ಬೆಂಗಳೂರು: ಹಿರಿಯ ಕಥೆಗಾರ ಮಹಾಬಲಮೂರ್ತಿ ಕೊಡ್ಲೆಕೆರೆ ಅವರ ಜನಪ್ರಿಯ ಕಥೆಗಳಲ್ಲೊಂದಾದ ‘ವೈಶಂಪಾಯನ ತೀರ’ವನ್ನು ಮಲೆನಾಡಿನ ಸಾಂಸ್ಕೃತಿಕ ಸಂಘಟಕ ರಮೇಶ್ ಬೇಗಾರ್ ಚಿತ್ರ ಮಾಡುತ್ತಿದ್ದಾರೆ ಎಂಬ ಸುದ್ದಿ ಕೆಲವು ತಿಂಗಳ ಹಿಂದೆ ಕೇಳಿ ಬಂದಿತ್ತು. ಈಗ ಚಿತ್ರ ಮುಗಿದಿರುವುದಷ್ಟೇ ಅಲ್ಲ, ಜನವರಿ 06ಕ್ಕೆ ಬಿಡುಗಡೆಯಾಗಲಿದೆ.
ಇದನ್ನೂ ಓದಿ: ‘ಥಗ್ಸ್ ಆಫ್ ರಾಮಘಡ’ ಚಿತ್ರತಂಡಕ್ಕೆ ‘ಡಾಲಿ’ ಧನಂಜಯ್ ಸಾಥ್ …
ಸ್ವರಸಂಗಮ ಎಂಟರ್ಟೈನ್ಮೆಂಟ್ ಬ್ಯಾನರ್ನಲ್ಲಿ ಆರ್. ಸುರೇಶಬಾಬು ನಿರ್ಮಿಸಿರುವ ‘ವೈಶಂಪಾಯನ ತೀರ’ ಚಿತ್ರವನ್ನು ಇತ್ತೀಚೆಗೆ ವೀಕ್ಷಿಸಿರುವ ಸೆನ್ಸಾರ್ ಮಂಡಳಿಯು ಯಾವುದೇ ಕಟ್ ಅಥವಾ ಮ್ಯೂಟ್ಗಳಿಲ್ಲದೆ ‘ಯು’ ಪ್ರಮಾಣಪತ್ರ ನೀಡಿದೆ.
ಈ ಸಿನಿಮಾದಲ್ಲಿ ಯಕ್ಷಗಾನದ ಹಿನ್ನೆಲೆಯಲ್ಲಿ ಪ್ರಕೃತಿ ಮತ್ತು ಪುರುಷನ ಸಂಬಂಧವನ್ನು ಕುತೂಹಲಕರ ಧಾಟಿಯಲ್ಲಿ ನಿರೂಪಿಸಲಾಗಿದೆ. ಸಂಪೂರ್ಣವಾಗಿ ಮಲೆನಾಡ ಭಾಷೆ, ಜನಜೀವನ ಮತ್ತು ಸಾಂಸ್ಕೃತಿಕ ಹಿನ್ನೆಲೆಯನ್ನು ಈ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ಬಹುತೇಕ ಶೃಂಗೇರಿ ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದ್ದು, ಅಲ್ಲಿನ ಹತ್ತಾರು ರಂಗಕಲಾವಿದರು ಈ ಚಿತ್ರಕ್ಕಾಗಿ ಬಣ್ಣ ಹಚ್ಚಿದ್ದಾರೆ.
ಪ್ರಮೋದ್ ಶೆಟ್ಟಿ, ವೈಜಯಂತಿ ಅಡಿಗ, ರಮೇಶ್ ಭಟ್, ರಮೇಶ್ ಪಂಡಿತ್, ಬಾಬು ಹಿರಣ್ಣಯ್ಯ, ಶೃಂಗೇರಿ ರಾಮಣ್ಣ, ಗುರುರಾಜ ಹೊಸಕೋಟೆ ಮುಂತಾದವರು ಅಭಿನಯಿಸಿರುವ ಈ ಚಿತ್ರದಲ್ಲಿ ರಂಗಭೂಮಿ ಹಾಸ್ಯ ಕಲಾವಿದರಾದ ಕುಂದಾಪುರದ ಕುಳ್ಳಪ್ಪು ಸಹೋದರರಾದ ಸತೀಶ್ ಪೈ ಮತ್ತು ಸಂತೋಷ್ ಪೈ ಸಹ ನಟಿಸಿದ್ದಾರೆ.
ಇದನ್ನೂ ಓದಿ: 6 ರಥ, 13 ದಿನ, 7000 ಕಿಮೀ … ವಿರಾಗಿ ಶ್ರೀ ಕುಮಾರೇಶ್ವರ ರಥಯಾತ್ರೆಗೆ 20ಕ್ಕೆ ಚಾಲನೆ
‘ವೈಶಂಪಾಯನ ತೀರ’ ಚಿತ್ರಕ್ಕೆ ಶ್ರೀನಿಧಿ ಕೊಪ್ಪ ಸಂಗೀತ ಮತ್ತು ಶಿಶಿರ ಛಾಯಾಗ್ರಹಣವಿದೆ.