಜ ಜೈಲಿನಲ್ಲಿ ಇರಿಸಲಾಗಿತ್ತು.
ಬಾಂಬೆ ಹೈಕೋರ್ಟ್ ನಿರ್ದೇಶನಾನುಸಾರ ವರವರ ರಾವ್ ಅವರನ್ನು ಬುಧವಾರ ರಾತ್ರಿಯೇ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. 80 ವರ್ಷದ ಮಾವೋವಾದಿ ಹಿತೈಷಿ ವರವರ ರಾವ್ ಅವರನ್ನು ಮುಂಬೈನ ನಾನಾವತಿ ಆಸ್ಪತ್ರೆಯಲ್ಲಿ ಹದಿನೈದು ದಿನಗಳ ಕಾಲ ಚಿಕಿತ್ಸೆಗೆ ದಾಖಲಿಸಲಾಗಿದೆ. ರಾವ್ ಬಹುತೇಕ ಮರಣಶಯ್ಯೆಯಲ್ಲಿದ್ದಾರೆ ಎಂದು ಅವರ ಪರ ವಕೀಲರು ಹೈಕೋರ್ಟ್ಗೆ ತಿಳಿಸಿದ್ದರು. ಇದನ್ನು ಆಧರಿಸಿ ಕೋರ್ಟ್ ಈ ನಿರ್ದೇಶನ ನೀಡಿದೆ.
ಇದನ್ನೂ ಓದಿ: ಮದ್ವೆಯಾಗಲು ‘ಎಸ್’ ಹುಡುಗೀನ್ನ ಹುಡುಕುತ್ತಿದ್ದಾನೀತ- ಮೂರು ಹೆಂಡ್ತಿಯರೂ ನೀಡ್ತಿದ್ದಾರೆ ಸಾಥ್!
ಆಸ್ಪತ್ರೆಯಿಂದ ವರವರ ರಾವ್ ಅವರನ್ನು ಕೋರ್ಟ್ ಅನುಮತಿ ಇಲ್ಲದೇ ಡಿಸ್ಚಾರ್ಜ್ ಮಾಡಿಸುವಂತಿಲ್ಲ. ಆಸ್ಪತ್ರೆಯಲ್ಲಿ ವರವರ ರಾವ್ ಅವರ ಕುಟುಂಬ ಸದಸ್ಯರ ಭೇಟಿಗೆ ಅವಕಾಶ ನೀಡಬೇಕು ಎಂದು ನ್ಯಾಯಮೂರ್ತಿ ಎಸ್.ಎಸ್.ಶಿಂಧೆ ಮತ್ತು ಮಾಧವ ಜಾಮ್ದಾರ್ ಅವರನ್ನು ಒಳಗೊಂಡ ನ್ಯಾಯಪೀಠ ಜೈಲು ಅಧಿಕಾರಿಗಳಿಗೆ ಸೂಚಿಸಿದೆ. . ಮುಂದಿನ ವಿಚಾರಣೆ ಡಿಸೆಂಬರ್ 3ರಂದು ನಡೆಸುವುದಾಗಿ ನ್ಯಾಯಪೀಠ ತಿಳಿಸಿದೆ. (ಏಜೆನ್ಸೀಸ್)
ಗ್ರಾಮ ಪಂಚಾಯಿತಿಯೇ ಆಯ್ತು ಬೀಗರ ಮನೆ! ಕಚೇರಿಯನ್ನೇ ಬಿಟ್ಟುಕೊಟ್ಟ ಪಿಡಿಒ…