ಬೆಂಗಳೂರು: ಇಲ್ಲಿವರೆಗೂ ಪರಿಶಿಷ್ಟ ವರ್ಗಗಳಿಗೆ ಪ್ರತ್ಯೇಕ ಸಚಿವಾಲಯ ಇರಲಿಲ್ಲ, ಇದೀಗ ಪ್ರತ್ಯೇಕ ಸಚಿವಾಲಯ ರಚನೆ ಮಾಡಲಾಗಿದೆ. ಇದರಿಂದ ಪರಿಶಿಷ್ಟ ವರ್ಗಗಳ ಜನರ ಅಭಿವೃದ್ಧಿಗೆ ಅನುಕೂಲ ಸಾಧ್ಯವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ವಿಧಾನಸೌಧದಲ್ಲಿ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಈ ವಿಷಯ ಪ್ರಕಟಿಸಿದರು.
ಶುಕ್ರವಾರ ರಾತ್ರಿ ಅಧಿಕಾರಿಗಳನ್ನು ಕರೆಸಿಕೊಂಡಿದ್ದ ಸಿಎಂ, ವಾಲ್ಮೀಕಿ ಜಯಂತಿಯಂದೇ ಸಚಿವಾಲಯಕ್ಕೆ ಚಾಲನೆ ಸಿಗಬೇಕು, ಕಚೇರಿಯೂ ಉದ್ಘಾಟನೆಯಾಗಬೇಕು ಎಂದು ಸೂಚಿಸಿದ್ದರು. ಆ ಪ್ರಕಾರ ವಿಕಾಸಸೌಧದ 2 ನೇ ಮಹಡಿಯ ಕೊಠಡಿ ಸಂಖ್ಯೆ -228 ರಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ನೂತನ ಪ್ರತ್ಯೇಕ ಸಚಿವಾಲಯ ಸಿದ್ಧಗೊಂಡಿದೆ.
ಇನ್ನು ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ,
2013ರಲ್ಲಿ ಎಸ್ಸಿಪಿ ಟಿಎಸ್ಪಿ ಕಾಯ್ದೆ ಮಾಡಿದೆವು. ಅಲ್ಲಿಂದೀಚೆಗೆ ಪರಿಶಿಷ್ಟ ಜಾತಿ ಪಂಗಡಕ್ಕೆ ಜನ ಸಂಖ್ಯೆಗೆ ಅನುಗುಣವಾಗಿ ಹಣ ಖರ್ಚು ಮಾಡಲಾಗುತ್ತಿದೆ. ಇದನ್ನು ಮಾಡಿದ್ದು ನಮ್ಮ ಸರ್ಕಾರ ಎಂದರು.
ಈ ಕಾಯ್ದೆ ಜಾರಿಗೆ ಬರುವ ಮುನ್ನ ಹಿಂದೆ ಈ ಸಮುದಾಯಗಳಿಗೆ 6-7 ಸಾವಿರ ರೂ. ವರೆಗೆ ಖರ್ಚು ಮಾಡಲಾಗುತ್ತಿತ್ತು. ನಾವು ಅಧಿಕಾರ ಬಿಡುವಾಗ ಮೂವತ್ತು ಸಾವಿರ ಕೋಟಿ ಖರ್ಚು ಮಾಡಲಾಯಿತು. ಆದರೆ ಹಿಂದಿನ ಸರ್ಕಾರ ಖರ್ಚು ಮಾಡಲೇ ಇಲ್ಲ. ಕುಮಾರ ಸ್ವಾಮಿ, ಯಡಿಯೂರಪ್ಪ, ಬೊಮ್ಮಾಯಿ ಅಧಿಕಾರ ನಡೆಸಿದರು. ನಮ್ಮದೇ ಸರ್ಕಾರ ಇದ್ದಿದ್ದರೆ ಇನ್ನಷ್ಟು ಹೆಚ್ಚಾಗುತ್ತಿತ್ತು ಎಂದರು.
ಕಾರ್ಯಕ್ರಮದಲ್ಲಿ ರಾಜನಹಳ್ಳಿ ಗುರುಪೀಠದ ಶ್ರೀ ವಾಲ್ಮೀಕಿ ಪ್ರಸಂನಾನಂದಪುರಿ ಸ್ವಾಮೀಜಿ, ಸಚಿವ ಕೆ.ಎನ್.ರಾಜಣ್ಣ, ನಾಗೇಂದ್ರ, ಸತೀಶ್ ಜಾರಕಿಹೊಳಿ, ಮಾಜಿ ಸಚಿವ ಆಂಜನೇಯ ಹಾಗೂ ವಾಲ್ಮೀಕಿ ಸಮಾಜದ ಮುಖಂಡರು ಉಪಸ್ಥಿತರಿದ್ದರು.